August 25, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಕಂಬಳ ಕೋಣಗಳ ಮಾಲೀಕನಿಗೆ ಹಲ್ಲೆ, ಸುಲಿಗೆ ಯತ್ನ ಪ್ರಕರಣ – ಮೂವರು KCOCA ಆರೋಪಿಗಳಿಗೆ ಷರತ್ತುಬದ್ಧ ಜಾಮೀನು ಮಂಜೂರು

ಪುತ್ತೂರಿನ ಕಜೆ ಲಾ ಚೇಂಬರ್ಸ್ ಇದರ ಪ್ರಖ್ಯಾತ ವಕೀಲರಾದ ಮಹೇಶ್ ಕಜೆ ಅವರು ಮಂಡಿಸಿದ ವಾದ

ಕಂಬಳದಲ್ಲಿ ಗೆದ್ದ ಕೋಣಗಳ ಮಾಲೀಕನಿಗೆ ಅಕ್ರಮ ಪ್ರವೇಶ ಮಾಡಿ ಹಲ್ಲೆ ನಡೆಸಿ, ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅತ್ಯಂತ ಕಠಿಣವಾದ “ಕರ್ನಾಟಕ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ” (KCOCA) ಅಡಿಯಲ್ಲಿ ಬಂಧಿತರಾಗಿದ್ದ ಮೂವರು ಆರೋಪಿಗಳಿಗೆ ಮೈಸೂರಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ಕೆಕೋಕಾ ವಿಶೇಷ ನ್ಯಾಯಾಲಯವು ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ಶ್ಯಾಮ್ ಸುಂದರ್ ಶೆಟ್ಟಿ, ಸುವಿನ್ ಕಾಂಚನ್ ಅಲಿಯಾಸ್ ಮುನ್ನ ಹಾಗೂ ಅಕ್ಷಯ್ ಜಾಮೀನು ಪಡೆದ ಆರೋಪಿಗಳಾಗಿದ್ದಾರೆ.

ಪ್ರಕರಣದ ಹಿನ್ನೆಲೆ:

ದಿನಾಂಕ 01-01-2026 ರಂದು ಸಂಜೆ ಸುಮಾರು 5:30 ರ ವೇಳೆಗೆ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಶಿಮಂತೂರು ಗ್ರಾಮದ ಅಂಗಾರಗುಡ್ಡೆ ಎಂಬಲ್ಲಿ ಘಟನೆ ನಡೆದಿತ್ತು. ದೂರುದಾರರಾದ ಸಹಜುದ್ದೀನ್ ಅವರು ತಮ್ಮ ತಂದೆಯೊಂದಿಗೆ ಜಗ್ಗು ಶೆಟ್ಟಿ ಅವರಿಗೆ ಸೇರಿದ ಕೊಟ್ಟಿಗೆಯಲ್ಲಿ ಕಂಬಳದ ಕೋಣಗಳಿಗೆ ಎಣ್ಣೆ ಮಾಲೀಶ್ ಮಾಡುತ್ತಿದ್ದರು. ಈ ಸಮಯದಲ್ಲಿ ಬಿಳಿ ಬಣ್ಣದ ಕಾರಿನಲ್ಲಿ ಕಬ್ಬಿಣದ ರಾಡ್‌ಗಳೊಂದಿಗೆ ಬಂದ ಆರೋಪಿಗಳು, ಕೊಟ್ಟಿಗೆಗೆ ಅಕ್ರಮವಾಗಿ ನುಗ್ಗಿದ್ದರು.

ಕೋಣಗಳು ಕಂಬಳದಲ್ಲಿ ಗೆದ್ದಿರುವ ಬಗ್ಗೆ ಪ್ರಸ್ತಾಪಿಸಿದ ಆರೋಪಿಗಳು, ಸಹಜುದ್ದೀನ್ ಅವರ ಬಳಿ 50,000 ರೂಪಾಯಿ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದರು. ಹಣ ನೀಡಲು ನಿರಾಕರಿಸಿದಾಗ ಮಾತಿಗೆ ಮಾತು ಬೆಳೆದು, ಆರೋಪಿಗಳು ದೂರುದಾರರ ಮೇಲೆ ಕೈಯಿಂದ ಹಾಗೂ ರಾಡ್‌ನಿಂದ ಹಲ್ಲೆ ನಡೆಸಲು ಯತ್ನಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಈ ದೃಶ್ಯವನ್ನು ಸಹಜುದ್ದೀನ್ ಅವರು ತಮ್ಮ ಮೊಬೈಲ್‌ನಲ್ಲಿ ವಿಡಿಯೋ ಮಾಡಲು ಮುಂದಾದಾಗ, ಆರೋಪಿಗಳು ಅವರಿಗೂ ಹಾಗೂ ಅವರ ತಂದೆಗೂ ಜೀವ ಬೆದರಿಕೆ ಒಡ್ಡಿದ್ದರು.

ಪೊಲೀಸ್ ಕಠಿಣ ಕ್ರಮ:

ಘಟನೆಗೆ ಸಂಬಂಧಿಸಿದಂತೆ ಸಹಜುದ್ದೀನ್ ಅವರು ಮುಲ್ಕಿ ಪೊಲೀಸ್ ಠಾಣೆಗೆ ನೀಡಿದ ದೂರಿನನ್ವಯ ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು. ತನಿಖೆಯ ವೇಳೆ ಆರೋಪಿಗಳು ವ್ಯವಸ್ಥಿತವಾಗಿ ಸಂಘಟಿತ ಅಪರಾಧಗಳಲ್ಲಿ ತೊಡಗಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ, ಪೊಲೀಸರು ಈ ಪ್ರಕರಣಕ್ಕೆ ಕಠಿಣವಾದ ‘ಕೆಕೋಕಾ’ (KCOCA) ಕಾಯ್ದೆಯನ್ನು ಅಳವಡಿಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು. ತರುವಾಯ ಪ್ರಕರಣವನ್ನು ಮೈಸೂರಿನ ಕೆಕೋಕಾ ವಿಶೇಷ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿತ್ತು.

ನ್ಯಾಯಾಲಯದಲ್ಲಿ ವಾದ-ವಿವಾದ:

ಆರೋಪಿಗಳ ಪರವಾಗಿ ಪ್ರಖ್ಯಾತ ಕಾನೂನು ಸಂಸ್ಥೆ ಪುತ್ತೂರಿನ ‘ಕಜೆ ಲಾ ಚೇಂಬರ್ಸ್’ನ ಇದರ ಪ್ರಖ್ಯಾತ ವಕೀಲರಾದ ಮಹೇಶ್ ಕಜೆ, ಪ್ರಸಾದ್ ಕುಮಾರ್ ಹಾಗೂ ರಾಘವೇಂದ್ರ ಸಿ.ವಿ. ಅವರು ಮೈಸೂರಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ಕೆಕೋಕಾ ವಿಶೇಷ ನ್ಯಾಯಾಲಯಕ್ಕೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.

ಬಂಧಿತರ ಪರ ವಕೀಲರ ಸುದೀರ್ಘ ವಾದ ಮತ್ತು ಪ್ರತಿವಾದಗಳನ್ನು ಆಲಿಸಿದ ಮಾನ್ಯ ನ್ಯಾಯಾಲಯವು, ದಿನಾಂಕ 02-06-2026 ರಂದು ಆರೋಪಿಗಳಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ.

You may also like

News

ಕಸ ಗುಡಿಸುವ ಕಾಯಕದಿಂದ ಫಾರ್ಚುನರ್‌ವರೆಗೆ – ಸೇಸಪ್ಪ ಅವರ ಯಶೋಗಾಥೆ!

ಬಡತನ ಕನಸು ಕಾಣುವುದಕ್ಕೆ ಅಡ್ಡಿಯಾಗದು ಎಂಬುದಕ್ಕೆ ಬಂಟ್ವಾಳ ತಾಲೂಕಿನ ನಾವೂರು ನಿವಾಸಿ ಹಾಗೂ ಬಂಟ್ವಾಳ ಪುರಸಭೆಯ ಪೌರಕಾರ್ಮಿಕ ಸೇಸಪ್ಪ ಅವರ ಬದುಕು ಉತ್ತಮ ಉದಾಹರಣೆ. ಲಕ್ಷಾಂತರ ರೂಪಾಯಿ
News

ಪೊಂಪೈ ಕಾಲೇಜು ಐಕಳದಲ್ಲಿ ಮಾದಕ ವಸ್ತು, ಮಾನವ ಕಳ್ಳಸಾಗಣೆ ವಿರುದ್ಧ ಜಾಗೃತಿ

ಯುವಜನತೆ ಜಾಗೃತರಾದರೆ ಸಮಾಜ ಸುಧಾರಣೆ ಸಾಧ್ಯ – ಗಣೇಶ್ ಕುಮಾರ್ ಪೊಂಪೈ ಕಾಲೇಜು ಐಕಳದ ಆಂತರಿಕ ಗುಣಮಟ್ಟ ಭರವಸೆ ಕೋಶ, ಮಾನವ ಕಳ್ಳಸಾಗಣೆ ವಿರೋಧಿ ಸಂಘ, ಮಾದಕ

You cannot copy content of this page