July 10, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

SCDCC ಬ್ಯಾಂಕ್‌ನಲ್ಲಿ UPI ಹಾಗೂ IMPS ಸೌಲಭ್ಯ ಆರಂಭ – ಡಾ. ಎಂ.ಎನ್. ರಾಜೇಂದ್ರ ಕುಮಾರ್

ಡಿಜಿಟಲ್ ಬ್ಯಾಂಕಿಂಗ್ ಸೇವೆಗಳು ನಾಳೆ ಫೆಬ್ರವರಿ 17ರಂದು ಲೋಕಾರ್ಪಣೆ

ದೇಶಕ್ಕೆ ಮಾದರಿಯಾಗಿ ಬ್ಯಾಂಕಿಂಗ್ ಸೇವೆಗಳನ್ನು ನೀಡುತ್ತಿರುವ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ (SCDCC ಬ್ಯಾಂಕ್) ತನ್ನ ಗ್ರಾಹಕರಿಗಾಗಿ ಡಿಜಿಟಲ್ ಬ್ಯಾಂಕಿಂಗ್ ಸೇವೆಗಳನ್ನು ಮತ್ತಷ್ಟು ವಿಸ್ತರಿಸಿದೆ ಎಂದು ಬ್ಯಾಂಕ್ ಅಧ್ಯಕ್ಷ ಡಾ. ಎಂ. ಎನ್. ರಾಜೇಂದ್ರ ಕುಮಾರ್ ತಿಳಿಸಿದ್ದಾರೆ.

ಅವರು ಇಂದು ಫೆಬ್ರವರಿ 16ರಂದು ಸೋಮವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬ್ಯಾಂಕ್ ಈಗಾಗಲೇ ಕೋರ್ ಬ್ಯಾಂಕಿಂಗ್ ಸೇವೆಯೊಂದಿಗೆ RTGS/NEFT, CTS, SMS, ATM, ಮೊಬೈಲ್ ಬ್ಯಾಂಕಿಂಗ್ ಮತ್ತು POS ಸೇರಿದಂತೆ ಹಲವಾರು ಡಿಜಿಟಲ್ ಸೇವೆಗಳನ್ನು ಯಶಸ್ವಿಯಾಗಿ ನೀಡುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮಹತ್ತರ ಪರಿವರ್ತನೆ ಸಂಭವಿಸಿದ್ದು, ಗ್ರಾಹಕರು ಇಂಟರ್ನೆಟ್ ಬ್ಯಾಂಕಿಂಗ್, ಮೊಬೈಲ್ ಅಪ್ಲಿಕೇಶನ್ ಮತ್ತು ತ್ವರಿತ ಪಾವತಿ ವ್ಯವಸ್ಥೆಗಳ ಮೂಲಕ ಸುಗಮ ಸೇವೆಯನ್ನು ನಿರೀಕ್ಷಿಸುತ್ತಿದ್ದಾರೆ. ಈ ಅಗತ್ಯತೆಗೆ ಅನುಗುಣವಾಗಿ ಬ್ಯಾಂಕ್ ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ ಎಂದು ಹೇಳಿದರು.

ಡಿಜಿಟಲ್ ಸೇವೆಗಳನ್ನು ಮತ್ತಷ್ಟು ವಿಸ್ತರಿಸುವ ಉದ್ದೇಶದಿಂದ 2025ರ ಸೆಪ್ಟೆಂಬರ್ 16ರಿಂದ IMPS ಸೇವೆಯನ್ನು ಆರಂಭಿಸಲಾಗಿದೆ. ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಅಭಿವೃದ್ಧಿಪಡಿಸಿದ ಈ ತ್ವರಿತ ಹಣ ವರ್ಗಾವಣೆ ವ್ಯವಸ್ಥೆ 24×7, ವಾರಾಂತ್ಯ ಹಾಗೂ ಸಾರ್ವಜನಿಕ ರಜೆ ದಿನಗಳಲ್ಲಿಯೂ ಕಾರ್ಯನಿರ್ವಹಿಸುತ್ತದೆ. ಬ್ಯಾಂಕಿನ ಮೊಬೈಲ್ ಅಪ್ಲಿಕೇಶನ್ ಮೂಲಕ ಗ್ರಾಹಕರು ಖಾತೆ ಸಂಖ್ಯೆ ಮತ್ತು IFSC ಬಳಸಿ (P2A ವಿಧಾನ) ಯಾವುದೇ ಬ್ಯಾಂಕ್ ಖಾತೆಗೆ ಕ್ಷಣಾರ್ಧದಲ್ಲಿ ಹಣ ವರ್ಗಾವಣೆ ಮಾಡಬಹುದು ಎಂದು ಮಾಹಿತಿ ನೀಡಿದರು.

ಇದೀಗ ಡಿಜಿಟಲ್ ಭಾರತ ಪರಿಕಲ್ಪನೆಯನ್ನು ಬಲಪಡಿಸುವ ನಿಟ್ಟಿನಲ್ಲಿ 2026ರ ಜನವರಿ 21ರಿಂದ ಯುಪಿಐ (UPI) ಸೇವೆಯನ್ನು ಪ್ರಾರಂಭಿಸಿರುವುದು ಹೆಮ್ಮೆಯ ವಿಚಾರವಾಗಿದೆ. ಯುಪಿಐ ಸೇವೆಯ ಮೂಲಕ ಗ್ರಾಹಕರು ಸುರಕ್ಷಿತ ಹಾಗೂ ವೇಗವಾಗಿ ಹಣ ವರ್ಗಾವಣೆ ಮಾಡಬಹುದು. ಗೂಗಲ್ ಪೇ, ಫೋನ್ ಪೇ, ಭೀಮ್, ವಾಟ್ಸ್ಆಪ್ ಪೇ, ಪೇಟಿಎಂ, ಫ್ರೀಚಾರ್ಜ್, ಸೂಪರ್ ಮನಿ ಸೇರಿದಂತೆ ವಿವಿಧ ಅಪ್ಲಿಕೇಶನ್‌ಗಳ ಮೂಲಕ ಸುಲಭವಾಗಿ ವ್ಯವಹಾರ ನಡೆಸಬಹುದಾಗಿದೆ.

ಈ ಸೇವೆಯಿಂದ ಬ್ಯಾಂಕ್‌ಗೆ ಭೇಟಿ ನೀಡುವ ಅವಶ್ಯಕತೆ ಇಲ್ಲದೆ ಮನೆಯಲ್ಲಿಯೇ ಅಥವಾ ಎಲ್ಲಿಂದ ಬೇಕಾದರೂ 24×7 ಸಮಯದಲ್ಲಿ ಹಣ ವರ್ಗಾವಣೆ ಮಾಡಬಹುದು. ಇದು ವೇಗವಾದ, ಸುರಕ್ಷಿತ ಹಾಗೂ ಸರಳ ಡಿಜಿಟಲ್ ಪಾವತಿ ವಿಧಾನವಾಗಿದೆ ಎಂದು ಅವರು ಹೇಳಿದರು.

ಯುಪಿಐ ಸೇವೆಯ ಪ್ರಮುಖ ಪ್ರಯೋಜನಗಳು:

  • ತಕ್ಷಣ ಹಣ ಕಳುಹಿಸುವ ಹಾಗೂ ಸ್ವೀಕರಿಸುವ ಸೌಲಭ್ಯ
  • ಯುಪಿಐ ಐಡಿಗೆ ನೇರ ಹಣ ವರ್ಗಾವಣೆ
  • ಕ್ಯೂಆರ್ ಕೋಡ್ ಸ್ಕ್ಯಾನ್ ಮೂಲಕ ಪಾವತಿ
  • ಆನ್‌ಲೈನ್ ಖರೀದಿ ಮತ್ತು ಬಿಲ್ ಪಾವತಿ
  • ದೇಶದ ಯಾವುದೇ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ
  • ಯುಪಿಐ ಪಿನ್ ಹಾಗೂ ಎರಡು ಹಂತದ ಭದ್ರತಾ ವ್ಯವಸ್ಥೆಯಿಂದ ಸುರಕ್ಷತೆ

ಸಣ್ಣ ವ್ಯಾಪಾರಿಗಳು, ರೈತರು, ಅಂಗಡಿ ಮಾಲಿಕರು, ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳು ಈ ಸೌಲಭ್ಯದಿಂದ ಹೆಚ್ಚಿನ ಪ್ರಯೋಜನ ಪಡೆಯಲಿದ್ದಾರೆ. ಚಿಲ್ಲರೆ ವ್ಯಾಪಾರಿಗಳೂ ಕ್ಯೂಆರ್ ಕೋಡ್ ಮೂಲಕ ಡಿಜಿಟಲ್ ಪಾವತಿ ಸ್ವೀಕರಿಸಲು ಸಾಧ್ಯವಾಗುತ್ತದೆ. ದಿನನಿತ್ಯದ ಸಣ್ಣ ಮೊತ್ತದ ಪಾವತಿಗಳು, ಇ-ಕಾಮರ್ಸ್ ವ್ಯವಹಾರಗಳು ಹಾಗೂ ವ್ಯಕ್ತಿಯಿಂದ ವ್ಯಕ್ತಿಗೆ ಹಣ ವರ್ಗಾವಣೆಗೆ ಯುಪಿಐ ಅತ್ಯಂತ ಅನುಕೂಲಕರವಾಗಿದೆ ಎಂದು ಡಾ. ರಾಜೇಂದ್ರ ಕುಮಾರ್ ಹೇಳಿದರು.

You may also like

News

Mangalore Diocese Clergy Retreat Concludes at Shanthi Kiran

The first batch of the Annual Clergy Retreat 2026 of the Diocese of Mangalore concluded on Friday, July 10, at
News

Father Muller Ushers in a New Era of Precision Orthopaedics with the Region’s First STRYKER–USA MAKO SmartRobotics™ System

Father Muller Medical College Hospital has once again reaffirmed its commitment to pioneering excellence in healthcare with the commissioning of

You cannot copy content of this page