ಡಾ. ಸುರೇಶ ನೆಗಳಗುಳಿ – ವೃತ್ತಿ ಪ್ರವೃತ್ತಿ ಆವೃತ್ತಿ ಕೃತಿ ಲೋಕಾರ್ಪಣೆ
ಮಂಗಳೂರಿನ ಕಣಚೂರು ಆಯುರ್ವೇದ ವೈದ್ಯಕೀಯ ಕಾಲೇಜಿನ ಪ್ರಧಾನ ಸಲಹೆಗಾರ, ಮಂಗಳಾ ಆಸ್ಪತ್ರೆಯ ಮೂಲವ್ಯಾಧಿ ತಜ್ಞ ಮತ್ತು ಹೆಸರಾಂತ ಬರಹಗಾರ ಡಾ. ಸುರೇಶ ನೆಗಳಗುಳಿ ಇವರ ಕುರಿತಾದ ಬದುಕು ಬರೆಹ, “ವೃತ್ತಿ ಪ್ರವೃತ್ತಿ ಅವೃತ್ತಿ” ಎಂಬ ಕೃತಿಯು ಇಂದು ಅಕ್ಟೋಬರ್ 26ರಂದು ಭಾನುವಾರ ದೇರಳಕಟ್ಟೆಯ ವಿದ್ಯಾರತ್ನ ಶಾಲಾ ಸಭಾಂಗಣದಲ್ಲಿ ನಡೆದ ಪಿ.ವಿ. ಪ್ರದೀಪ್ ಕುಮಾರ್ ರವರ ಕಥಾಬಿಂದು ಸಾಹಿತ್ಯೋತ್ಸವದ ಸಂದರ್ಭದಲ್ಲಿ ಲೋಕಾರ್ಪಣೆಗೊಂಡಿತು.


ವಿ.ಬಿ. ಕುಲಮರ್ವರವರು ಬಿಡುಗಡೆ ಗೊಳಿಸಿದ ಈ ಕಾರ್ಯಕ್ರಮಕ್ಕೆ ಧರ್ಮದರ್ಶಿ ಹರಿಕೃಷ್ಣ ಪುನರೂರು ಕಿನ್ನಿಗೋಳಿಯ ಭುವನಾಭಿರಾಮ ಉಡುಪ, ಪಿ.ವಿ. ಪ್ರದೀಪ್ ಕುಮಾರ್, ರವೀಂದ್ರ ಶೆಟ್ಟಿ ಉಳಿದೋಟ್ಟು, ಸತ್ಯವತಿ ಭಟ್ ಕೊಳಚಪ್ಪು, ಮುಂತಾದವರು ಸಾಕ್ಷಿಯಾದರು. ಕೊಳಚಪ್ಪೆ ಗೋವಿಂದ ಭಟ್ಟರು ಕೃತಿಗಾರರ ನೆಲೆಯಿಂದ ಮಾತನಾಡುತ್ತಾ ಕೇವಲ ಹತ್ತು ದಿನದಲ್ಲಿ ಡಾ. ನೆಗಳಾಗುಳಿಯವರ ಬದುಕು ಬರೆಹವನ್ನು ಸಿದ್ಧ ಪಡಿಸಲಾಯಿತು ಎಂದರು.

ಆದರೂ ಈ ಕೃತಿಯು ಅಜಿತ್ ಪ್ರಸಾದ, ಕಣಚೂರ್ ಮೋನು, ಡಾ. ಶ್ರೀರಾಮ ಭಟ್, ಡಾ. ಚಕ್ರಪಾಣಿ, ಡಾ. ಹರೀಶ್ ನಾಯಕ್, ಡಾ. ಸದಾನಂದ ನಾಯ್ಕ್, ಮೋಹನ ಆಳ್ವ, ಚೊಕ್ಕಾಡಿದ್ವಯರ ಸಹಿತ ಹಲವು ಗಣ್ಯರ ಅಶಯ ನುಡಿಗಳನ್ನು ಹೊಂದಿರುವುದು ಗಮನಾರ್ಹ ಎಂದರು. ಸೊಗಸಾದ ಸ್ಕೂಲ್ ಬುಕ್ ಕಂಪನಿಯ ಉಮೇಶ್ ಶೆಣೈಯವರಿಂದ ಮುದ್ರಿತವಾದ ಈ ಕೃತಿಯು ಸುರೇಶ ನೆಗಳಗುಳಿಯವರ ಶುಭ ಪ್ರಕಾಶನದ ಮೂಲಕ ಬೆಳಕಿಗೆ ಬಂದಿದೆ. ಕೊನೆಯಲ್ಲಿ ಪಿ.ವಿ. ಪ್ರದೀಪ್ ಕುಮಾರ್ ರವರು ಶಾಲು ಹಾರ ಸಹಿತ ಪುರಸ್ಕರಿಸಿದರು.





