ಸೂರಿಕುಮೇರು ಚರ್ಚ್ ವ್ಯಾಪ್ತಿಯ ಆಲಿಸಿಯಾ ಪಿರೇರಾ MBA ಪರೀಕ್ಷೆಯಲ್ಲಿ ಏಳನೇ ರ್ಯಾಂಕ್
ಕೃಷಿಕರಾದ ಆವಿಲ್ ಮತ್ತು ಲೀಡಿಯಾ ಪಿರೇರಾ ದಂಪತಿಯ ಪುತ್ರಿ

ಛಲಬಿಡದ ಸಾಧಕಿಯ ಸಾಧನೆಗೆ ಅಭಿನಂದನೆಗಳ ಮಹಾಪೂರ

ಕಠಿಣ ಪರಿಶ್ರಮ ಮತ್ತು ಏಕಾಗ್ರತೆ ಇದ್ದರೆ ಯಾವುದೇ ಗುರಿಯನ್ನು ತಲುಪಬಹುದು ಎಂಬುದನ್ನು ಬಂಟ್ವಾಳ ತಾಲೂಕಿನ ಕಡೇಶ್ವಾಲ್ಯ ಗ್ರಾಮದ ಆಲಿಸಿಯಾ ಲೀಮಾ ಪಿರೇರಾ ಸಾಬೀತುಪಡಿಸಿದ್ದಾರೆ. ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (VTU) ನಡೆಸಿದ 2023-2025ನೇ ಸಾಲಿನ ಎಂಬಿಎ (MBA) ಪರೀಕ್ಷೆಯಲ್ಲಿ ಇವರು 7ನೇ ರ್ಯಾಂಕ್ ಪಡೆಯುವ ಮೂಲಕ ಸೂರಿಕುಮೇರು ಚರ್ಚ್ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಛಲಬಿಡದ ಸಾಧಕಿಯ ಸಾಧನೆಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.




ಮಂಗಳೂರಿನ ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಮ್ಯಾನೇಜ್ಮೆಂಟ್ನ ವಿದ್ಯಾರ್ಥಿನಿಯಾದ ಆಲಿಸಿಯಾ, 8.82 CGPA ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ. ಇವರು ಕಡೇಶ್ವಾಲ್ಯ ಗ್ರಾಮದ ನಿವಾಸಿಗಳಾದ ಕೃಷಿಕ ದಂಪತಿ ಆವಿಲ್ ಪಿರೇರಾ ಮತ್ತು ಲೀಡಿಯಾ ಪಿರೇರಾ ಅವರ ಪುತ್ರಿಯಾಗಿದ್ದು, ಸೂರಿಕುಮೇರು ಚರ್ಚ್ ವ್ಯಾಪ್ತಿಗೆ ಒಳಪಟ್ಟಿದ್ದಾರೆ.

ಕೃಷಿ ಹಿನ್ನೆಲೆಯ ಕುಟುಂಬದಿಂದ ಬಂದ ಆಲಿಸಿಯಾ ಅವರ ಈ ಸಾಧನೆಗೆ ಅವರ ಹಿರಿಯ ಸಹೋದರಿ ಅಲಿಫಿಯಾ, ಬಾವ ಅನುಪ್, ತಂದೆ ಆವಿಲ್, ತಾಯಿ ಲೀಡಿಯಾ ಹಾಗೂ ಕುಟುಂಬಸ್ಥರ ಪ್ರೋತ್ಸಾಹವೇ ಕಾರಣ ಎಂದು ಶ್ಲಾಘಿಸಲಾಗಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿನಿಯೊಬ್ಬಳು ರ್ಯಾಂಕ್ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ಸ್ಥಳೀಯರ ಮೆಚ್ಚುಗೆಗೆ ಪಾತ್ರವಾಗಿದೆ.


ಆಲಿಸಿಯಾ ಅವರ ಸಾಧನೆಯನ್ನು ಸೂರಿಕುಮೇರು ಚರ್ಚ್ ನ ಪಾಲನಾ ಸಮಿತಿಯ ಮಾಜಿ ಉಪಾಧ್ಯಕ್ಷ ಸ್ಟೀವನ್ ಪ್ರಕಾಶ್ ಮಾರ್ಟಿಸ್, ಮಾಜಿ ಕಾರ್ಯದರ್ಶಿ ಸ್ಟೀವನ್ ಆಲ್ವಿನ್ ಪಾಯ್ಸ್, ಮಾಜಿ ಆಯೋಗಗಳ ಸಂಯೋಜಕ ಎಲಿಯಾಸ್ ಪಿರೇರಾ, ಕಥೊಲಿಕ್ ಸಭಾ ಸೂರಿಕುಮೇರು ಬೊರಿಮಾರ್ ಘಟಕದ ಮಾಜಿ ಅಧ್ಯಕ್ಷ ತೊಮಸ್ ಲಸ್ರಾದೊ, ಊರಿನ ಸಾರ್ವಜನಿಕರು ಹಾಗೂ ಶಿಕ್ಷಣ ಪ್ರೇಮಿಗಳು ಅಭಿನಂದಿಸಿದ್ದಾರೆ.





