ಸೂರಿಕುಮೇರು ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಸಂಭ್ರಮ ಸಡಗರದ ಮೀಲಾದುನ್ನಬಿ ಆಚರಣೆ
ಮಾಣಿಯಲ್ಲಿ ಐಸ್ ಕ್ರೀಂ ನೀಡಿ ಸ್ವಾಗತಿಸಿದ ಹಿಂದೂ ಮುಖಂಡರು

ಸೂರಿಕುಮೇರು ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಲೋಕ ಪ್ರವಾದಿ ಮಹಮ್ಮದ್ ಮುಸ್ತಫಾ (ಸ.ಅ) ರವರ 1500ನೇ ಜನ್ಮ ದಿನ ಮೀಲಾದುನ್ನಬಿ ಕಾರ್ಯಕ್ರಮವನ್ನು ಇಂದು ಸೆಪ್ಟೆಂಬರ್ 5ರಂದು ಶುಕ್ರವಾರ ಬಹಳ ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಯಿತು. ಬೆಳಗ್ಗಿನ ಜಾವ 4 ಗಂಟೆಗೆ ಪ್ರಭಾತ ಮೌಲಿದ್ ನೊಂದಿಗೆ ಆರಂಭಗೊಂಡ ಕಾರ್ಯಕ್ರಮ 8 ಗಂಟೆಗೆ ಧ್ವಜಾರೋಹಣ ಮೂಲಕ ಮೀಲಾದ್ ಜಾಥಾಗೆ ಚಾಲನೆ ನೀಡಲಾಯಿತು, ಸೂರಿಕುಮೇರು, ಹಳೀರ, ಮಾಣಿ ಜಂಕ್ಷನ್, ದಾಸಕೋಡಿ, ಕಾಯರಡ್ಕ ಮೂಲಕ ಬಂದು ಸೂರಿಕುಮೇರು ಮಸೀದಿಯಲ್ಲಿ ಸಮಾಪ್ತಿಗೊಂಡಿತು.

ಮಾಣಿ ಜಂಕ್ಷನ್ ಬಳಿ ಹಿಂದೂ ಮುಖಂಡರು ಐಸ್ಕ್ರೀಂ ನೀಡುವ ಮೂಲಕ ಮೀಲಾದ್ ಜಾಥಾವನ್ನು ಸ್ವಾಗತಿಸಿದರು. ಪ್ರಮುಖರಾದ ಸುದೀಪ್ ಕುಮಾರ್ ಶೆಟ್ಟಿ ಮಾಣಿ, ಬಾಲಕೃಷ್ಣ ಆಳ್ವ ಕೊಡಾಜೆ, ವಿಕೇಶ್ ಶೆಟ್ಟಿ ಮಾಣಿ, ಪ್ರವೀಣ್ ಮುಂತಾದವರು ನೇತೃತ್ವವಹಿಸಿ ಶುಭಹಾರೈಸಿದರು. ಸಮಾಜದಲ್ಲಿ ನಂಬಿಕೆ ವಿಶ್ವಾಸ ಸೌಹಾರ್ದತೆ ಹೆಚ್ಚಿಸುವ ಈ ಕಾರ್ಯವು ಬಹಳ ಶ್ಲಾಘನೆಗೆ ಪಾತ್ರವಾಯಿತು. ಮೀಲಾದ್ ರ್ಯಾಲಿಯಲ್ಲಿ ಪುಟಾಣಿ ಮಕ್ಕಳ ದಫ್ ಪ್ರದರ್ಶನ, ಫ್ಲವರ್ ಶೋ ಆಕರ್ಷಕ ವಸ್ತ್ರಗಳು ಬಹಳ ಗಮನ ಸೆಳೆಯಿತು, ದಾರಿಯುದ್ದಕ್ಕೂ ಸಿಹಿತಿಂಡಿ ತಂಪು ಪಾನೀಯ, ಐಸ್ಕ್ರೀಂ ನೀಡುವ ಮೂಲಕ ಆಯಾ ಊರಿನ ಮನೆಯವರು ಮತ್ತು ಸಂಘಟನೆಗಳು ಸ್ವಾಗತಿಸಿ ಸಂಭ್ರಮಿಸಿದರು. ಸೂರಿಕುಮೇರು ಜಮಾಅತಿನ ಯುವಕರ ತಂಡ ಮಸೀದಿ ಮತ್ತು ದಾರಿಯುದ್ದಕ್ಕೂ ತಳಿರು ತೋರಣ ಬಣ್ಣದ ಬೆಳಕಿನ ಮೂಲಕ ಶೃಂಗರಿಸಿ ಪ್ರವಾದಿ (ಸ.ಅ) ಜನ್ಮದಿನವನ್ನು ಆಕರ್ಷಣೀಯವಾಗಿಸಿದರು.


ಮಸೀದಿಯ ಖತೀಬ್ ಹಸೈನಾರ್ ಸಅದಿ ಪೆರ್ಲ, ಸದರ್ ನಾಸೀರ್ ಸಅದಿ ನೇರಳಕಟ್ಟೆ, ಅಧ್ಯಾಪಕ ಮುಹಮ್ಮದ್ ಹನೀಫ್ ಸಅದಿ ಸೆರ್ಕಳ, ಅಧ್ಯಕ್ಷ ಅಬ್ದುಲ್ ರಝಾಕ್ ಮದನಿ ಕಾಮಿಲ್ ಸಖಾಫಿ, ಪ್ರಧಾನ ಕಾರ್ಯದರ್ಶಿ ಅಮೀರುದ್ದೀನ್, ಕೋಶಾಧಿಕಾರಿ ಯೂಸುಫ್ ಹಾಜಿ ಸೂರಿಕುಮೇರು ಸಹಿತ ಸೂರಿಕುಮೇರು ಬದ್ರಿಯಾ ಜುಮ್ಮಾ ಮಸೀದಿಯ ಆಡಳಿತ ಸಮಿತಿಯ ಪದಾಧಿಕಾರಿಗಳು, ಮೀಲಾದ್ ಸಮಿತಿಯ ಪದಾಧಿಕಾರಿಗಳು, ಮಿಫ್ಲಾಉಲ್ ಉಲೂಂ ಮದ್ರಸಾ ವಿದ್ಯಾರ್ಥಿಗಳು, ಬದ್ರಿಯಾ ಫ್ರೆಂಡ್ಸ್ ಸೂರಿಕುಮೇರು, ಅಲ್ ಅಮೀನ್ ಅಸೋಸಿಯೇಶನ್ ಮಾಣಿ ಮತ್ತು ಜಮಾಅತಿನ ಎಲ್ಲರೂ ಮೀಲಾದ್ ಜಾಥಾದಲ್ಲಿ ಭಾಗವಹಿಸಿ ಕಾರ್ಯನಿರ್ವಹಿಸಿದರು.
ರ್ಯಾಲಿಯ ಕೊನೆಯಲ್ಲಿ ಸೂರಿಕುಮೇರು ಯುವಕರಿಂದ ಮಸೀದಿ ವಠಾರದಲ್ಲಿ ಅನ್ನದಾನ ಏರ್ಪಡಿಸಲಾಗಿತ್ತು. ಜುಮಾ ನಮಾಝ್ಗೆ ಮೊದಲು ಮೌಲಿದ್ ಪಾರಾಯಣ ನಡೆಸಿ ಜುಮಾ ಬಳಿಕ ಪ್ರವಾದಿ (ಸ.ಅ) ರವರ ಹೆಸರಿನಲ್ಲಿ ಸೀರಣಿ ವಿತರಿಸಲಾಯಿತು.




