ವಿಟ್ಲ ಠಾಣೆಗೆ ನೂತನ ಪೊಲೀಸ್ ನಿರೀಕ್ಷಕರಾಗಿ ಜನರ ವಿಶ್ವಾಸ ಗೆದ್ದ ಅಧಿಕಾರಿ ಪ್ರಕಾಶ್ ದೇವಾಡಿಗ ನೇಮಕ
ಗಂಭೀರ ಪ್ರಕರಣಗಳನ್ನು ಸಲೀಸಾಗಿ ಬಗೆಹರಿಸುವ ಇನ್ಸ್ ಪೆಕ್ಟರ್ ಪ್ರಕಾಶ್

ವಿಟ್ಲ ಠಾಣೆಯ ಪೊಲೀಸ್ ನಿರೀಕ್ಷಕರಾಗಿದ್ದ ನಾಗರಾಜ್ ಹೆಚ್.ಇ. ಇವರನ್ನು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ವಿಟ್ಲ ಪೊಲೀಸ್ ಠಾಣೆಗೆ ನೂತನ ಪೊಲೀಸ್ ನಿರೀಕ್ಷಕರಾಗಿ ಪ್ರಕಾಶ್ ದೇವಾಡಿಗರವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಉಪ್ಪಿನಂಗಡಿ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ರವಿ ಬಿ.ಎಸ್. ರವರನ್ನು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ.

ವಿಟ್ಲ ಠಾಣೆಗೆ ನೂತನ ಪೊಲೀಸ್ ನಿರೀಕ್ಷಕರಾಗಿ ಪ್ರಕಾಶ್ ದೇವಾಡಿಗರವರು ನಾಳೆ ನವಂಬರ್ 7ರಂದು ಶುಕ್ರವಾರ ಅಧಿಕಾರ ಸ್ವೀಕರಿಸಲಿದ್ದಾರೆ. ಇವರು ತಮ್ಮ ಪ್ರಾಮಾಣಿಕತೆ, ಪರಿಶ್ರಮ ಮತ್ತು ಕಾರ್ಯನಿಷ್ಠೆಯಿಂದ ಜನರ ವಿಶ್ವಾಸ ಗೆದ್ದ ಅಧಿಕಾರಿಯಾಗಿದ್ದಾರೆ. ವಿವಿಧ ಠಾಣೆಗಳಲ್ಲಿ ಸೇವೆ ಸಲ್ಲಿಸಿದ ವೇಳೆ ಅವರು ಅನೇಕ ಗಂಭೀರ ಪ್ರಕರಣಗಳನ್ನು ಬಗೆಹರಿಸುವ ಮೂಲಕ ತನ್ನ ಪ್ರತಿಭೆ ಮತ್ತು ಕಾರ್ಯನಿಷ್ಠೆಯನ್ನು ತೋರಿದ್ದಾರೆ. ಜನಸಂಪರ್ಕದ ದೃಷ್ಟಿಯಿಂದ ಜನಮೈತ್ರಿ ಪೊಲೀಸ್ತನದ ಮಾದರಿಯಾಗಿರುವ ದೇವಾಡಿಗರವರು ವಿಟ್ಲ ಪ್ರದೇಶದ ಕಾನೂನು ಮತ್ತು ಸುವ್ಯವಸ್ಥೆಯನ್ನು ಬಲಪಡಿಸಲು ಶ್ರಮಿಸುವ ನಿರೀಕ್ಷೆ ವ್ಯಕ್ತವಾಗಿದೆ.


ಪ್ರಕಾಶ್ ದೇವಾಡಿಗರವರ ಬುದ್ಧಿವಂತಿಕೆ ಮತ್ತು ತನಿಖಾ ಕೌಶಲ್ಯವು ಅನೇಕ ಪ್ರಕರಣಗಳನ್ನು ಶೀಘ್ರ ಬಗೆಹರಿಸಲು ಸಹಾಯ ಮಾಡಿದ್ದು, ಇಲಾಖೆಯ ಒಳಗೂ ಹೊರಗೂ ಪ್ರಶಂಸೆ ಗಳಿಸಿದೆ. ವಿಟ್ಲ ಠಾಣೆಯಲ್ಲಿ ಅವರು ಪಾರದರ್ಶಕತೆ, ಶಿಸ್ತು ಮತ್ತು ಸಾರ್ವಜನಿಕರ ಸಹಕಾರದೊಂದಿಗೆ ಅಪರಾಧ ಮುಕ್ತ ವಾತಾವರಣ ನಿರ್ಮಿಸಲು ಮುಂದಾಗಿದ್ದಾರೆ.




