May 17, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಉತ್ತರ ಕನ್ನಡ ಶಿರೂರು ಉಳವರೆ ಶಾಲೆಯಲ್ಲಿ ಮಂಗಳೂರು ಪತ್ರಕರ್ತರಿಂದ ಪುಸ್ತಕ, ಕಲಿಕಾ ಸಾಮಗ್ರಿ ವಿತರಣೆ

ಪತ್ರಕರ್ತರ ಚಾರಣ ಬಳಗದ ನಡೆ ಸಮಾಜಕ್ಕೆ ಮಾದರಿ” – ವಿಠಲ್ ನಾಯಕ್

ಕಳೆದ ವರ್ಷ ಗುಡ್ಡ ಕುಸಿದು ದುರಂತ ಘಟಿಸಿದ್ದ ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ಶಿರೂರಿಗೆ ಇಂದು 06-06-2025ರಂದು ಶುಕ್ರವಾರ ಭೇಟಿ ನೀಡಿದ ಪತ್ರಕರ್ತರ‌ ಚಾರಣ ಬಳಗದ ಮಂಗಳೂರು ಇದರ ಸದಸ್ಯರು ಉಳವರೆ ಸರಕಾರಿ ಪ್ರಾಥಮಿಕ ಶಾಲಾ ಮಕ್ಕಳಿಗೆ ಪುಸ್ತಕ ಹಾಗೂ ಕಲಿಕಾ ಸಾಮಗ್ರಿಗಳನ್ನು ವಿತರಣೆ ಮಾಡಿದರು. ಇವರಿಗೆ ಕಲ್ಲೂರು ಎಜುಕೇಷನ್ ಟ್ರಸ್ಟ್‌, ಯು.ಆರ್‌. ಫೌಂಡೇಶನ್ ಸಾಥ್ ನೀಡಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಕಲ್ಲೂರು ಎಜುಕೇಷನ್ ಟ್ರಸ್ಟ್‌ ಇದರ ವಿಠಲ್ ನಾಯಕ್ ಮಾತನಾಡಿ, “ಕಳೆದ ವರ್ಷ ಶಿರೂರಿನಲ್ಲಿ ಗುಡ್ಡ ಕುಸಿತದ ಸಂದರ್ಭ ಇಲ್ಲಿಗೆ ಆಗಮಿಸಿದ್ದ ಪತ್ರಕರ್ತರು ತಮ್ಮ ಕರ್ತವ್ಯದ ಜೊತೆಗೆ ಮನೆ ಮಠ ಕಳೆದುಕೊಂಡಿದ್ದ ಸಂತ್ರಸ್ತರಿಗೆ ಆಹಾರ ಪದಾರ್ಥ ಹಾಗೂ ಅಗತ್ಯ ಸಮಾಗ್ರಿಗಳನ್ನು ವಿತರಿಸಿದ್ದರು. ಇಲ್ಲಿನ ಶಾಲಾ ಮಕ್ಕಳಿಗೂ ಪುಸ್ತಕ, ಅಗತ್ಯ ಸಾಮಗ್ರಿಗಳನ್ನು ವಿತರಿಸಿ ಮಾದರಿಯಾಗಿದ್ದರು. ಈ ಬಾರಿ ಮಕ್ಕಳಿಗೆ ಮತ್ತೆ ನೆರವಾಗಿದ್ದಾರೆ. ಇಲ್ಲಿನ ಮಕ್ಕಳ ಹೆತ್ತವರು ತೀರಾ ಬಡವರಾಗಿದ್ದು ಅವರಿಗೆ ಪತ್ರಕರ್ತರು ಸ್ಪಂದಿಸಿರುವುದು ಅತೀವ ಸಂತಸ ತಂದಿದೆ‌. ಈ ತಂಡದಿಂದ ಇನ್ನಷ್ಟು ಸಮಾಜಮುಖಿ ಕಾರ್ಯ ನಡೆಯಲಿ” ಎಂದರು.

ಪತ್ರಕರ್ತ ಶಶಿ ಬೆಳ್ಳಾಯರು ಮಾತನಾಡಿ, “ಕಳೆದ ವರ್ಷ ಗುಡ್ಡ ದುರಂತದ ಸಂದರ್ಭ ಉಳವರೆ ಗ್ರಾಮಸ್ಥರು ಹಾಗೂ ಇಲ್ಲಿನ ಮಕ್ಕಳ ಪರಿಸ್ಥಿತಿ ಗಮನಿಸಿ ನಮ್ಮಿಂದಾದ ನೆರವು ನೀಡಿದ್ದೆವು. ಅವತ್ತು ನುಡಿದಂತೆ ಈ ಬಾರಿ ಮಕ್ಕಳ ಯೋಗಕ್ಷೇಮ ವಿಚಾರಿಸಲು ಬಂದು ನಮ್ಮಿಂದ ಆಗುವಷ್ಟು ನೆರವು ನೀಡಿದ್ದೇವೆ. ಸರ್ಕಾರಿ ಶಾಲೆಯಲ್ಲಿ ಕಲಿಯುವ ಮಕ್ಕಳು ಶೈಕ್ಷಣಿಕವಾಗಿ ಬೆಳೆದು ಸಮಾಜದಲ್ಲಿ ಒಳ್ಳೆಯ ಹೆಸರು ಮಾಡಬೇಕು ಎನ್ನುವುದು ನಮ್ಮ ಮುಖ್ಯ ಉದ್ದೇಶ” ಎಂದರು.

ಶಿಕ್ಷಕಿ ಸಂಧ್ಯಾ ವಿ. ನಾಯ್ಕ ಮಾತನಾಡಿ, “ನಮ್ಮ ಶಾಲೆಯ ಮಕ್ಕಳು ಯಾರನ್ನು ಮರೆತರೂ ಮಂಗಳೂರಿನ ಈ ಪತ್ರಕರ್ತರ ತಂಡವನ್ನು ಸದಾ ಸ್ಮರಿಸುತ್ತಾರೆ. ಕಳೆದ ವರ್ಷ ದುರಂತದಿಂದಾಗಿ ದುಃಖದಲ್ಲಿದ್ದ ಸಂದರ್ಭ ಅವರು ನೀಡಿದ ಧೈರ್ಯ, ಭರವಸೆ ಮಕ್ಕಳಿಗೆ ಹೊಸ ಹುರುಪು ತುಂಬಿತ್ತು. ಈ ಬಾರಿ ನಮ್ಮ ಶಾಲೆಯನ್ನು ನೆನಪಿಸಿ ಮತ್ತೆ ಬಂದು ಮಕ್ಕಳಿಗೆ ಶೈಕ್ಷಣಿಕ ನೆರವು ನೀಡಿದ್ದಾರೆ‌. ಅವರಿಗೆ ನಾವು ಸದಾ ಅಭಾರಿಯಾಗಿರುತ್ತೇವೆ” ಎಂದು ನುಡಿದರು.

ಪತ್ರಕರ್ತ ಆರಿಫ್ ಯು.ಆರ್. ಕಲ್ಕಟ್ಟ ಸ್ವಾಗತಿಸಿದರು. ಕಲ್ಲೂರು ಎಜುಕೇಷನ್ ಟ್ರಸ್ಟ್‌ ಇದರ ಟ್ರಸ್ಟಿ ಶ್ರೇಯಸ್ ನಾಯಕ್, ಪತ್ರಕರ್ತರಾದ ಮೋಹನ್ ಕುತ್ತಾರ್, ಶಿವು ಕಿದೂರು, ಎಚ್.ಟಿ. ಶಿವಕುಮಾರ್, ಗಿರೀಶ್ ಮಳಲಿ, ಉಳವರೆ ಸರಕಾರಿ ಪ್ರಾಥಮಿಕ ಶಾಲಾ ಪ್ರಾಂಶುಪಾಲೆ ಮಾದೇವಿ ಗೌಡ, ಶಿಕ್ಷಕ ಪ್ರಸನ್ನ ಗೌಡ ಉಪಸ್ಥಿತರಿದ್ದರು.

You may also like

News

ಮೇ 20 ರಂದು ದೇಶಾದ್ಯಂತ ಮೆಡಿಕಲ್ ಶಾಪ್ ಬಂದ್ – ಇ-ಫಾರ್ಮಸಿ ವಿರೋಧಿಸಿ ದಕ್ಷಿಣ ಕನ್ನಡದಲ್ಲೂ ಔಷಧ ಅಂಗಡಿಗಳು ಸ್ಥಗಿತ!

ಆನ್‌ಲೈನ್ ಮೂಲಕ ನಿಯಮಬಾಹಿರವಾಗಿ ಔಷಧಿಗಳನ್ನು ಮಾರಾಟ ಮಾಡುತ್ತಿರುವುದನ್ನು ವಿರೋಧಿಸಿ ಅಖಿಲ ಭಾರತ ಔಷಧ ವ್ಯಾಪಾರಸ್ಥರ ಸಂಘವು ಮೇ 20 ರಂದು ದೇಶಾದ್ಯಂತ ಔಷಧ ವ್ಯಾಪಾರ ಬಂದ್‌ಗೆ ಕರೆ
News

ಧರ್ಮಾಧ್ಯಕ್ಷರಾಗಿ 30 ವರ್ಷಗಳ ಸೇವೆ – ನಿವೃತ್ತ ಬಿಷಪ್ ಅಲೋಶಿಯಸ್ ಪಾವ್ಲ್ ಡಿಸೋಜ ಅವರಿಗೆ ಜೆಪ್ಪುವಿನಲ್ಲಿ ಭವ್ಯ ಸನ್ಮಾನ

ಮಂಗಳೂರು ಧರ್ಮಕ್ಷೇತ್ರದ ನಿವೃತ್ತ ಬಿಷಪ್, ‘ಜನರ ಬಿಷಪ್’ ಎಂದೇ ಖ್ಯಾತರಾದ ಪರಮ ಪೂಜ್ಯ ಅತೀ ವಂದನೀಯ ಡಾ. ಅಲೋಶಿಯಸ್ ಪಾವ್ಲ್ ಡಿಸೋಜ ಅವರು ಧರ್ಮಾಧ್ಯಕ್ಷರಾಗಿ ದೀಕ್ಷೆ ಸ್ವೀಕರಿಸಿದ

You cannot copy content of this page