ಸೆಪ್ಟೆಂಬರ್ 8ರಂದು ಹರಿಹರ ಆರೋಗ್ಯಮಾತೆಯ ವಾರ್ಷಿಕ ಮಹೋತ್ಸವ
‘ದೀನದಲಿತರ ತಾಯಿ ಮೇರಿ’ಯ ದರ್ಶನಕ್ಕೆ ಹರಿದುಬರಲಿರುವ ಭಕ್ತಸಾಗರ

ಶಿವಮೊಗ್ಗ ಧರ್ಮಕ್ಷೇತ್ರಕ್ಕೆ ಒಳಪಟ್ಟ ಹರಿಹರದ ಪ್ರಸಿದ್ಧ ಆರೋಗ್ಯಮಾತೆ ಬಸಿಲಿಕಾದ ವಾರ್ಷಿಕ ಮಹೋತ್ಸವವು ಸೆಪ್ಟೆಂಬರ್ 8ರಂದು ‘ಮೇರಿ – ದೀನದಲಿತರ ತಾಯಿ’ ಎಂಬ ಧ್ಯೇಯವಾಕ್ಯದೊಂದಿಗೆ ಭಕ್ತಿಭಾವ ಹಾಗೂ ಸಂಭ್ರಮದಿಂದ ನಡೆಯಲಿದೆ. ಕರ್ನಾಟಕದ ವಿವಿಧ ಜಿಲ್ಲೆಗಳು, ನೆರೆಯ ರಾಜ್ಯಗಳು ಹಾಗೂ ವಿವಿಧ ಭಾಷಾ ಸಮುದಾಯಗಳಿಂದ ಸಾವಿರಾರು ಭಕ್ತರು ಮಹೋತ್ಸವದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಆಗಸ್ಟ್ 30ರಿಂದ 9 ದಿನಗಳ ನೊವೆನಾ ಪ್ರಾರ್ಥನೆ:
ಮಹೋತ್ಸವದ ಅಂಗವಾಗಿ ಆಗಸ್ಟ್ 30ರಿಂದ ಸೆಪ್ಟೆಂಬರ್ 7ರವರೆಗೆ ಪ್ರತಿದಿನ ಸಂಜೆ 5.30ಕ್ಕೆ ನೊವೆನಾ ಪ್ರಾರ್ಥನೆ ನಡೆಯಲಿದೆ. ಆಗಸ್ಟ್ 30ರಂದು ಕಾರವಾರ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರು ಹಾಗೂ ಶಿವಮೊಗ್ಗ ಧರ್ಮಕ್ಷೇತ್ರದ ಅಪೋಸ್ಟೋಲಿಕ್ ಅಡ್ಮಿನಿಸ್ಟ್ರೇಟರ್ ಪರಮ ಪೂಜ್ಯ ಅತೀ ವಂದನೀಯ ಡಾ. ದುಮಿಂಗ್ ಡಯಾಸ್ ಅವರು ಧ್ವಜಾರೋಹಣ ನೆರವೇರಿಸಲಿರುವರು.
ನೊವೆನಾ ದಿನಗಳಲ್ಲಿ ಮೆರವಣಿಗೆ, ನೊವೆನಾ ಪ್ರಾರ್ಥನೆ, ಪುಷ್ಪಾರ್ಚನೆ, ಪವಿತ್ರ ಬಲಿಪೂಜೆ, ವಿಶೇಷ ಆರಾಧನೆ ಹಾಗೂ ರೋಗಿಗಳಿಗಾಗಿ ಗುಣಮುಖತಾ ಪ್ರಾರ್ಥನೆ ನಡೆಯಲಿದೆ. ಸೆಪ್ಟೆಂಬರ್ 7ರಂದು ಮೈಸೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಪರಮ ಪೂಜ್ಯ ಅತೀ ವಂದನೀಯ ಡಾ. ಫ್ರಾನ್ಸಿಸ್ ಸೆರಾವೊ ಅವರು ಸಂಜೆ 5.30ಕ್ಕೆ ದಿವ್ಯ ಪವಿತ್ರ ಬಲಿಪೂಜೆ ನೆರವೇರಿಸುವರು.

ಸೆಪ್ಟೆಂಬರ್ 8ರಂದು ವಿವಿಧ ಭಾಷೆಗಳಲ್ಲಿ ಬಲಿಪೂಜೆ:
ಮಹೋತ್ಸವದ ದಿನವಾದ ಸೆಪ್ಟೆಂಬರ್ 8ರಂದು ಬೆಳಗ್ಗೆಯಿಂದಲೇ ವಿವಿಧ ಭಾಷೆಗಳಲ್ಲಿ ಪವಿತ್ರ ಬಲಿಪೂಜೆಗಳು ನಡೆಯಲಿವೆ. ಬೆಳಗ್ಗೆ 5.15ಕ್ಕೆ ಕನ್ನಡ, 6.15ಕ್ಕೆ ತೆಲುಗು, 7.15ಕ್ಕೆ ಮಲಯಾಳಂ (ಸಿರೋ-ಮಲಬಾರ್ ವಿಧಿ), 8.45ಕ್ಕೆ ತಮಿಳು ಹಾಗೂ 10 ಗಂಟೆಗೆ ಇಂಗ್ಲಿಷ್ ಬಲಿಪೂಜೆ ನಡೆಯಲಿದೆ.

ಬೆಳಗ್ಗೆ 10.45ಕ್ಕೆ ಶಿವಮೊಗ್ಗ ಧರ್ಮಕ್ಷೇತ್ರದ ಅಪೋಸ್ಟೋಲಿಕ್ ಅಡ್ಮಿನಿಸ್ಟ್ರೇಟರ್ ಅವರನ್ನು ಸ್ವಾಗತಿಸಲಾಗುವುದು. ಬಳಿಕ 11 ಗಂಟೆಗೆ ಕನ್ನಡದಲ್ಲಿ ನಡೆಯುವ ಮುಖ್ಯ ಸಂಭ್ರಮದ ಬಲಿಪೂಜೆಯ ಅಧ್ಯಕ್ಷತೆಯನ್ನು ಪರಮ ಪೂಜ್ಯ ಅತೀ ವಂದನೀಯ ಡಾ. ದುಮಿಂಗ್ ಡಯಾಸ್ ವಹಿಸುವರು.
ಮಧ್ಯಾಹ್ನ 1.15ಕ್ಕೆ ಕೊಂಕಣಿ ಬಲಿಪೂಜೆ, 2.30ಕ್ಕೆ ಯೇಸು ಸ್ಪರ್ಶ ತಂಡದಿಂದ ಪವಿತ್ರ ಆರಾಧನೆ, ಸಂಜೆ 4ಕ್ಕೆ ಕನ್ನಡ ಬಲಿಪೂಜೆ ಹಾಗೂ 5ಕ್ಕೆ ಭವ್ಯ ಶೋಭಾಯಾತ್ರೆ ನಡೆಯಲಿದೆ. ರಾತ್ರಿ 7.30ಕ್ಕೆ ಕನ್ನಡ ಬಲಿಪೂಜೆ ಹಾಗೂ 8.30ಕ್ಕೆ ಧನ್ಯವಾದ ಸಮರ್ಪಣೆ ನಡೆಯಲಿದೆ.


ಸೆಪ್ಟೆಂಬರ್ 9ರಂದು ವಾಹನ ಹಾಗೂ ಭಕ್ತರ ಆಶೀರ್ವಾದ:
ಸೆಪ್ಟೆಂಬರ್ 9ರಂದು ಬೆಳಗ್ಗೆ 9 ಗಂಟೆಗೆ ಯಾತ್ರಿಕರ ವಾಹನಗಳಿಗೆ ಆಶೀರ್ವಾದ ಹಾಗೂ ಸಂಜೆ 5 ಗಂಟೆಗೆ ಭಕ್ತರಿಗೆ ವಿಶೇಷ ಆಶೀರ್ವಾದ ನೀಡಲಾಗುವುದು. ಅಂದು ಬೆಳಗ್ಗೆ 8, 10.30, ಮಧ್ಯಾಹ್ನ 12 ಹಾಗೂ ಸಂಜೆ 4 ಗಂಟೆಗೆ ಪವಿತ್ರ ಬಲಿಪೂಜೆಗಳು ನಡೆಯಲಿವೆ.

ಯಾತ್ರಿಕರಿಗೆ ವಿಶೇಷ ಸೌಲಭ್ಯ:
ಭಕ್ತರ ಅನುಕೂಲಕ್ಕಾಗಿ ದಿನವಿಡೀ ವಿವಿಧ ಭಾಷೆಗಳಲ್ಲಿ ಪಾಪನಿವೇದನೆ ಹಾಗೂ ಆಶೀರ್ವಾದದ ವ್ಯವಸ್ಥೆ ಇರಲಿದೆ. ಚರ್ಚ್ನ ಮಳಿಗೆಯಲ್ಲಿ ಹೂವು, ಮೇಣದಬತ್ತಿ, ಧಾರ್ಮಿಕ ವಸ್ತುಗಳು, ಪವಿತ್ರ ಜಲ, ಎಣ್ಣೆ ಹಾಗೂ ಬಸಿಲಿಕಾದ ಇತಿಹಾಸದ ಪುಸ್ತಕಗಳು ಲಭ್ಯವಿರಲಿವೆ. ಚಿನ್ನ, ಬೆಳ್ಳಿ ಹಾಗೂ ಸೀರೆಗಳ ಕಾಣಿಕೆಗಳನ್ನು ಪ್ರಿಸ್ಬಿಟರಿ ಸಮೀಪ ಸ್ವೀಕರಿಸಲಾಗುವುದು. ಬಲಿಪೂಜೆ ಉದ್ದೇಶಗಳು ಹಾಗೂ ಕಾಣಿಕೆಗಳನ್ನು ಆನ್ಲೈನ್ ಮೂಲಕವೂ ಸಲ್ಲಿಸಬಹುದಾಗಿದೆ.
ಹರಿಹರ ಮಾತೆಯ ಆಶೀರ್ವಾದ ಪಡೆಯಲು ಹಾಗೂ ಮಹೋತ್ಸವದಲ್ಲಿ ಭಕ್ತಿಭಾವದಿಂದ ಪಾಲ್ಗೊಳ್ಳಲು ಎಲ್ಲ ಭಕ್ತರಿಗೂ ಬಸಿಲಿಕಾದ ರೆಕ್ಟರ್ ಅತೀ ವಂದನೀಯ ಜಾರ್ಜ್ ಕೆ.ಎ., ಧರ್ಮಗುರುಗಳು, ಧಾರ್ಮಿಕ ಸಹೋದರ-ಸಹೋದರಿಯರು ಹಾಗೂ ಭಕ್ತರ ಪರವಾಗಿ ಆತ್ಮೀಯ ಆಹ್ವಾನ ನೀಡಲಾಗಿದೆ. ಪ್ರಾರ್ಥನಾ ವಿನಂತಿಗಳು ಹಾಗೂ ಮಾತೆಯ ಕೃಪೆಯಿಂದ ದೊರೆತ ಅನುಗ್ರಹಗಳ ಸಾಕ್ಷ್ಯಗಳನ್ನು ರೆಕ್ಟರ್ ಕಚೇರಿಗೆ ಸಲ್ಲಿಸಬಹುದು ಎಂದು ಪತ್ರಿಕ ಪ್ರಕಟನೆಯಲ್ಲಿ ತಿಳಿಸಲಾಗಿದೆ.




