May 16, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಕೇಳುವವರಿಲ್ಲದ ಅವೈಜ್ಞಾನಿಕ ಹೆದ್ದಾರಿ ಕಾಮಗಾರಿಗೆ ಉಸಿರುಗಟ್ಟಿದ ಕರಾವಳಿ ಜನರು – ಹನೀಫ್ ಖಾನ್ ಕೊಡಾಜೆ, ಪ್ರಧಾನ ಕಾರ್ಯದರ್ಶಿ, ಮುಸ್ಲಿಂ ಸಮಾಜ ಬಂಟ್ವಾಳ

ರಾಷ್ಟ್ರೀಯ ಹೆದ್ಧಾರಿ 75ರ ಬಂಟ್ವಾಳ-ಅಡ್ಡಹೊಳೆ ಚತುಷ್ಪತ ರಸ್ತೆ ಕಾಮಗಾರಿಯು ನಿಧಾನವಾಗಿ ಸಾಗುತ್ತಿದೆ. ಅದರಲ್ಲೂ ಬಂಟ್ವಾಳದಿಂದ ಉಪ್ಪಿನಂಗಡಿವರೆಗಿನ ರಸ್ತೆ ಕಾಮಗಾರಿಯು ಅತ್ಯಂತ ಅವೈಜ್ಞಾನಿಕವಾಗಿ ನಡೆಯುತ್ತಿದ್ದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು, ಜಿಲ್ಲಾಡಳಿತದ ನಿರ್ಲಕ್ಷ್ಯದಿಂದ ಜನರು ರೋಸಿ ಹೋಗಿದ್ದಾರೆ.  ಐದಾರು ವರ್ಷಗಳಿಂದ ಹೆದ್ದಾರಿ ಸಮೀಪದ ಮನೆಯಿರುವವರು, ಪ್ರಯಾಣಿಕರು, ಕಾರ್ಮಿಕರು ನಿತ್ಯ ನಿರಂತರ ಧೂಳು ಸೇವಿಸುತ್ತಾ ಶ್ವಾಸಕೋಶ ಸಂಬಂಧೀ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಬಂಟ್ವಾಳದಿಂದ ಉಪ್ಪಿನಂಗಡಿ ವರೆಗೆ ಇರುವ ಆಸ್ಪತ್ರೆ, ಕ್ಲಿನಿಕ್ ಗೆ ಪ್ರತಿದಿನ ಬರುವ ಹೆಚ್ಚಿನ ಜನರಲ್ಲಿ ಅಸ್ತಮಾ, ಕೆಮ್ಮು, ಶೀತದಂತಹ ಶ್ವಾಸಕೋಶ ಸಂಬಂಧೀ ಖಾಯಿಲೆಗಳಿಂದ ಬಳಲುತ್ತಿದ್ದಾರೆ ಎಂದರೆ ಪರಿಸ್ಥಿತಿಯ ಗಂಭೀರತೆಯನ್ನು ಅರಿಯಬಹುದು.

ರಸ್ತೆ ನಿರ್ಮಿಸುವಾಗ ಟ್ರಾಫಿಕ್ ನಿಯಂತ್ರಿಸಲು ಪರ್ಯಾಯ ಸರ್ವಿಸ್ ರಸ್ತೆ ಮಾಡಿಕೊಡಬೇಕೆಂದು ಹೆದ್ದಾರಿ ಮಸೂದೆಯಲ್ಲಿ ನಿಯಮ ಇದ್ದರೂ ಅದನ್ನು ಇಲ್ಲಿ ಗಾಳಿಗೆ ತೂರಲಾಗಿದೆ. ಹೊಸ ರಸ್ತೆ ನಿರ್ಮಾಣವಾಗುವವರೆಗೆ ಜನರು ಪ್ರಾಣ ಕೈಯಲ್ಲಿ ಹಿಡಿದು ಕೆಸರು ಗುಂಡಿಯಲ್ಲಿ ವಾಹನ ಚಲಾಯಿಸಬೇಕಾದ ಅನಿವಾರ್ಯತೆಯನ್ನು ಇಲ್ಲಿ ನಿರ್ಮಿಸಲಾಗಿದೆ. ಹಿಂದೆ ಕೆಲವೊಂದು ಸಂಘಟನೆಗಳು ಅವೈಜ್ಞಾನಿಕ ರಸ್ತೆ ಕಾಮಗಾರಿ ವಿರುದ್ಧ ಪ್ರತಿಭಟಿಸಿದಾಗ ಜಿಲ್ಲಾಧಿಕಾರಿಯವರು ಕಾಟಾಚಾರಕ್ಕೆ ಭೇಟಿ ನೀಡಿ ಹೋದವರು ಮತ್ತೆ ಇದರ ಬಗ್ಗೆ ಗಮನ ಹರಿಸಿಲ್ಲ. ಜನಪ್ರತಿನಿಧಿಗಳಂತು ಎಸಿ ಹಾಕಿಕೊಂಡು ಇದೇ ಹೊಂಡ ಗುಂಡಿಯಲ್ಲಿ ತಮ್ಮ ಕಾರಿನಲ್ಲಿ ದಿನ ನಿತ್ಯ ಪ್ರಯಾಣಿಸುತ್ತಿದ್ದರೂ ರಸ್ತೆ ಕಾಮಗಾರಿಗೂ ತಮಗೂ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿದ್ಧಾರೆ.

ಪಕ್ಕದ ಕೇರಳದಲ್ಲಿ ಇದೇ ರೀತಿ ದ್ವಿಪಥ ಹೆದ್ದಾರಿಯನ್ನು ಚತುಷ್ಪಥ ರಸ್ತೆಯಾಗಿ ಬದಲಾಯಿಸುವಾಗ ಬಹಳ ಎಚ್ಚರಿಕೆಯಿಂದ ಕಾಮಗಾರಿ ನಡೆಸಲಾಗುತ್ತಿದೆ. ಸರಿಯಾದ ಸರ್ವಿಸ್ ರಸ್ತೆ ನಿರ್ಮಿಸಿದ ನಂತರವೇ ಅಲ್ಲಿ ಮುಖ್ಯ ರಸ್ತೆಯ ಕೆಲಸ ಆರಂಭವಾಗುತ್ತದೆ. ಟ್ರಾಫಿಕ್ ಜಾಮ್ ಆಗದಂತೆ ಪೂರ್ವ ತಯಾರಿ ನಡೆಸಲಾಗಿದೆ. ಜನರ ಆರೋಗ್ಯದ ಬಗ್ಗೆ ಗಮನ ನೀಡಲಾಗಿದೆ. ಆದರೆ ಕರ್ನಾಟಕದ ಕರಾವಳಿಯಲ್ಲಿ ಮಾತ್ರ ಯಾಕೆ ಇಂತಹ ನಿರ್ಲಕ್ಷ್ಯ ಎಂಬುದು ಯಕ್ಷ ಪ್ರಶ್ನೆ. ಜನರಾಗಿಯೇ ಪ್ರಶ್ನಿಸದ ಹೊರತು ಇದು ಸದ್ಯಕ್ಕೆ ಪರಿಹಾರವಾಗುವಂತೆ ಕಾಣುತ್ತಿಲ್ಲ.

You may also like

News

ಧರ್ಮಾಧ್ಯಕ್ಷರಾಗಿ 30 ವರ್ಷಗಳ ಸೇವೆ – ನಿವೃತ್ತ ಬಿಷಪ್ ಅಲೋಶಿಯಸ್ ಪಾವ್ಲ್ ಡಿಸೋಜ ಅವರಿಗೆ ಜೆಪ್ಪುವಿನಲ್ಲಿ ಭವ್ಯ ಸನ್ಮಾನ

ಮಂಗಳೂರು ಧರ್ಮಕ್ಷೇತ್ರದ ನಿವೃತ್ತ ಬಿಷಪ್, ‘ಜನರ ಬಿಷಪ್’ ಎಂದೇ ಖ್ಯಾತರಾದ ಪರಮ ಪೂಜ್ಯ ಅತೀ ವಂದನೀಯ ಡಾ. ಅಲೋಶಿಯಸ್ ಪಾವ್ಲ್ ಡಿಸೋಜ ಅವರು ಧರ್ಮಾಧ್ಯಕ್ಷರಾಗಿ ದೀಕ್ಷೆ ಸ್ವೀಕರಿಸಿದ
News

ಮಣಿಪುರದಲ್ಲಿ ಪಾಸ್ಟರ್‌ಗಳ ಕ್ರೂರ ಹತ್ಯೆ – ಪ್ರೊಟೆಸ್ಟಂಟ್ ಕ್ರೈಸ್ತರ ಮಹಾಸಭಾ (DAPC) ತೀವ್ರ ಖಂಡನೆ

ಮಣಿಪುರದ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಇತ್ತೀಚೆಗೆ ಪಾಸ್ಟರ್‌ಗಳು ಮತ್ತು ಅವರ ಸಂಗಾತಿಯ ಮೇಲೆ ನಡೆದ ಕ್ರೂರ ಹತ್ಯೆಯನ್ನು ಭಾರತದಲ್ಲಿನ ‘ಡಯೋಸಿಸ್ ಆಫ್ ಆಲ್ ಪ್ರೊಟೆಸ್ಟೆಂಟ್ ಚರ್ಚ್’ (DAPC) ಮತ್ತು

You cannot copy content of this page