July 14, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ರೊಜಾರಿಯೊ ಕ್ಯಾಥೆಡ್ರಲ್‌ನಲ್ಲಿ ಹೃದಯ ಆರೋಗ್ಯ ಜಾಗೃತಿ ಹಾಗೂ ಸಿಪಿಆರ್ ತರಬೇತಿ

ಮಂಗಳೂರು ಧರ್ಮಕ್ಷೇತ್ರಕ್ಕೆ ಒಳಪಟ್ಟ ರೊಜಾರಿಯೊ ಕ್ಯಾಥೆಡ್ರಲ್‌ನ ಆರೋಗ್ಯ ಆಯೋಗವು ಚರ್ಚ್ ಪಾಲನಾ ಸಮಿತಿಯ 21 ಆಯೋಗಗಳ ಸಹಯೋಗದಲ್ಲಿ “A Healthy Heart for a Blessed Life” ಎಂಬ ಧ್ಯೇಯದಡಿ ಹೃದಯ ಆರೋಗ್ಯ ಜಾಗೃತಿ ಉಪನ್ಯಾಸ ಹಾಗೂ ಸಿಪಿಆರ್ (Cardiopulmonary Resuscitation) ತರಬೇತಿಯನ್ನು ಜುಲಾಯ್ 12ರಂದು ಭಾನುವಾರ ರೊಜಾರಿಯೊ ಕಾನ್ಫರೆನ್ಸ್ ಹಾಲ್‌ನಲ್ಲಿ ಯಶಸ್ವಿಯಾಗಿ ಆಯೋಜಿಸಿತು.

ಮಕ್ಕಳು, ಯುವಕರು, ವಯಸ್ಕರು ಹಾಗೂ ಹಿರಿಯ ನಾಗರಿಕರು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ಹೃದಯದ ಆರೋಗ್ಯ ಕಾಪಾಡುವ ವಿಧಾನಗಳು, ಹೃದಯಾಘಾತದ ಆರಂಭಿಕ ಲಕ್ಷಣಗಳು ಹಾಗೂ ತುರ್ತು ಸಂದರ್ಭಗಳಲ್ಲಿ ಸಮಯೋಚಿತ ವೈದ್ಯಕೀಯ ನೆರವಿನ ಮಹತ್ವದ ಕುರಿತು ಅಮೂಲ್ಯ ಮಾಹಿತಿ ಪಡೆದುಕೊಂಡರು.

ಕಾರ್ಯಕ್ರಮದ ಮುಖ್ಯ ಉಪನ್ಯಾಸಕರಾಗಿ ಭಾಗವಹಿಸಿದ್ದ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಅಸೋಸಿಯೇಟ್ ಪ್ರೊಫೆಸರ್ ಡಾ. ಶಾನನ್ ಫೆರ್ನಾಂಡಿಸ್ (MBBS, MD, DNB) ಅವರು ಹೃದಯ ರೋಗಗಳಿಗೆ ಕಾರಣವಾಗುವ ಅಂಶಗಳು, ಅಪಾಯದ ಲಕ್ಷಣಗಳು, ತಡೆಗಟ್ಟುವ ಕ್ರಮಗಳು ಹಾಗೂ ಆರೋಗ್ಯಕರ ಜೀವನಶೈಲಿಯ ಮಹತ್ವವನ್ನು ವಿವರಿಸಿದರು. ಸಮತೋಲನ ಆಹಾರ, ನಿಯಮಿತ ವ್ಯಾಯಾಮ, ಒತ್ತಡ ನಿಯಂತ್ರಣ ಹಾಗೂ ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಹೃದಯವನ್ನು ಆರೋಗ್ಯಕರವಾಗಿ ಕಾಪಾಡಿಕೊಳ್ಳಬಹುದೆಂದು ಅವರು ಸಲಹೆ ನೀಡಿದರು.

ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದ ಸಿಪಿಆರ್ ಪ್ರಾಯೋಗಿಕ ತರಬೇತಿಯಲ್ಲಿ ಡಾ. ಶಾನನ್ ಫೆರ್ನಾಂಡಿಸ್ ಹಾಗೂ ಅವರ ತಂಡವು ಹೃದಯ ಸಂಬಂಧಿತ ತುರ್ತು ಪರಿಸ್ಥಿತಿಯಲ್ಲಿ ಸರಿಯಾದ ರೀತಿಯಲ್ಲಿ ಸಿಪಿಆರ್ ನೀಡುವ ವಿಧಾನವನ್ನು ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು. ವೈದ್ಯಕೀಯ ಸಿಬ್ಬಂದಿ ಆಗಮಿಸುವ ಮುನ್ನ ಸರಿಯಾದ ಸಮಯದಲ್ಲಿ ನೀಡುವ ಸಿಪಿಆರ್ ಜೀವ ಉಳಿಸುವಲ್ಲಿ ಅತ್ಯಂತ ಪರಿಣಾಮಕಾರಿ ಎಂಬುದನ್ನು ಅವರು ತಿಳಿಸಿದರು.

ಸಂವಾದಾತ್ಮಕ ಅಧಿವೇಶನದಲ್ಲಿ ಭಾಗವಹಿಸಿದ್ದವರು ಹೃದಯ ಆರೋಗ್ಯ, ರಕ್ತದೊತ್ತಡ, ಕೊಲೆಸ್ಟ್ರಾಲ್, ಮಧುಮೇಹ ಹಾಗೂ ತುರ್ತು ಚಿಕಿತ್ಸೆಗೆ ಸಂಬಂಧಿಸಿದ ಪ್ರಶ್ನೆಗಳಿಗೆ ತಜ್ಞರಿಂದ ಉತ್ತರಗಳನ್ನು ಪಡೆದುಕೊಂಡರು. ಆರೋಗ್ಯ ಆಯೋಗದ ಸಂಚಾಲಕರಾದ ಭಗಿನಿ ಡಾ. ಸಾರಿತಾ ಡಿಕುನ್ಹಾ ಅವರು ಸಭೆಯನ್ನು ಸ್ವಾಗತಿಸಿದರು. ವಂದನೀಯ ಫಾದರ್ ವಲೇರಿಯನ್ ಫೆರ್ನಾಂಡಿಸ್ ಅವರು ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಸಿರಿಲ್ ರೊಜಾರಿಯೊ, ಕಾರ್ಯದರ್ಶಿ ಇಡಾ ಫುರ್ಟಾಡೊ ಹಾಗೂ ಆಯೋಗಗಳ ಸಂಯೋಜಕರಾದ ಆಲ್ಡ್ರಿನ್ ವಾಜ್,  ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಭಗಿನಿ ರೆಶ್ಮಾ ಡಿಸೋಜ ವಂದನಾರ್ಪಣೆ ಸಲ್ಲಿಸಿದರರು. ಡೊರಿನ್ ಡಿಸೋಜ ಕಾರ್ಯಕ್ರಮವನ್ನು ನಿರೂಪಿಸಿದರು.

You may also like

News

ಪಾನೀರ್ ಚರ್ಚ್‌ನಲ್ಲಿ ಆಧಾರ್ ಮತ್ತು ವಿಮೆ ಜಾಗೃತಿ ಅಭಿಯಾನ – 200ಕ್ಕೂ ಹೆಚ್ಚು ಜನರು ಪಡೆದ ಅಂಚೆ ಇಲಾಖೆ ಸೇವೆಗಳ ಲಾಭ

ಕುಟುಂಬದ ಆರ್ಥಿಕ ಭದ್ರತೆಗೆ ವಿಮೆ ಮಾಡಿಸಿಕೊಳ್ಳುವುದು ಅತ್ಯಗತ್ಯವಾದ ರಕ್ಷಾಕವಚ – ಫಾದರ್ ವಿಕ್ಟರ್ ಡಿಮೆಲ್ಲೊ ಮಂಗಳೂರು ಧರ್ಮಕ್ಷೇತ್ರಕ್ಕೆ ಒಳಪಟ್ಟ ಪಾನೀರ್ ಚರ್ಚ್ ಮತ್ತು ಭಾರತೀಯ ಅಂಚೆ ಇಲಾಖೆ
News

MANGALURU HOSPITAL ACHIEVES MEDICAL MILESTONE WITH FIRST ROBOTIC KNEE SURGERY

In a major leap forward for advanced healthcare in the region, Father Muller Charitable Institutions (FMCI) has successfully performed its

You cannot copy content of this page