ಶಾಸಕ ಅಶೋಕ್ ರೈ ಮತ್ತು ಸಿಎಂ ಸಿದ್ದರಾಮಯ್ಯರ ವಿರುದ್ಧ ಅವಹೇಳನಕಾರಿ ಕಮೆಂಟ್ — ಕ್ಷಮೆ ಕೇಳಿದ ಉದ್ಯಮಿ ವಸಂತ ಭಟ್
ಕ್ಷಮೆ ನೀಡಿದ ಮಾನವೀಯ ಶಾಸಕ

ಸಾಮಾಜಿಕ ಜಾಲತಾಣ ಫೇಸ್ಬುಕ್ನಲ್ಲಿ ಪುತ್ತೂರು ಶಾಸಕ ಅಶೋಕ್ ರೈ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯರವರ ಬಗ್ಗೆ ಅವಹೇಳನಕಾರಿ ಕಮೆಂಟ್ ಹಾಕಿದ ಪ್ರಕರಣದಲ್ಲಿ ಪುತ್ತೂರು ನೆಹರೂ ನಗರ ನಿವಾಸಿ ಹಾಗೂ ಪುತ್ತೂರು ಕನ್ಸ್ಟ್ರಕ್ಷನ್ ಮಾಲಕ ಉದ್ಯಮಿ ವಸಂತ ಭಟ್ ತಮ್ಮ ತಪ್ಪನ್ನು ಒಪ್ಪಿಕೊಂಡು ಕ್ಷಮೆ ಕೇಳಿದ ಘಟನೆ ನಡೆದಿದೆ.
ಈ ಸಂಬಂಧ ಪುತ್ತೂರು ಬ್ಲಾಕ್ ಸೋಶಿಯಲ್ ಮೀಡಿಯಾ ಘಟಕದ ಅಧ್ಯಕ್ಷ ಸುಪ್ರಿತ್ ಕಣ್ಣಾರಾಯರವರು ಪೊಲೀಸರಿಗೆ ಲಿಖಿತ ದೂರು ನೀಡಿದ್ದು, ಪೊಲೀಸರು ಆರೋಪಿಯ ಬಂಧನಕ್ಕಾಗಿ ತೊಡಗಿದ್ದರು.

ಈ ಮಧ್ಯೆ ಇಂದು ಅಕ್ಟೋಬರ್ 14 ಮಂಗಳವಾರ ಉದ್ಯಮಿ ವಸಂತ ಭಟ್ ರವರು ಶಾಸಕರ ನಿವಾಸಕ್ಕೆ ಬಂದು, “ನಾನು ತಪ್ಪು ಮಾಡಿದ್ದೇನೆ, ಕ್ಷಮಿಸಿ. ಮುಂದೆ ಇಂಥ ಕಮೆಂಟ್ ಮಾಡುವುದಿಲ್ಲ. ನನ್ನನ್ನು ಬಂಧಿಸದಂತೆ ಪೊಲೀಸರಿಗೆ ಹೇಳಿ,” ಎಂದು ಬೇಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಅಶೋಕ್ ರೈಯವರು, “ನೀವು ವಿದ್ಯಾವಂತರಾಗಿದ್ದೀರಿ, ಸಬ್ಯರಾಗಿದ್ದೀರಿ, ಇಂತಹ ಕೆಲಸಕ್ಕೆ ಯಾಕೆ ಹೋಗುತ್ತೀರಿ?” ಎಂದು ಪ್ರಶ್ನಿಸಿ, ಮುಂದೆಯೂ ಇಂಥ ತಪ್ಪು ಮಾಡಬಾರದು ಎಂದು ಬುದ್ದಿವಾದ ನೀಡಿ ಕ್ಷಮಿಸಿ ಕಳುಹಿಸಿದ್ದಾರೆ.

ಕ್ಷಮೆ ನೀಡಿದ ಮಾನವೀಯ ಶಾಸಕ
ಹಿಂದೆಯೂ ಇದೇ ರೀತಿಯ ಘಟನೆ ಸಂಭವಿಸಿತ್ತು. ಆಗಲೂ ಶಾಸಕ ಅಶೋಕ್ ರೈಯವರು ಅವಹೇಳನಕಾರಿ ಕಮೆಂಟ್ ಮಾಡಿದ ಸರಕಾರಿ ಕೆಲಸದಲ್ಲಿರುವ ವ್ಯಕ್ತಿಯನ್ನು ಕ್ಷಮಿಸಿದ್ದರು. ಇದು ಅವರು ಎರಡನೇ ಬಾರಿ ಕ್ಷಮೆ ನೀಡುತ್ತಿರುವುದಾಗಿದೆ.
ಅಶೋಕ್ ರೈಯವರ ಕ್ಷಮಾಶೀಲತೆ, ಸಹನೆ ಹಾಗೂ ಮಾನವೀಯ ಧೋರಣೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ತಪ್ಪು ಮಾಡಿದವರನ್ನು ಕೂಡ ಸರಿದಾರಿಯತ್ತ ಕರೆತರಲು ಅವರು ಸದಾ ಪ್ರಯತ್ನಿಸುತ್ತಾರೆ. ಅವರ ಈ ಮೃದುವಾದ ನಡತೆ ಜನರ ಮನ ಗೆದ್ದಿದೆ.




