ವಾರದಿಂದ ನೀರಿಲ್ಲದೆ ಮಾಣಿ ಕೊಟ್ರಾಸ್ ಜನತೆ ಕಂಗಾಲು – ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ
ಚುನಾವಣೆ ಬಂದಾಗ ಮತ ಕೇಳಲು ನಾಲ್ಕೈದು ಬಾರಿ ಮನೆ ಬಾಗಿಲಿಗೆ ಬಿಕ್ಷುಕರಂತೆ ಬರುವ ರಾಜಕೀಯ ವ್ಯಕ್ತಿಗಳು ಜನ ಸಂಕಷ್ಟದಲ್ಲಿದ್ದಾಗ ನಾಪತ್ತೆ

ಮಾಣಿ ಗ್ರಾಮದ ಕೊಟ್ರಾಸ್ ಮತ್ತು ಕಾಪಿಕಾಡ್ ಪರಿಸರದ ನಿವಾಸಿಗಳು ಕಳೆದ ಒಂದು ವಾರದಿಂದ ಕುಡಿಯುವ ನೀರಿಲ್ಲದೆ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ದೈನಂದಿನ ಕೆಲಸಗಳಿಗೂ ನೀರಿಲ್ಲದೆ ಬಡ ಕುಟುಂಬಗಳು ಪರದಾಡುತ್ತಿದ್ದು, ಅಧಿಕಾರಿಗಳು ಹಾಗೂ ರಾಜಕೀಯ ಮುಖಂಡರ ಮೌನಕ್ಕೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.


ಸಮಸ್ಯೆಯ ವಿವರ:
ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ವೇಳೆ ನೀರಿನ ಪೈಪ್ ಲೈನ್ ತುಂಡಾಗಿರುವುದು ಈ ಸಮಸ್ಯೆಗೆ ಮೂಲ ಕಾರಣ ಎಂದು ಹೇಳಲಾಗುತ್ತಿದೆ. ಪೈಪ್ ದುರಸ್ತಿಯ ಬಗ್ಗೆ ವಿಚಾರಿಸಿದರೆ, “ಇಂದು ಸರಿಯಾಗುತ್ತದೆ, ನಾಳೆ ಸರಿಯಾಗುತ್ತದೆ” ಎಂಬ ಹಾರಿಕೆ ಉತ್ತರವನ್ನೇ ಸಂಬಂಧಪಟ್ಟವರು ನೀಡುತ್ತಿದ್ದಾರೆ. ಆದರೆ, ವಾರ ಕಳೆದರೂ ಹನಿ ನೀರು ಬಾರದ ಕಾರಣ ಜನರು ಹೈರಾಣಾಗಿದ್ದಾರೆ.


ನೊಂದ ನಾಗರಿಕರ ಅಳಲು:
“ಚುನಾವಣೆ ಬಂದಾಗ ಮತ ಕೇಳಲು ನಾಲ್ಕೈದು ಬಾರಿ ಮನೆ ಬಾಗಿಲಿಗೆ ಬಿಕ್ಷುಕರಂತೆ ಬರುವ ರಾಜಕೀಯ ವ್ಯಕ್ತಿಗಳು, ಈಗ ಜನ ಸಂಕಷ್ಟದಲ್ಲಿದ್ದಾಗ ಇತ್ತ ತಲೆಹಾಕಿಯೂ ನೋಡುತ್ತಿಲ್ಲ. ಬಡವರು ನೀರಿಲ್ಲದೆ ಪರದಾಡುತ್ತಿದ್ದರೆ ಕೇಳುವವರು ಯಾರೂ ಇಲ್ಲದಂತಾಗಿದೆ,” ಎಂದು ಕಾಪಿಕಾಡ್ ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಜಕೀಯ ಇಚ್ಛಾಶಕ್ತಿಯ ಕೊರತೆ ಮತ್ತು ಸರಕಾರಿ ಅಧಿಕಾರಿಗಳ ಬೇಜವಾಬ್ದಾರಿತನವೇ ಈ ದುಸ್ಥಿತಿಗೆ ಕಾರಣ ಎಂದು ಸ್ಥಳೀಯರು ದೂರಿದ್ದಾರೆ. ಕೂಡಲೇ ಸಂಬಂಧಪಟ್ಟ ಪಂಚಾಯತ್ ಆಡಳಿತ ಹಾಗೂ ಅಧಿಕಾರಿಗಳು ಎಚ್ಚೆತ್ತುಕೊಂಡು ಪೈಪ್ ಲೈನ್ ಸರಿಪಡಿಸಿ ನೀರಿನ ವ್ಯವಸ್ಥೆ ಮಾಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.




