ವೃದ್ದಾಶ್ರಮ ನಿವಾಸಿಗಳಿಗೆ ಹೃದಯಸ್ಪರ್ಶಿ ಕೊಡುಗೆ – ಸ್ಪೀಕರ್ ಯು.ಟಿ. ಖಾದರ್ ಶ್ಲಾಘನೆ
79ನೇ ಸ್ವಾತಂತ್ರೋತ್ಸವದ ಅಂಗವಾಗಿ ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ತೊಕ್ಕೊಟ್ಟು ಶಾಖೆಯ ವತಿಯಿಂದ ದೇರಳಕಟ್ಟೆ ಬೆಳ್ಳ, ಸೇವಾಶ್ರಮ ವೃದ್ದಾಶ್ರಮದಲ್ಲಿ ಹಿರಿಯರಿಗೆ ಅಗತ್ಯ ವಸ್ತುಗಳನ್ನು ವಿತರಿಸಲಾಯಿತು.



ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷ ಸನ್ಮಾನ್ಯ ಯು.ಟಿ. ಖಾದರ್ ರವರು, ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡಿರುವ ಸೈಂಟ್ ಮಿಲಾಗ್ರಿಸ್ ಕೋ-ಆಪರೇಟಿವ್ ಸೊಸೈಟಿ ಶಾಖೆಯ ಸೇವೆಯನ್ನು ಮೆಚ್ಚಿದರು. ವೃದ್ಧಾಶ್ರಮದಲ್ಲಿರುವ ಹಿರಿಯರ ಪಾಲಿಗೆ ಇಂತಹ ಕೊಡುಗೆಗಳು ದೊಡ್ಡ ನೆಮ್ಮದಿ ನೀಡುತ್ತವೆ. ಹಿರಿಯರು ಸಮಾಜದ ಅಮೂಲ್ಯ ಆಸ್ತಿ. ಅವರ ಆರೈಕೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು. ಸಂಸ್ಥೆಗಳು ಇಂತಹ ಸೇವಾ ಚಟುವಟಿಕೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡರೆ ಸಮಾಜದ ಏಳಿಗೆ ಖಚಿತ” ಎಂದು ಅವರು ಅಭಿಪ್ರಾಯಪಟ್ಟರು. ಇಂತಹ ಸಮಾಜಮುಖಿ ಸೇವೆಗಳು ಇತರ ಸಂಸ್ಥೆಗಳಿಗೂ ಪ್ರೇರಣೆಯಾಗಬೇಕು ಎಂದರು.



ಈ ಸಂದರ್ಭದಲ್ಲಿ AICU ರಾಜ್ಯಾಧ್ಯಕ್ಷ ಆಲ್ವಿನ್ ಜೆರೊಮ್ ಡಿಸೋಜ ಪಾನೀರ್, ಅಭಿವೃದ್ಧಿ ವ್ಯವಸ್ಥಾಪಕ ನಾಗರಾಜ್, ವಿಷು ಸಿ.ಕೆ. ಹಾಗೂ ಮಡಿವಾಳ್, ತೊಕ್ಕೊಟ್ಟು ಶಾಖಾ ವ್ಯವಸ್ಥಾಪಕರಾದ ವಿಷ್ಣು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು. ಸೂರ್ಯಕಾಂತಿ ಸಂಸ್ಥೆಯ ಪರಿಚಯವನ್ನು ನೀಡಿದರು. ಮಿಥುನ್ ಕುಮಾರ್ ಸ್ವಾಗತ ಭಾಷಣ ಮಾಡಿದರು. ಕುಮಾರಿ ಪ್ರಮಿತಾ ಲೋಬೊ ಧನ್ಯವಾದ ಅರ್ಪಿಸಿದರು. ಸಾಗರ್ ಡಿ. ಕಾರ್ಯಕ್ರಮವನ್ನು ನಿರೂಪಿಸಿದರು.




