ಸೂರಿಕುಮೇರುವಿನಲ್ಲಿ ಭೀಕರ ರಸ್ತೆ ಅಪಘಾತ : ಬೈಕ್-ಸ್ಕೂಟರ್ ಡಿಕ್ಕಿಯಾಗಿ 10 ವರ್ಷದ ಬಾಲಕಿ ದುರಂತ ಸಾವು!
ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಸೂರಿಕುಮೇರು ಎಂಬಲ್ಲಿ ಜೂನ್ 3ರಂದು ಬುಧವಾರ ಸಾಯಂಕಾಲ ಎರಡು ದ್ವಿಚಕ್ರ ವಾಹನಗಳ ಮಧ್ಯೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ 10 ವರ್ಷದ ಪುಟ್ಟ ಬಾಲಕಿಯೋರ್ವರು ಚಿಕಿತ್ಸೆ ಫಲಕಾರಿಯಾಗದೆ ಮಧ್ಯರಾತ್ರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಬಾಳ್ತಿಲ ಗ್ರಾಮದ ಹೇಮಂತ್ ಕುಮಾರ್ ಎಂಬವರ ಪುತ್ರಿ 10 ವರ್ಷ ಪ್ರಾಯದ ನೈರುತಿ ಎಂ. ಸುವರ್ಣ ಮೃತಪಟ್ಟ ದುರ್ದೈವಿ.

ಘಟನೆಯ ಹಿನ್ನೆಲೆ:
ಬುಧವಾರ ಸಾಯಂಕಾಲ ಹೇಮಂತ್ ಕುಮಾರ್ ಅವರು ತಮ್ಮ ಪತ್ನಿ ಹಾಗೂ ಮಕ್ಕಳಾದ ನೈರುತಿ ಮತ್ತು ಆಕೆಯ ತಂಗಿಯೊಂದಿಗೆ ನೆಟ್ಟ ಸದಾಶಿವ ದೇವಸ್ಥಾನದಲ್ಲಿ ಪೂಜೆ ಮುಗಿಸಿ ಬೈಕ್ನಲ್ಲಿ ಮನೆಗೆ ಮರಳುತ್ತಿದ್ದರು. ಇವರ ಬೈಕ್ ಸೂರಿಕುಮೇರು ಸಮೀಪ ತಲುಪುತ್ತಿದ್ದಂತೆ ಎದುರಿನಿಂದ ಬಂದ ಸ್ಕೂಟರ್ ಒಂದು ಬಲವಾಗಿ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಬೈಕ್ನಿಂದ ಕಾಂಕ್ರೀಟ್ ರಸ್ತೆಗೆ ಬಿದ್ದ ನೈರುತಿ ಅವರ ತಲೆಗೆ ಗಂಭೀರ ಸ್ವರೂಪದ ಪೆಟ್ಟಾಗಿತ್ತು. ತಕ್ಷಣವೇ ಆಕೆಯನ್ನು ತುಂಬೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ನೀಡಲಾಯಿತಾದರೂ, ಮಧ್ಯರಾತ್ರಿಯ ವೇಳೆಗೆ ಆಕೆ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾಳೆ.

ಪ್ರತಿಭಾವಂತೆಯ ಅಗಲಿಕೆಗೆ ಕಂಬನಿ:
ಮೃತ ನೈರುತಿ ಸ್ಥಳೀಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯಾಗಿದ್ದು, ಪಾಠ ಪ್ರವಚನಗಳಲ್ಲಿ ಮುಂದಿದ್ದಳು. ಉತ್ತಮ ಭಜನಾಪಟುವೂ ಆಗಿದ್ದ ಆಕೆ ಭಜನಾ ತರಬೇತಿಯನ್ನು ಪಡೆಯುತ್ತಿದ್ದಳು. ಬಾಲಕಿಯ ಅಕಾಲಿಕ ಮರಣಕ್ಕೆ ಸ್ಥಳೀಯರು ತೀವ್ರ ಕಂಬನಿ ಮಿಡಿದಿದ್ದಾರೆ.

ಘಟನಾ ಸ್ಥಳಕ್ಕೆ ಬಂಟ್ವಾಳ ಸಂಚಾರಿ ಠಾಣೆಯ ಸಬ್ ಇನ್ಸ್ಪೆಕ್ಟರ್ ಆದರ್ಶ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.




