ಮಂಗಳೂರಿನಲ್ಲಿ ಸಂತ ಆಂತೋನಿ ಪುಣ್ಯ ಅವಶೇಷಗಳ ಹಬ್ಬದ ಭವ್ಯ ಆಚರಣೆ
ನಮ್ಮ ಮಾತುಗಳು ಇತರರಿಗೆ ನೋವು ನೀಡುವ ಬದಲು ಭರವಸೆ ಮತ್ತು ಸಾಂತ್ವನ ನೀಡುವಂತಿರಲಿ – ನಿವೃತ್ತ ಆರ್ಚ್ ಬಿಷಪ್ ಡಾ| ಬರ್ನಾರ್ಡ್ ಮೊರಾಸ್

ಮಂಗಳೂರು ಧರ್ಮಕ್ಷೇತ್ರಕ್ಕೆ ಒಳಪಟ್ಟ ಜೆಪ್ಪುವಿನ ಸಂತ ಆಂತೋನಿ ಆಶ್ರಮ ಮತ್ತು ಮಿಲಾಗ್ರಿಸ್ ಪುಣ್ಯಕ್ಷೇತ್ರದಲ್ಲಿ ಪಾದುವಾ ಸಂತ ಆಂತೋನಿ ಅವರ ಪುಣ್ಯ ಅವಶೇಷಗಳ ಹಬ್ಬವನ್ನು ಫೆಬ್ರವರಿ 15ರಂದು ಭಾನುವಾರ ಅತ್ಯಂತ ಶ್ರದ್ಧಾ-ಭಕ್ತಿಯಿಂದ ಆಚರಿಸಲಾಯಿತು. “ಜೀವದ ಮಾತುಗಳನ್ನಾಡಿ” ಎಂಬ ಧ್ಯೇಯವಾಕ್ಯದೊಂದಿಗೆ ನಡೆದ ಈ ಸಂಭ್ರಮದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.










ಸಂದೇಶ:
ಸಂಜೆ ಮಿಲಾಗ್ರಿಸ್ ಮೈದಾನದಲ್ಲಿ ನಡೆದ ಪ್ರಧಾನ ದಿವ್ಯ ಬಲಿಪೂಜೆಯ ನೇತೃತ್ವ ವಹಿಸಿದ್ದ ಬೆಂಗಳೂರು ಮಹಾ ಧರ್ಮಕ್ಷೇತ್ರದ ನಿವೃತ್ತ ಆರ್ಚ್ಬಿಷಪ್ ಪರಮ ಪೂಜ್ಯ ಡಾ| ಬರ್ನಾರ್ಡ್ ಮೊರಾಸ್ ಅವರು ಪ್ರವಚನ ನೀಡುತ್ತಾ, “ಸಂತ ಆಂತೋನಿಯವರ ನಾಲಿಗೆ ಶತಮಾನಗಳ ನಂತರವೂ ಕೆಡದೆ ಉಳಿದಿರುವುದು ಅವರು ಯಾವಾಗಲೂ ಸತ್ಯವನ್ನೇ ನುಡಿಯುತ್ತಿದ್ದರು ಎಂಬುದಕ್ಕೆ ಸಾಕ್ಷಿ. ನಮ್ಮ ಮಾತುಗಳು ಇತರರಿಗೆ ನೋವು ನೀಡುವ ಬದಲು ಭರವಸೆ ಮತ್ತು ಸಾಂತ್ವನ ನೀಡುವಂತಿರಲಿ” ಎಂದು ಕರೆ ನೀಡಿದರು.












ದಿನದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು :
* ಮುಂಜಾನೆಯ ಬಲಿಪೂಜೆ: ಬೆಳಿಗ್ಗೆ 6:00 ಗಂಟೆಗೆ ಜೆಪ್ಪು ಆಶ್ರಮದಲ್ಲಿ ವಂದನೀಯ ಡಾ| ರಾಜೇಶ್ ರೊಸಾರಿಯೋ ಅವರಿಂದ ಪವಿತ್ರ ಬಲಿಪೂಜೆ ನೆರವೇರಿತು.
* ಸಂಭ್ರಮದ ಬಲಿಪೂಜೆ: ಬೆಳಿಗ್ಗೆ 9:30ಕ್ಕೆ ಮಂಗಳೂರು ಧರ್ಮಕ್ಷೇತ್ರದ ಶ್ರೇಷ್ಠಗುರು ಆತೀ ವಂದನೀಯ ಮೊನ್ಸಿಜೊರ್ ಮ್ಯಾಕ್ಸಿಮ್ ಎಲ್. ನೊರೊನ್ಹಾ ಅವರು ಕೌಟುಂಬಿಕ ಜೀವನದಲ್ಲಿ ಪ್ರೀತಿಯ ಮಾತುಗಳ ಮಹತ್ವದ ಬಗ್ಗೆ ಬೋಧಿಸಿದರು.
* ಮಲಯಾಳಂ ಬಲಿಪೂಜೆ: ಮಧ್ಯಾಹ್ನ 11:00 ಗಂಟೆಗೆ ಮಿಲಾಗ್ರಿಸ್ ಚರ್ಚ್ ನಲ್ಲಿ ಮಲಯಾಳಂ ಭಾಷೆಯ ವಿಶೇಷ ಬಲಿಪೂಜೆ ನಡೆಯಿತು.
















ಗಣ್ಯರ ಉಪಸ್ಥಿತಿ
ಈ ಧಾರ್ಮಿಕ ವಿಧಿವಿಧಾನಗಳಲ್ಲಿ ಜೆಪ್ಪುವಿನ ಸಂತ ಆಂತೋನಿ ಆಶ್ರಮದ ಪ್ರದಾನ ನಿರ್ದೇಶಕ ವಂದನೀಯ ಫಾದರ್ ಜೆ.ಬಿ. ಕ್ರಾಸ್ತಾ, ಆಡಳಿತಾಧಿಕಾರಿ ವಂದನೀಯ ಫಾದರ್ ಪ್ರವೀಣ್ ಅಮೃತ್ ಮಾರ್ಟಿಸ್, ಸಹಾಯಕ ನಿರ್ದೇಶಕರಾದ ವಂದನೀಯ ಫಾದರ್ ನಿಶಾಂತ್ ವೀವಿಯನ್ ರೊಡ್ರಿಗಸ್ ಹಾಗೂ ವಂದನೀಯ ಫಾದರ್ ಗಿಲ್ಬರ್ಟ್ ಡಿಸೋಜ ಸೇರಿದಂತೆ ಎಪಿಸ್ಕೋಪಲ್ ಸಿಟಿ ವಲಯದ ಮತ್ತು ನಗರದ ವಿವಿಧ ಧಾರ್ಮಿಕ ಸಂಸ್ಥೆಗಳ ಹಲವು ಧರ್ಮ ಗುರುಗಳು ಸಹಬಲಿಪೂಜೆ ಅರ್ಪಿಸಿದರು. ಗಾಯನ ಮಂಡಳಿಯ ಭಕ್ತಿಗೀತೆಗಳು ನೆರೆದಿದ್ದವರಲ್ಲಿ ಆಧ್ಯಾತ್ಮಿಕ ಚೈತನ್ಯ ತುಂಬಿದವು.







ಕೃತಜ್ಞತೆ:
ಬಲಿಪೂಜೆಯ ಕೊನೆಯಲ್ಲಿ ವಂದನೀಯ ಫಾದರ್ ಜೆ.ಬಿ. ಕ್ರಾಸ್ತಾ ಅವರು ಆರ್ಚ್ಬಿಷಪ್, ಗುರುಗಳು, ದಾನಿಗಳು ಮತ್ತು ಎಲ್ಲಾ ಭಕ್ತಾದಿಗಳಿಗೆ ಕೃತಜ್ಞತೆ ಸಲ್ಲಿಸಿದರು.





