September 11, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಸಂತ ಆಗ್ನೆಸ್ ಕಾಲೇಜಿನಲ್ಲಿ ಪರಿಸರ ಸಂರಕ್ಷಣೆ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ

ಪವಿತ್ರ ಭೂದೃಶ್ಯಗಳ ಸಂರಕ್ಷಣೆಗೆ ಸ್ಥಳೀಯ ಪರಂಪರೆಯ ಜ್ಞಾನವೇ ದಾರಿದೀಪ

ಮಂಗಳೂರು: ಭಾರತದ ಸ್ಥಳೀಯ ಸಮುದಾಯಗಳು ತಲೆತಲಾಂತರಗಳಿಂದ ಅನುಸರಿಸಿಕೊಂಡು ಬಂದಿರುವ ಸಾಂಪ್ರದಾಯಿಕ ಪರಿಸರ ಸಂರಕ್ಷಣಾ ಪದ್ಧತಿಗಳು ಇಂದಿನ ಪರಿಸರ ಸವಾಲುಗಳಿಗೆ ಪರಿಣಾಮಕಾರಿ ಪರಿಹಾರಗಳನ್ನು ನೀಡಬಲ್ಲವು ಎಂದು ತಜ್ಞರು ಅಭಿಪ್ರಾಯಪಟ್ಟರು. ಮಂಗಳೂರಿನ ಸಂತ ಆಗ್ನೆಸ್ ಕಾಲೇಜು (ಸ್ವಾಯತ್ತ), ವತಿಯಿಂದ “Sacred Landscape: Ecological Sanctuaries of India’s Indigenous Heritage” ಎಂಬ ವಿಷಯದ ಕುರಿತು ಸೆಪ್ಟೆಂಬರ್ 10ರಂದು ಗುರುವಾರ ರಾಷ್ಟ್ರೀಯ ವಿಚಾರ ಸಂಕಿರಣ ಆಯೋಜಿಸಲಾಯಿತು.

ವಿಚಾರ ಸಂಕಿರಣದಲ್ಲಿ ಭಾರತದ ಸ್ಥಳೀಯ ಸಮುದಾಯಗಳ ಸಾಂಪ್ರದಾಯಿಕ ಜ್ಞಾನ, ಪವಿತ್ರ ಭೂದೃಶ್ಯಗಳು, ಜೀವವೈವಿಧ್ಯ ಸಂರಕ್ಷಣೆ ಹಾಗೂ ಪ್ರಕೃತಿಯೊಂದಿಗೆ ಮಾನವನಿಗಿರುವ ಆಳವಾದ ಸಂಬಂಧ ಕುರಿತು ವಿಚಾರ ವಿನಿಮಯ ನಡೆಯಿತು. ಪವಿತ್ರ ವನಗಳು, ನೈಸರ್ಗಿಕ ತಾಣಗಳು ಹಾಗೂ ಸ್ಥಳೀಯ ಸಂರಕ್ಷಣಾ ಪರಂಪರೆಗಳನ್ನು ಉಳಿಸಿ ಬೆಳೆಸುವ ಅಗತ್ಯವನ್ನು ವಕ್ತಾರರು ಒತ್ತಿಹೇಳಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ದಕ್ಷಿಣ ಕನ್ನಡ ಮಂಗಳೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್, IFS ಹಾಗೂ ಗೌರವ ಅತಿಥಿಯಾಗಿ ಕರ್ನಾಟಕ ಸರ್ಕಾರದ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಶಾಲೇಟ್ ಪಿಂಟೋ ಭಾಗವಹಿಸಿದ್ದರು. ಸಂತ ಆಗ್ನೆಸ್ ಕಾಲೇಜಿನ ಪ್ರಾಂಶುಪಾಲರಾದ ಭಗಿನಿ ಡಾ. ವೆನಿಸ್ಸಾ AC ಅಧ್ಯಕ್ಷತೆ ವಹಿಸಿದ್ದರು.

ವಿಚಾರ ಸಂಕಿರಣವು ಅಧ್ಯಾಪಕರು, ಸಂಶೋಧಕರು, ವಿದ್ಯಾರ್ಥಿಗಳು ಹಾಗೂ ಪರಿಸರಾಸಕ್ತರಿಗೆ ಜ್ಞಾನ ಹಂಚಿಕೆ ಮತ್ತು ಚಿಂತನೆಗೆ ಉತ್ತಮ ವೇದಿಕೆಯಾಗಿ ಪರಿಣಮಿಸಿತು. ಪ್ರಕೃತಿಯನ್ನು ಕೇವಲ ಸಂಪನ್ಮೂಲವಾಗಿ ನೋಡದೆ, ಅದನ್ನು ನಮ್ಮ ಪರಂಪರೆ ಮತ್ತು ಬದುಕಿನ ಅವಿಭಾಜ್ಯ ಅಂಗವಾಗಿ ಸಂರಕ್ಷಿಸಬೇಕೆಂಬ ಸಂದೇಶವೂ ಇಲ್ಲಿ ಪ್ರತಿಧ್ವನಿಸಿತು.

ಸಂತ ಆಗ್ನೆಸ್ ಕಾಲೇಜಿನಲ್ಲಿ ಸ್ಥಾಪಿಸಲಾಗಿರುವ ಭಾರತೀಯ ಜ್ಞಾನ ವ್ಯವಸ್ಥೆಗಳ (IKS) ಕೇಂದ್ರದ ಮಹತ್ವವನ್ನೂ ಈ ಸಂದರ್ಭದಲ್ಲಿ ಪ್ರಸ್ತಾಪಿಸಲಾಯಿತು. ಭಾರತದ ಶ್ರೀಮಂತ ಸಾಂಪ್ರದಾಯಿಕ ಜ್ಞಾನ, ಸಂಸ್ಕೃತಿ ಹಾಗೂ ಪರಿಸರ ಪರಂಪರೆಯನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ತಲುಪಿಸುವಲ್ಲಿ ಕೇಂದ್ರದ ಪಾತ್ರವನ್ನು ವಿವರಿಸಲಾಯಿತು.

ವಿಚಾರ ಸಂಕಿರಣದ ಸಂಯೋಜಕರಾಗಿ ಡಾ. ಸೋನಿಯಾ ಲೋಬೋ, IQAC ಸಂಯೋಜಕರಾಗಿ ಡಾ. ಸಬೀನಾ ಡಿಸೋಜ ಹಾಗೂ IKS ಕೇಂದ್ರದ ಸಂಯೋಜಕರಾಗಿ ಡಾ. ವಿಶಾಲಾ B.K. ಕಾರ್ಯನಿರ್ವಹಿಸಿದರು. ಬಾಟನಿ ವಿಭಾಗದ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳ ಸಕ್ರಿಯ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.

ಸ್ಥಳೀಯ ಜ್ಞಾನವನ್ನು ಗೌರವಿಸಿ, ಪವಿತ್ರ ಭೂದೃಶ್ಯಗಳನ್ನು ಸಂರಕ್ಷಿಸುವ ಮೂಲಕವೇ ಪ್ರಕೃತಿಯೊಂದಿಗೆ ನಮ್ಮ ಶಾಶ್ವತ ಸಂಬಂಧವನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯಬಹುದು ಎಂಬ ಆಶಯದೊಂದಿಗೆ ರಾಷ್ಟ್ರೀಯ ವಿಚಾರ ಸಂಕಿರಣ ಅರ್ಥಪೂರ್ಣವಾಗಿ ಸಮಾಪ್ತಿಗೊಂಡಿತು.

You may also like

News

ಸೆಪ್ಟೆಂಬರ್ 19ರಂದು ಕಾಞಂಗಾಡ್‌ನಲ್ಲಿ ಶ್ರೀ ಅವಧೂತಾನಂದ ಸ್ವಾಮೀಜಿ ಅನುಭವ ಕಥನದ ಪುಸ್ತಕ ಬಿಡುಗಡೆ

ಕಾಸರಗೋಡು: ಕಾಞಂಗಾಡ್‌ನ ಹೊಸದುರ್ಗದಲ್ಲಿರುವ ಭಗವಾನ್ ಶ್ರೀ ನಿತ್ಯಾನಂದ ಆಶ್ರಮದಲ್ಲಿ ಸೆಪ್ಟೆಂಬರ್ 19ರಂದು ಶನಿವಾರ ಬೆಳಿಗ್ಗೆ 10:45ಕ್ಕೆ ಪೂಜ್ಯ ಶ್ರೀ ಅವಧೂತಾನಂದ ಸ್ವಾಮೀಜಿ ಅವರ ಜೀವನ, ಅನುಭವ ಹಾಗೂ
News

Japanese Delegation from Kyoto Kagaku Visits Father Muller Charitable Institutions

A delegation from Kyoto Kagaku, Japan, visited the Father Muller Charitable Institutions (FMCI) on Monday, September 7, 2026. The delegation

You cannot copy content of this page