ಕುಡಿದ ಮತ್ತಿನಲ್ಲಿ ಅತಿವೇಗ ಚಾಲನೆ
ಮಣಿಪಾಲ ವಿದ್ಯಾರ್ಥಿಯಿಂದ ಸರಣಿ ಅಪಘಾತ – ಒಬ್ಬರಿಗೆ ಗಂಭೀರ ಗಾಯ

ಉಡುಪಿ: ಕುಡಿದ ಮತ್ತಿನಲ್ಲಿ ಅತಿವೇಗವಾಗಿ ಕಾರು ಚಲಾಯಿಸಿ ಸರಣಿ ಅಪಘಾತಗಳಿಗೆ ಕಾರಣವಾದ ಆರೋಪದ ಮೇಲೆ ಮಣಿಪಾಲದ ವಿದ್ಯಾರ್ಥಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಅಭಿಮನ್ಯು ನೇಗಿ ಎಂದು ಗುರುತಿಸಲಾಗಿದೆ.
ಫೆಬ್ರವರಿ 14ರ ತಡರಾತ್ರಿ ನಡೆದ ಈ ಘಟನೆ ಕಾಲೇಜು ರಸ್ತೆಯ ಬಳಿ ಸಂಭವಿಸಿದೆ. ಆರೋಪಿಯು ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ಕಾರು ಚಲಾಯಿಸಿಕೊಂಡು ಬಂದು, ರಸ್ತೆ ಬದಿಯಲ್ಲಿ ಸಾಲಾಗಿ ನಿಲ್ಲಿಸಿದ್ದ ಏಳು ದ್ವಿಚಕ್ರ ವಾಹನಗಳಿಗೆ ಢಿಕ್ಕಿ ಹೊಡೆದಿದ್ದಾನೆ. ಬಳಿಕ ಎದುರಿನಿಂದ ಬರುತ್ತಿದ್ದ ಆಟೋ ರಿಕ್ಷಾಕ್ಕೂ ಕಾರು ಡಿಕ್ಕಿಯಾಗಿದ್ದು, ರಿಕ್ಷಾ ಚಾಲಕ ಬಡಗಬೆಟ್ಟು ನಿವಾಸಿ 76 ವರ್ಷ ಪ್ರಾಯದ ಶಿವಪ್ರಸಾದ್ ಅವರ ತಲೆಗೆ ಗಂಭೀರ ಒಳಪೆಟ್ಟು ಬಿದ್ದಿದೆ.


ಕಾರು ಮೇಲಿನ ನಿಯಂತ್ರಣ ತಪ್ಪಿದ ಪರಿಣಾಮ ವಾಹನ ರಸ್ತೆ ಎಡಬಲಗಳಿಗೆ ನುಗ್ಗಿದುದಾಗಿ ತಿಳಿದುಬಂದಿದೆ. ಇದೇ ವೇಗದಲ್ಲಿ ಕಾರು ರಾಷ್ಟ್ರೀಯ ಹೆದ್ದಾರಿಗೆ ಪ್ರವೇಶಿಸಿದ್ದರೆ ಇನ್ನಷ್ಟು ಭೀಕರ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತಕ್ಕೆ ಕಾರಣವಾದ ಕಾರು ಹರಿಯಾಣ ನೋಂದಣಿ ಸಂಖ್ಯೆಯನ್ನು ಹೊಂದಿದೆ. ಘಟನೆ ವೇಳೆ ರಸ್ತೆ ಬದಿಯ ಮಳಿಗೆಗಳ ಸಿಬ್ಬಂದಿ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳು ಜಖಂಗೊಂಡಿವೆ. ಈ ಸಂಬಂಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.


ಈ ಭಾಗದಲ್ಲಿ ಸಾರ್ವಜನಿಕರು ಮತ್ತು ಉದ್ಯೋಗಿಗಳು ಹಗಲು-ರಾತ್ರಿ ಸಂಚರಿಸುತ್ತಿರುವುದರಿಂದ, ಭಾರಿ ವಾಹನಗಳ ಅತಿವೇಗ ಚಾಲನೆ ಕುರಿತು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಆಗಾಗ್ಗೆ ಸಣ್ಣಪುಟ್ಟ ಅಪಘಾತಗಳು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಕಠಿಣ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.




