July 14, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಮತಾಂತರ ಕಾಯ್ದೆ ದುರುಪಯೋಗ – ಕ್ರೈಸ್ತರ ಮೇಲೆ ಸುಳ್ಳು FIR ದಾಖಲಾತಿ ವಿರುದ್ಧ ‘ಕರ್ನಾಟಕ ಕ್ರೈಸ್ತ ಸಂಘಟನೆ’ ಆಕ್ರೋಶ

ರಾಜ್ಯದಲ್ಲಿ ಜಾರಿಯಲ್ಲಿರುವ ಮತಾಂತರ ವಿರೋಧಿ ಕಾಯ್ದೆಯನ್ನು ದುರುಪಯೋಗಪಡಿಸಿಕೊಂಡು ಕ್ರೈಸ್ತ ಸಮುದಾಯದ ಮೇಲೆ ಸುಳ್ಳು ಮೊಕದ್ದಮೆಗಳನ್ನು ದಾಖಲಿಸಲಾಗುತ್ತಿದೆ ಎಂದು ಕರ್ನಾಟಕ ಕ್ರೈಸ್ತ ಸಂಘಟನೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಈ ಬೆಳವಣಿಗೆಯು ಸಂವಿಧಾನದತ್ತವಾದ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತಿದೆ ಎಂದು ಸಂಘಟನೆ ದೂರಿದೆ.

ಸಂವಿಧಾನದ ಹಕ್ಕುಗಳ ಉಲ್ಲಂಘನೆ :

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಮುಖಂಡರು, “ಭಾರತದ ಸಂವಿಧಾನದ ವಿಧಿ 25 ರ ಪ್ರಕಾರ ಪ್ರತಿಯೊಬ್ಬರಿಗೂ ತಮ್ಮ ಧರ್ಮವನ್ನು ಆಚರಿಸುವ ಮತ್ತು ಪ್ರಚಾರ ಮಾಡುವ ಹಕ್ಕಿದೆ. ಆದರೆ, ಪ್ರಸ್ತುತ ಮತಾಂತರ ಕಾಯ್ದೆಯ ನೆಪದಲ್ಲಿ ಪ್ರಾರ್ಥನಾ ಮಂದಿರ ಹಾಗೂ ಮನೆಗಳಿಗೆ ನುಗ್ಗಿ ಗಲಾಟೆ ಮಾಡುವುದು, ಕೊಲೆ ಬೆದರಿಕೆ ಹಾಕುವುದು ಮತ್ತು ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ಸುಳ್ಳು ಪ್ರಕರಣ ದಾಖಲಿಸುವುದು ಹೆಚ್ಚಾಗುತ್ತಿದೆ” ಎಂದು ಆರೋಪಿಸಿದರು.

ಹಾವೇರಿ ಘಟನೆಗೆ ಖಂಡನೆ :

ಇತ್ತೀಚೆಗೆ ಹಾವೇರಿ ಜಿಲ್ಲೆಯಲ್ಲಿ ಸುಮಾರು 20 ಜನರ ವಿರುದ್ಧ ದಾಖಲಾದ ಸುಳ್ಳು FIR ಅನ್ನು ಸಂಘಟನೆ ಉಲ್ಲೇಖಿಸಿದೆ. “ಬಂಧಿತರಲ್ಲಿ 11 ಮಂದಿ ಮಹಿಳೆಯರು ಮತ್ತು ವೃದ್ಧರಿದ್ದಾರೆ. ಘಟನಾ ಸ್ಥಳದಲ್ಲಿ ಇರದವರ ಮೇಲೆಯೂ ಕೇಸ್ ಹಾಕಲಾಗಿದೆ. ಕೇವಲ ಮೌಖಿಕ ಹೇಳಿಕೆಗಳ ಮೇಲೆ ಕೇಸ್ ದಾಖಲಿಸುತ್ತಿರುವುದು ಕಾಯ್ದೆಯ ಸ್ಪಷ್ಟ ದುರುಪಯೋಗ” ಎಂದು ಸಂಘಟನೆ ಕಿಡಿಕಾರಿದೆ. ಕೌಟುಂಬಿಕ ಕಲಹ ಅಥವಾ ಜಮೀನು ವಿವಾದಗಳನ್ನು ಮತಾಂತರದ ಬಣ್ಣ ಹಚ್ಚಿ ಪ್ರಕರಣ ದಾಖಲಿಸಲಾಗುತ್ತಿದೆ ಎಂಬ ಆತಂಕ ವ್ಯಕ್ತಪಡಿಸಿದೆ.

ಸರ್ಕಾರಕ್ಕೆ ಎಚ್ಚರಿಕೆ :

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಮತಾಂತರ ಕಾಯ್ದೆ ಹಿಂಪಡೆಯುವ ಭರವಸೆ ನೀಡಿತ್ತು. ಆದರೆ ಇದುವರೆಗೂ ಆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳದಿರುವುದು ಸಮುದಾಯಕ್ಕೆ ಬೇಸರ ತಂದಿದೆ. ಒಂದು ವೇಳೆ ಸರ್ಕಾರ ಕೂಡಲೇ ಈ ಕಾಯ್ದೆಯನ್ನು ಹಿಂಪಡೆಯದಿದ್ದರೆ ರಾಜ್ಯಮಟ್ಟದಲ್ಲಿ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಸಂಘಟನೆಯ ರಾಜ್ಯಾಧ್ಯಕ್ಷರಾದ ಸ್ಟ್ಯಾನಿ ಪಿಂಟೋ ಎಚ್ಚರಿಸಿದ್ದಾರೆ.

ಉಪಸ್ಥಿತರು:

ಸುದ್ದಿಗೋಷ್ಠಿಯಲ್ಲಿ ಕ್ರೈಸ್ತ ಸಂಘಟನೆ ರಾಜ್ಯಾಧ್ಯಕ್ಷರಾದ ಸ್ಟ್ಯಾನಿ ಪಿಂಟೋ ಬೆಂಗಳೂರು, ಕಾರ್ಯದರ್ಶಿ ಶ್ಯಾಮ್, ಕೆಸಿಎಸ್ ಕಾನೂನು ಸಲಹೆಗಾರರಾದ ಶಾಲೋಮಿ, ಹಾವೇರಿ ಜಿಲ್ಲೆಯಲ್ಲಿ ಸುಳ್ಳು ಕೇಸು ದಾಖಲಿಸಿಕೊಂಡಿರುವ  ಪಾಸ್ಟರ್ ಬಸವರಾಜ್ ಹಾಗೂ ರವಿ, ಪ್ರೊಟೆಸ್ಟೆಂಟ್ ಕ್ರೈಸ್ತರ ಮಹಾಸಭಾದಿಂದ ಆರ್ಚ್ ಬಿಷಪ್ ರೆವರೆಂಡ್ ಡಾ. ವಿನೋದ್ ಎಮ್. ಚಾಕೋ, ಅಸಿಸ್ಟೆಂಟ್ ಆರ್ಚ್ ಬಿಷಪ್ ರೆವರೆಂಡ್ ಸುನಿಲ್ ವಿ. ಜಾಕೋಬ್, ಸೈನೊಡ್ ಸೆಕ್ರೆಟರಿ ಬಿಷಪ್ ವಿನೈಲ್ ಮೋಸೆಸ್, ಬಿಷಪ್ ಮೋಹನ್ ಡೇವಿಡ್, ಬಿಷಪ್ ವಿನಯ ಕುಮಾರ್ ಮತ್ತು ಬಿಷಪ್ ಕುರುಬಾಯ್ ನಾಥನ್ ಅವರು ಉಪಸ್ಥಿತರಿದ್ದರು.

You may also like

News

Father Muller Homoeopathic Medical College Hosts Dr M.L. Dhawale Memorial Seminar 2026

The Department of Practice of Medicine, Father Muller Homoeopathic Medical College & Hospital, Deralakatte, Mangalore, organised the Dr M.L. Dhawale
News

ರೊಜಾರಿಯೊ ಕ್ಯಾಥೆಡ್ರಲ್‌ನಲ್ಲಿ ಹೃದಯ ಆರೋಗ್ಯ ಜಾಗೃತಿ ಹಾಗೂ ಸಿಪಿಆರ್ ತರಬೇತಿ

ಮಂಗಳೂರು ಧರ್ಮಕ್ಷೇತ್ರಕ್ಕೆ ಒಳಪಟ್ಟ ರೊಜಾರಿಯೊ ಕ್ಯಾಥೆಡ್ರಲ್‌ನ ಆರೋಗ್ಯ ಆಯೋಗವು ಚರ್ಚ್ ಪಾಲನಾ ಸಮಿತಿಯ 21 ಆಯೋಗಗಳ ಸಹಯೋಗದಲ್ಲಿ “A Healthy Heart for a Blessed Life”

You cannot copy content of this page