August 31, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಇನ್ನು ಮುಂದೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಆಸ್ತಿಗಳಿಗೂ ಇ-ಸ್ವತ್ತು ವಿತರಣೆ

ಪಂಚಾಯತ್ ರಾಜ್ ಹೊಸ ಅಧಿನಿಯಮ ಜಾರಿ

ಕರ್ನಾಟಕದ ಗ್ರಾಮೀಣ ಭಾಗದ ಆಸ್ತಿ ನಿರ್ವಹಣೆಯಲ್ಲಿ ಪಾರದರ್ಶಕತೆ ಮತ್ತು
ಸುಧಾರಣೆಗೆ ತರಲು ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಆಸ್ತಿಗಳಿಗೂ ಇ-ಖಾತಾ ನೀಡುವ ಬಗ್ಗೆ ಸಚಿವ ಸಂಪುಟ ಸಭೆ ಮಹತ್ವದ ತೀರ್ಮಾನ ಕೈಗೊಂಡಿದ್ದು, ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಕಳೆದ 2025ರ ಮಾರ್ಚ್ 14ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ‘ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993’ಕ್ಕೆ ತಿದ್ದುಪಡಿ ತರಲು ನಿರ್ಧರಿಸಲಾಗಿದೆ. ಈ ತಿದ್ದುಪಡಿಯ ಮೂಲಕ ರಾಜ್ಯದ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಎಲ್ಲಾ ಖಾಸಗಿ ಆಸ್ತಿಗಳಿಗೆ ಇ-ಖಾತೆ ನೀಡುವ ಪ್ರಕ್ರಿಯೆ ಆರಂಭವಾಗಲಿದೆ.

ಇ-ಖಾತೆ ಎಂದರೇನು?

ಇ-ಖಾತೆ ಎಂದರೆ ಡಿಜಿಟಲ್ ಆಸ್ತಿ ದಾಖಲೆ ಪದ್ಧತಿ. ಇದನ್ನು ಇ-ಸ್ವತ್ತು ತಂತ್ರಾಂಶದ ಮೂಲಕ ನಿರ್ವಹಿಸಲಾಗುತ್ತದೆ. ಈ ವ್ಯವಸ್ಥೆಯ ಮೂಲಕ ಗ್ರಾಮೀಣ ಪ್ರದೇಶದಲ್ಲಿನ ಮನೆ, ಭೂಮಿ ಮತ್ತು ಕಟ್ಟಡಗಳ ಮಾಲಿಕತ್ವ ವಿಸ್ತೀರ್ಣ, ಬಾಕಿ ತೆರಿಗೆ ಸೇರಿದಂತೆ ಎಲ್ಲಾ ಮಾಹಿತಿಯನ್ನು ಸರ್ಕಾರ ಆನ್‌ಲೈನ್‌ನಲ್ಲಿ ದಾಖಲು ಮಾಡಲಾಗುತ್ತದೆ.

ತಿದ್ದುಪಡಿ ನಿಯಮದಿಂದ ಆಗುವ ಪ್ರಯೋಜನಗಳು:-

199-ಬಿ ಮತ್ತು 199-ಸಿ ಸೆಕ್ಷನ್‌ಗಳ ಸೇರ್ಪಡೆ:- ಗ್ರಾಮೀಣ ಪ್ರದೇಶದ ಎಲ್ಲಾ ಖಾಸಗಿ ಆಸ್ತಿಗಳನ್ನು ಇ-ಸ್ವತ್ತು ವ್ಯಾಪ್ತಿಗೆ ತರಲು ಈ ಎರಡು ಹೊಸ ಸೆಕ್ಷನ್‌ಗಳನ್ನು ಸೇರ್ಪಡಿಸಲಾಗುತ್ತಿದೆ. ತಿದ್ದುಪಡಿಯು ಪ್ರಸ್ತುತ 1993ರ ಪಂಚಾಯತ್ ರಾಜ್ ಕಾಯ್ದೆಯಲ್ಲಿ ಅಸ್ತಿತ್ವದಲ್ಲಿರುವ ಶ್ರೇಣಿಗಳಿಗೆ ಪೂರಕವಾಗಲಿದೆ.

96 ಲಕ್ಷ ಅನಧಿಕೃತ ಆಸ್ತಿಗಳ ನಿಯಂತ್ರಣ:- ಈವರೆಗೆ ಕೇವಲ 44 ಲಕ್ಷ ಆಸ್ತಿಗಳೇ ಇ-ಸ್ವತ್ತು ತಂತ್ರಾಂಶದಲ್ಲಿ ದಾಖಲಾಗಿದ್ದು, ಉಳಿದ 96 ಲಕ್ಷ ಆಸ್ತಿಗಳು ಸಿಸ್ಟಮ್‌ನ ಹೊರಗಿದ್ದವು. ಇವುಗಳ ಮೇಲೆ ಸೂಕ್ತ ಶುಲ್ಕ ಅಥವಾ ದಂಡ ವಿಧಿಸಿ, ಸರಕಾರವು ಇವುಗಳನ್ನು ಇ-ಸ್ವತ್ತು ವ್ಯಾಪ್ತಿಗೆ ತರಲು ಯೋಜಿಸುತ್ತಿದೆ.

ನೋಂದಣಿಯಾದ ಹಾಗೂ ಕ್ರಮಬದ್ಧವಲ್ಲದ ಆಸ್ತಿಗಳ ದಾಖಲೆ:– 2013ರ ನಂತರ ಅಥವಾ ಮೊದಲು ನೋಂದಣಿಯಾದ ಎಲ್ಲಾ ನಿವೇಶನಗಳು ಹಾಗೂ ಕಟ್ಟಡಗಳು ಇ-ಖಾತೆಗೆ ಒಳಪಡುತ್ತವೆ. ಇದರಿಂದ ಆಸ್ತಿ ಮಾರಾಟ ಅಥವಾ ಖರೀದಿಯ ಸಮಯದಲ್ಲಿ ಯಾವುದೇ ಕಾನೂನು ತೊಂದರೆಗಳಿಲ್ಲದೆ ವ್ಯವಹಾರ ನಡೆಸಲು ಸಾಧ್ಯವಾಗುತ್ತದೆ.

ತೆರಿಗೆ ಆಧಾರದ ಮೇಲೆ ಸ್ಥಳೀಯ ಆದಾಯ ಹೆಚ್ಚಳ:- ಗ್ರಾಮ ಪಂಚಾಯತಿಗಳಿಗೆ ನಿಖರವಾದ ಆಸ್ತಿ ತೆರಿಗೆ ಸಂಗ್ರಹಿಸುವ ಅವಕಾಶ ಸಿಗುತ್ತದೆ. ಇದರಿಂದ ಗ್ರಾಮೀಣ ಪ್ರದೇಶದ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ ಅಗತ್ಯವಿರುವ ಸಂಪತ್ತು ಒದಗುತ್ತದೆ.

ಇ-ಸ್ವತ್ತು ತಂತ್ರಾಂಶದ ಕುರಿತು:-

2013ರ ಜೂನ್ 15ರಂದು ಕರ್ನಾಟಕದಲ್ಲಿ ಇ-ಸ್ವತ್ತು ಎಂಬ ಡಿಜಿಟಲ್ ಪ್ಲಾಟ್‌ಫಾರ್ಮ್ ಪ್ರಾರಂಭವಾಯಿತು. ಗ್ರಾಮ ಪಂಚಾಯತಿಗಳ ವ್ಯಾಪ್ತಿಯ ಆಸ್ತಿಗಳ ಸಮಗ್ರ ದಾಖಲೆ ಇಂಟರ್‌ನೆಟ್ ಆಧಾರಿತ ವ್ಯವಸ್ಥೆಯಲ್ಲಿ ನಿರ್ವಹಿಸುವುದು ಇದರ ಪ್ರಮುಖ ಉದ್ದೇಶವಾಗಿದೆ. ಇದರಿಂದ ನಕಲಿ ದಾಖಲೆ, ವಿವಾದಾತ್ಮಕ ಆಸ್ತಿ ವ್ಯವಹಾರಗಳಿಗೆ ಕಡಿವಾಣ ಹಾಕಲಾಗುತ್ತದೆ. ಈ ತಿದ್ದುಪಡಿಯ ಮೂಲಕ ಸರ್ಕಾರ ಪಾರದರ್ಶಕ ಆಸ್ತಿ ನಿರ್ವಹಣೆ, ಗ್ರಾಮ ಪಂಚಾಯತಿ ಆದಾಯದಲ್ಲಿ ಏರಿಕೆ ಹಾಗೂ ಆಸ್ತಿ ಖರೀದಿ/ಮಾರಾಟಕ್ಕೆ ಅನುಕೂಲತೆ ಕಲ್ಪಿಸುವಂತಹ ಮೂರು ಪ್ರಮುಖ ಗುರಿಗಳನ್ನು ಹೊಂದಿದೆ. ಆ ಮೂಲಕ ಇನ್ಮುಂದೆ ಇ- ಖಾತೆ ಇದ್ದರೆ ಆಸ್ತಿಯನ್ನು ಖರೀದಿಸಲು ಅಥವಾ ಮಾರಲು ಯಾವುದೇ ಕಾನೂನು ಅಡೆತಡೆಗಳನ್ನು ಎದುರಿಸಬೇಕಾಗಿಲ್ಲ.

ಯಾವೆಲ್ಲ ಆಸ್ತಿಗಳಿಗೆ ಈ ತಿದ್ದುಪಡಿ ಅನ್ವಯವಾಗುತ್ತದೆ?

‘ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993′ ತಿದ್ದುಪಡಿಯು ಎಲ್ಲ ಖಾಸಗಿ ಆಸ್ತಿಗಳಿಗೆ ಅನ್ವಯವಾಗುತ್ತದೆ. ಸರ್ಕಾರಿ ಭೂಮಿ, ಅರಣ್ಯ ಭೂಮಿ, ಶಾಸನಬದ್ಧ ಸಂಸ್ಥೆಗಳ ಆಸ್ತಿಗಳು ಸ್ಥಳೀಯ ಸಂಸ್ಥೆಗಳ ಆಸ್ತಿಗಳನ್ನು ಹೊರತುಪಡಿಸಿಈ ಕೆಳಗಿನ ಆಸ್ತಿಗಳಿಗೆ ಅನ್ವಯವಾಗಲಿದೆ:

  • ಕ್ರಮಬದ್ಧವಲ್ಲದ ನಿವೇಶನಗಳು
  • ಗುತ್ತಿಗೆದಾರರಿಂದ ನಿರ್ಮಿಸಲಾದ ಮನೆಗಳು
  • ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಖಾಸಗಿ ಕಟ್ಟಡಗಳು
  • 2013ರ ನಂತರ ಮತ್ತು ಮುಂಚಿತವಾಗಿ ನೋಂದಣಿಯಾದ ಆಸ್ತಿಗಳು

ಇ-ಖಾತೆ ವ್ಯವಸ್ಥೆ ಅನ್ವಯವಾಗುವ ಮೂಲಕ ಗ್ರಾಮೀಣ ಪ್ರದೇಶದ ಆಸ್ತಿ ಮಾಲೀಕರಿಗೆ ಬಹುಪಾಲು ಲಾಭವಾಗಲಿದೆ. ಇದಿಂದ ಆಸ್ತಿ ನೋಂದಣಿ ವ್ಯವಸ್ಥೆಯಲ್ಲಿ ಪಾರದರ್ಶಕತೆ ಹೆಚ್ಚುವುದು ಮಾತ್ರವಲ್ಲದೆ, ಗ್ರಾಮೀಣ ಅಭಿವೃದ್ಧಿಗೆ ಅವಶ್ಯಕವಾದ ಆರ್ಥಿಕ ಮೂಲಗಳನ್ನು ಸೃಷ್ಟಿಸಲು ಇದು ಸಹಕಾರಿಯಾಗಲಿದೆ. ಸರ್ಕಾರದ ಈ ತೀರ್ಮಾನ ಗ್ರಾಮೀಣ ಭಾಗದ ಆಸ್ತಿ ಮಾಲೀಕತ್ವದ ದೃಷ್ಟಿಕೋಣದಲ್ಲಿ ಕ್ರಾಂತಿಕಾರಿಯಾಗಿ ಪರಿಗಣಿಸಬಹುದು.

You may also like

News

ಪುತ್ತೂರಿನಲ್ಲಿ ಸೆಪ್ಟೆಂಬರ್ 2 ರಂದು KSRTC ನೌಕರರ ಕೂಟದ ನೂತನ ಸಂಘಟನೆ ಪ್ರಾರಂಭೋತ್ಸವ

ಪದೋನ್ನತಿ ಪಡೆದ ಜೀವನ್ ಸಂತೋಷ್ ಮಾರ್ಟಿಸ್ ಅವರಿಗೆ ಸನ್ಮಾನ ಪುತ್ತೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ (ರಿ.) ಇದರ ಪುತ್ತೂರು ವಿಭಾಗದ ನೂತನ ಕೂಟ
News

ಸೆಪ್ಟೆಂಬರ್ 8ರಂದು ಮಾತೆ ಮರಿಯಳ ಜನ್ಮದಿನದ ಹಬ್ಬಕ್ಕೆ ಸಾರ್ವತ್ರಿಕ ರಜೆ ನೀಡಲು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರಿಗೆ ಮನವಿ

ಬೈಂದೂರು: ಸೆಪ್ಟೆಂಬರ್ 8ರಂದು ಆಚರಿಸಲಾಗುವ ಕ್ರೈಸ್ತ ಸಮುದಾಯದ ಪ್ರಮುಖ ಹಬ್ಬವಾದ ತೆನೆ ಹಬ್ಬ ಹಾಗೂ ಮಾತೆ ಮರಿಯಳ ಜನ್ಮದಿನದ ಹಬ್ಬದ ಅಂಗವಾಗಿ ಸಾರ್ವತ್ರಿಕ ರಜೆ ಘೋಷಿಸಬೇಕು ಎಂದು

You cannot copy content of this page