ಮಡಂತ್ಯಾರಿನಲ್ಲಿ ಸಂಭ್ರಮದ ಕೊಂಕಣಿ ಮಾನ್ಯತಾ ದಿವಸ್
ಕೊಂಕಣಿ ಭಾಷೆ, ಸಂಸ್ಕೃತಿ ಹಾಗೂ ಪರಂಪರೆಯನ್ನು ಸಂರಕ್ಷಿಸಿ, ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಐಸಿವೈಎಂ ಮಡಂತ್ಯಾರು ಘಟಕ, ಸಾಮಾಜಿಕ ಸಂವಹನ ಆಯೋಗ, ಕಥೊಲಿಕ್ ಸಭಾ ಮಡಂತ್ಯಾರು ಹಾಗೂ ವೈಸಿಎಸ್ ಮಡಂತ್ಯಾರು ಘಟಕಗಳ ಆಶ್ರಯದಲ್ಲಿ, ಮಾಂಡ್ ಸೊಭಾಣ್, ಮಂಗಳೂರು ಇವರ ಸಹಯೋಗದೊಂದಿಗೆ ಕೊಂಕಣಿ ಮಾನ್ಯತಾ ದಿವಸ್ ಅನ್ನು ಸಂಭ್ರಮದಿಂದ ಆಚರಿಸಲಾಯಿತು.






ಕಾರ್ಯಕ್ರಮದ ಅಂಗವಾಗಿ ಗುಮಟ್ ತರಬೇತಿ ಆಯೋಜಿಸಲಾಗಿದ್ದು, ಡೆಲ್ಟನ್ ಹಾಗೂ ಕುಮಾರಿ ನಿಕೋಲ್ ಅವರು ಮಾಂಡ್ ಸೊಭಾಣ್ ತಂಡದೊಂದಿಗೆ ತರಬೇತಿ ನೀಡಿದರು. ಸುಮಾರು 40 ಮಂದಿ ತರಬೇತಿಯಲ್ಲಿ ಪಾಲ್ಗೊಂಡು ಗುಮಟ್ನ ಇತಿಹಾಸ, ತಯಾರಿಕೆ, ವಾದನ ವಿಧಾನ ಹಾಗೂ ಸಾಂಪ್ರದಾಯಿಕ ಹಾಡುಗಳ ಕುರಿತು ಮಾಹಿತಿ ಪಡೆದರು. ಬಳಿಕ ಭಾಗವಹಿಸಿದವರನ್ನು ಐದು ತಂಡಗಳಾಗಿ ವಿಂಗಡಿಸಿ ಗುಮಟ್ ಹಾಡುಗಳನ್ನು ಪ್ರಸ್ತುತಪಡಿಸಲಾಯಿತು. ಮಕ್ಕಳಿಗಾಗಿ ಚಿತ್ರಕಲೆ, ಛದ್ಮವೇಷ ಹಾಗೂ ಕವನ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಮಕ್ಕಳು ಉತ್ಸಾಹದಿಂದ ಭಾಗವಹಿಸಿದರು.









ಸಂಜೆ 4.30ಕ್ಕೆ ಕೊಂಕಣಿ ಧ್ವಜಾರೋಹಣ ಹಾಗೂ ಕೊಂಕಣಿ ಥೀಮ್ ಗೀತೆಯೊಂದಿಗೆ ಮುಖ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕೊಂಕಣಿ ಹೋರಾಟಗಾರ, ಶಿಕ್ಷಕ ಹಾಗೂ ಸಾರ್ವಜನಿಕ ಸೇವಕರಾದ ರಾಬರ್ಟ್ ಮೆನೆಜಸ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಮಾಂಡ್ ಸೊಭಾಣ್ನ ಕಾರ್ಯದರ್ಶಿ ರೊನಾಲ್ಡ್ ಕ್ರಾಸ್ತಾ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ರಾಬರ್ಟ್ ಮೆನೆಜಸ್ ಅವರು ಕೊಂಕಣಿ ಭಾಷೆಯ ಇತಿಹಾಸ ಹಾಗೂ ಮಹತ್ವವನ್ನು ವಿವರಿಸಿ, ಯುವಜನರು ಕೊಂಕಣಿಯನ್ನು ಮಾತನಾಡುವುದರ ಜೊತೆಗೆ ಓದಲು ಮತ್ತು ಬರೆಯಲು ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಂದನೀಯ ಫಾದರ್ ಸ್ಟ್ಯಾನಿ ಗೊವಿಯಸ್ ಅವರು ಕೊಂಕಣಿ ಭಾಷೆಯ ಶ್ರೀಮಂತಿಕೆ ಹಾಗೂ ವೈಶಿಷ್ಟ್ಯವನ್ನು ವಿವರಿಸಿ, ಪ್ರತಿಯೊಬ್ಬರೂ ತಮ್ಮ ಮಾತೃಭಾಷೆಯನ್ನು ಕಲಿತು ಬಳಸುವಂತೆ ಪ್ರೋತ್ಸಾಹಿಸಿದರು.


ಗುಮಟ್ ತರಬೇತುದಾರರು ಹಾಗೂ ಮಾಂಡ್ ಸೊಭಾಣ್ ತಂಡವನ್ನು ಅವರ ಅಮೂಲ್ಯ ಕೊಡುಗೆಗಾಗಿ ಸನ್ಮಾನಿಸಲಾಯಿತು. ಗುಮಟ್ ತಂಡಗಳ ಪ್ರಸ್ತುತಿ, ತರಬೇತಿಯಲ್ಲಿ ಭಾಗವಹಿಸಿದವರಿಗೆ ಪ್ರಮಾಣಪತ್ರ ವಿತರಣೆ, ನೃತ್ಯ ಹಾಗೂ ಗಾಯನ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಕೊಂಕಣಿ ಭಾಷೆ, ಸಂಸ್ಕೃತಿ ಮತ್ತು ಪರಂಪರೆಯ ಸಂರಕ್ಷಣೆಯ ಜೊತೆಗೆ ಯುವಜನರಲ್ಲಿ ಮಾತೃಭಾಷೆಯ ಬಗ್ಗೆ ಅಭಿಮಾನ ಮೂಡಿಸುವಲ್ಲಿ ಕಾರ್ಯಕ್ರಮ ಗಮನಾರ್ಹವಾಗಿ ಮೂಡಿಬಂದಿತು.



