ಪೆರುವಾಯಿ ಫಾತಿಮಾ ಮಾತಾ ಸಮುದಾಯ ಭವನದಲ್ಲಿ ವಿಟ್ಲ ವಲಯದ “ವೈಸಿಎಸ್ ದ್ವಿತೀಯ ಸಮಾವೇಶ – 2025”
ಯುವ ಶಕ್ತಿ ಒಂದು ಉತ್ತಮ ಅಮೂಲ್ಯ ಹಾಗೂ ಆಕರ್ಷಕ ಶಕ್ತಿ – ಫಾದರ್ ನವೀನ್ ಪ್ರಕಾಶ್ ಪಿಂಟೊ

ಜಿಯಾ ಮಿನೇಜಸ್ ರವರಿಂದ ವಿದ್ಯಾರ್ಥಿಗಳಿಗೆ ತರಬೇತಿ

ಮಂಗಳೂರು ಧರ್ಮಕ್ಷೇತ್ರದ ಸಂತ ಜೋನ್ ಪಾವ್ಲ್ ದ್ವಿತೀಯ ವಿಟ್ಲ ವಲಯದ ವೈಸಿಎಸ್ ಸಂಘಟನೆಯ 2025 ನೇ ಸಾಲಿನ ದ್ವಿತೀಯ ಸಮಾವೇಶವು ಅಕ್ಟೋಬರ್ 19ರಂದು ಭಾನುವಾರ ಪೆರುವಾಯಿ ಫಾತಿಮಾ ಮಾತಾ ಸಮುದಾಯ ಭವನದಲ್ಲಿ ನಡೆಯಿತು. ವಿಟ್ಲ ವಲಯದ ಶ್ರೇಷ್ಠ ಗುರು ಅತೀ ವಂದನೀಯ ಫಾದರ್ ಐವನ್ ಮೈಕಲ್ ರೊಡ್ರಿಗಸ್ ಹಾಗೂ ವಲಯದ ಎಲ್ಲಾ ಗುರುಗಳ ಸಹಭಾಗಿತ್ವದಲ್ಲಿ ನಡೆದ ಸಮಾವೇಶದಲ್ಲಿ ವಿಟ್ಲ ವಲಯ ವ್ಯಾಪ್ತಿಯ 8 ಚರ್ಚ್ ಗಳ 85 ವೈಸಿಎಸ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.



ವಿಟ್ಲ ವಲಯದ ವೈಸಿಎಸ್ ನಿರ್ದೇಶಕರಾದ ವಂದನೀಯ ಫಾದರ್ ನವೀನ್ ಪ್ರಕಾಶ್ ಪಿಂಟೊ ಸಮಾವೇಶವನ್ನು ಉದ್ಘಾಟಿಸಿದರು. ಬಳಿಕ ಅವರು ಮಾತನಾಡಿ ಯುವ ಶಕ್ತಿ ಒಂದು ಉತ್ತಮ ಅಮೂಲ್ಯ ಹಾಗೂ ಆಕರ್ಷಕ ಶಕ್ತಿ. ದೇವರು ನಮ್ಮನ್ನು ಹಲವಾರು ಪ್ರತಿಭೆ ಮತ್ತು ಮೌಲ್ಯಗಳನ್ನು ಸೇರಿಸಿ ರೂಪಿಸಿದ್ದಾರೆ. ನಮ್ಮಲ್ಲಿನ ಪ್ರತಿಭೆ ಹಾಗೂ ಯುವ ಶಕ್ತಿಯನ್ನು ಊರ್ಜಿತಗೊಳಿಸಿ ನೂರು ಪ್ರತಿಶತ ಫಲವನ್ನು ಪಡೆಯ ಬೇಕಾದರೆ ಸೂಕ್ತ ಮಾರ್ಗದರ್ಶನ ಹಾಗೂ ತರಬೇತಿಯ ಅಗತ್ಯ ಇದೆ ಎಂದರು.




ಮುಖ್ಯ ಅತಿಥಿ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಜಿಯಾ ಮಿನೇಜಸ್ ರವರು ವೈಸಿಎಸ್ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಿದರು.
ಸಮಾರೋಪ ಸಮಾರಂಭದಲ್ಲಿ ವಿಟ್ಲ ವಲಯದ ಶ್ರೇಷ್ಠ ಗುರುಗಳಾದ ಅತೀ ವಂದನೀಯ ಐವನ್ ಮೈಕಲ್ ರೊಡ್ರಿಗಸ್ ರವರು ಯುವಜನರಿಗೆ ನಿಜ ಕಥೊಲಿಕರಾಗಿ, ಇತರರಿಗೆ ಪ್ರೇರಣಾ ಶಕ್ತಿಯಾಗಲು ಹುರಿದುಂಬಿಸಿದರು. ಅದೇ ರೀತಿ ಕಾರ್ಯಕ್ರಮದ ಆಯೋಜಕರಿಗೆ, ಸಂಪನ್ಮೂಲ ವ್ಯಕ್ತಿಗಳಿಗೆ, ಎಲ್ಲಾ ಸಚೇತಕರಿಗೆ ಹಾಗೂ ಶ್ರಮಪಟ್ಟ ಪ್ರತಿಯೊಬ್ಬರಿಗೆ ಕೃತಜ್ಞತೆ ಸಲ್ಲಿಸಿದರು.



ಸಮಾವೇಶದಲ್ಲಿ ಪೆರುವಾಯಿ ಚರ್ಚ್ ನ ಧರ್ಮಗುರು ವಂದನೀಯ ಫಾದರ್ ಸೈಮನ್ ಡಿಸೋಜ ಅಧ್ಯಕ್ಷತೆ ವಹಿಸಿದ್ದರು. ಪೆರುವಾಯಿ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಡೆನಿಸ್ ಮೊಂತೇರೊ, ಕಾರ್ಯದರ್ಶಿ ವಾಯ್ಲೆಟ್ ಕುವೆಲ್ಲೊ, ಪೆರುವಾಯಿ ವೈಸಿಎಸ್ ಘಟಕದ ಸಚೇತಕಿ ನಿಕ್ಷಿತಾ ಡಿಸೋಜ, ಆಧ್ಯಕ್ಷ ರೋಯ್ಸ್ಟನ್ ಡಿಸೋಜ, ವಲಯ ಅಧ್ಯಕ್ಷ ಪ್ರನೋಯ್ ಮಾರ್ಟಿಸ್, ಕಾರ್ಯದರ್ಶಿ ಆ್ಯನ್ಸಿಟಾ ಪಿಂಟೊ ಉಪಸ್ಥಿತರಿದ್ದರು. ಅಲ್ಫ್ರೀಡಾ ಕುಟಿನ್ಹಾ ಕಾರ್ಯಕ್ರಮ ನಿರೂಪಿಸಿದರು. ಪ್ರವಿತ್ ಡಿಸೋಜ ವಂದಿಸಿದರು.






