🪔 ದೀಪಾವಳಿ ಬೆಳಕಿನಲ್ಲಿ ಮಾನವೀಯತೆ – ಪುತ್ತೂರಿನಲ್ಲಿ ರೈ ಟ್ರಸ್ಟ್ ವತಿಯಿಂದ ಅಕ್ಟೋಬರ್ 20ರಂದು ವಸ್ತ್ರ ವಿತರಣಾ ಮಹಾಸಮಾರಂಭ

“ಅಶೋಕ ಜನ–ಮನ 2025” ಅಂಗವಾಗಿ ಸೇವೆಯ ಬೆಳಕು ಹರಿಸಲಿರುದ ಪುತ್ತೂರಿನ ದೀಪಾವಳಿ ಸಂಭ್ರಮ
ಶಾಸಕ ಅಶೋಕ್ ಕುಮಾರ್ ರೈ, ನಿರ್ದೇಶಕರಾದ ಸುಮಾ ಎ. ರೈ ಹಾಗೂ ಕಾರ್ಯಧ್ಯಕ್ಷರಾದ ಸುದೇಶ್ ಆರ್. ಶೆಟ್ಟಿಯವರಿಂದ ಆತ್ಮೀಯ ಕರೆಯೋಲೆ
ದೀಪಾವಳಿ ಹಬ್ಬದ ಸಂತಸದ ಹಿನ್ನೆಲೆ, ರೈ ಎಸ್ಟೇಟ್ಸ್ ಎಜ್ಯುಕೇಶನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ (ರಿ.) ಪುತ್ತೂರು ಇದರ ವತಿಯಿಂದ “ಅಶೋಕ ಜನ–ಮನ 2025” ಕಾರ್ಯಕ್ರಮದ ಅಂಗವಾಗಿ ವಸ್ತ್ರ ವಿತರಣಾ ಸಮಾರಂಭವನ್ನು ಅಕ್ಟೋಬರ್ 20ರಂದು ಸೋಮವಾರ ಬೆಳಿಗ್ಗೆ 9.00 ಗಂಟೆಗೆ ಪುತ್ತೂರಿನ ಕೊಂಬೆಟ್ಟುವಿನಲ್ಲಿರುವ ತಾಲೂಕು ಕ್ರೀಡಾಂಗಣದಲ್ಲಿ ಭವ್ಯವಾಗಿ ಆಯೋಜಿಸಲಾಗಿದೆ.
ಈ ಸಾಮಾಜಿಕ ಸೇವೆಯ ಮಹೋತ್ಸವವನ್ನು ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮಕ್ಕೆ ಪುತ್ತೂರು ಶಾಸಕರಾದ ಮಾನ್ಯ ಅಶೋಕ್ ಕುಮಾರ್ ರೈ ಅಧ್ಯಕ್ಷತೆ ವಹಿಸಲಿದ್ದಾರೆ. ಕರ್ನಾಟಕ ವಿಧಾನಸಭಾ ಅಧ್ಯಕ್ಷರಾದ ಸನ್ಮಾನ್ಯ ಯು.ಟಿ. ಖಾದರ್ ರವರು ಉಡುಗೊರೆ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಮಾನ್ಯ ದಿನೇಶ್ ಗುಂಡೂರಾವ್, ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜ, ಮಂಜುನಾಥ ಭಂಡಾರಿ ಹಾಗೂ ಅನೇಕ ಗಣ್ಯರು ಉಪಸ್ಥಿತಲಿರುವರು.
ಶ್ರೀ ಗುರುದೇವದತ್ತ ಸಂಸ್ಥಾನಮ್ ಒಡಿಯೂರುನ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ, ಶ್ರೀರಾಮ ಮಾಣಿಲದ ಪರಮಪೂಜ್ಯ ಶ್ರೀ ಶ್ರೀ ಮೋಹನ್ ದಾಸ್ ಪರಮಹಂಸ ಸ್ವಾಮೀಜಿ, ಮಾಯ್ ದೆ ದೆವುಸ್ ಚರ್ಚ್ ಪುತ್ತೂರು ಇಲ್ಲಿನ ಪ್ರದಾನ ಧರ್ಮಗುರು ಅತೀ ವಂದನೀಯ ಫಾದರ್ ಲಾರೆನ್ಸ್ ಮಸ್ಕರೇನ್ಹಸ್ ಹಾಗೂ ಖ್ಯಾತ ಸುನ್ನಿ ವಿದ್ವಾಂಸರಾದ ಎಸ್.ಬಿ. ದಾರಿಮಿ ಇವರೆಲ್ಲರೂ ಆಶೀರ್ವಚನದ ಕಾಯಕ್ರಮ ನಡೆಸಲಿರುವರು.
ವಿವಿಧ ಸಂಸ್ಥೆಗಳ ಅಧ್ಯಕ್ಷರು ಮತ್ತು ಪ್ರಮುಖರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
🪔 ದೀಪಾವಳಿಯ ಬೆಳಕಿನಲ್ಲಿ ಮಾನವೀಯ ಸ್ಪರ್ಶ – ಜನಸೇವೆಗಾಗಿ ಶಾಸಕರಿಂದ ಉಚಿತ ವಸ್ತ್ರ ವಿತರಣಾ ಮಹೋತ್ಸವ
ಆಹಾರ, ವಸ್ತ್ರ, ವಾಸಸ್ಥಾನ ಎಂಬವು ಮಾನವನ ಮೂಲಭೂತ ಅಗತ್ಯಗಳು. ಈ ಅಗತ್ಯಗಳಲ್ಲಿ ಒಂದಾದ ವಸ್ತ್ರದ ಮಹತ್ವವನ್ನು ಮನಗಂಡು ದೀಪಾವಳಿಯ ಸಂದರ್ಭದಲ್ಲಿ ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈಯವರು ತಮ್ಮ ಕ್ಷೇತ್ರದಲ್ಲಿ ಉಚಿತ ವಸ್ತ್ರ ವಿತರಣಾ ಕಾರ್ಯಕ್ರಮವನ್ನು ಆಯೋಜಿಸಿರುವುದು ಪ್ರಶಂಸನೀಯ. ಸೇವೆಯ ಮೂಲಕ ಸಂತಸ ಹಂಚುವ ಈ ಧನ್ಯ ಪ್ರಯತ್ನ ಜನಮನವನ್ನು ಗೆಲ್ಲಲಿದೆ. ಸಾಮಾಜಿಕ ಬದ್ಧತೆಯ ದೃಷ್ಟಿಯಿಂದ ಇಂತಹ ಉಪಕ್ರಮಗಳು ಪ್ರಜಾಪ್ರತಿನಿಧಿಗಳಲ್ಲಿ ಮಾನವೀಯತೆಗೂ ಮಾದರಿಯಾಗಿವೆ.
ಅಕ್ಟೋಬರ್ 20ರಂದು ಸೋಮವಾರ ನಡೆಯುವ ಭವ್ಯ ಕಾರ್ಯಕ್ರಮಕ್ಕೆ ಪುತ್ತೂರು ಶಾಸಕರಾದ ಮಾನ್ಯ ಅಶೋಕ್ ಕುಮಾರ್ ರೈ, ರೈ ಎಸ್ಟೇಟ್ಸ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ (ರಿ.) ಪುತ್ತೂರು ಇದರ ನಿರ್ದೇಶಕರಾದ ಸುಮಾ ಎ. ರೈ, ಕಾರ್ಯಧ್ಯಕ್ಷರಾದ ಸುದೇಶ್ ಆರ್. ಶೆಟ್ಟಿ ಹಾಗೂ ಪದಾಧಿಕಾರಿಗಳು ಹೃತ್ಪೂರ್ವಕವಾಗಿ ಆಹ್ವಾನಿಸಿದ್ದಾರೆ.