April 29, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ನಾಳೆ ಡಿಸೆಂಬರ್ 28 ರಂದು ಪುತ್ತೂರಿನಲ್ಲಿ ನಿರಂತರ ಸಾಹಿತ್ಯ ಪುರಸ್ಕಾರ ಪ್ರದಾನ

ಫ್ಲಾವಿಯಾ ಅಲ್ಬುಕರ್ಕ್ ಅವರ ಪುಸ್ತಕ ಲೋಕಾರ್ಪಣೆ ಹಾಗೂ ಭವ್ಯ ಬಹುಭಾಷಾ ಕವಿ ಗೋಷ್ಠಿ

ನಿರಂತರ ಪ್ರಕಾಶನ, ಗದಗ; ಮಕಾನದಾರ ಸಾಹಿತ್ಯ ಪ್ರತಿಷ್ಠಾನ, ಗಜೇಂದ್ರಗಡ ಹಾಗೂ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ಗಳ ಸಂಯುಕ್ತ ಆಶ್ರಯದಲ್ಲಿ, ಪುತ್ತೂರಿನ ಖ್ಯಾತ ಶಿಕ್ಷಕಿ, ಕವಯಿತ್ರಿ ಹಾಗೂ ಅನುವಾದಕಿ ಫ್ಲಾವಿಯಾ ಅಲ್ಬುಕರ್ಕ್ ಅವರಿಗೆ “ನಿರಂತರ ಸಾಹಿತ್ಯ ಪುರಸ್ಕಾರ” ಪ್ರದಾನ, ಅವರ ಕೃತಿ “ಸಖಿ ಸೂಸಿದ ಸೌಗಂಧ” ಪುಸ್ತಕ ಲೋಕಾರ್ಪಣೆ ಹಾಗೂ ಭವ್ಯ ಬಹುಭಾಷಾ ಕವಿ ಗೋಷ್ಠಿ ಸಮಾರಂಭವನ್ನು ಡಿಸೆಂಬರ್ 28ರಂದು ಆದಿತ್ಯವಾರ ಬೆಳಿಗ್ಗೆ 9.30ಕ್ಕೆ ದರ್ಬೆಯ ಸಂತ ಫಿಲೋಮಿನಾ ಜ್ಯೂಬಿಲಿ ಮೆಮೋರಿಯಲ್ ಹಾಲ್‌ನಲ್ಲಿ ಆಯೋಜಿಸಲಾಗಿದೆ. ಈ ಭವ್ಯ ಕಾರ್ಯಕ್ರಮದಲ್ಲಿ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಉಮೇಶ್ ನಾಯಕ್ ಇವರು ನೆರೆದ ಎಲ್ಲರನ್ನು ಉದ್ದೇಶಿಸಿ ಮಾತನಾಡಲಿರುವರು.

ಸಮಾರಂಭವನ್ನು ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾದ ಸನ್ಮಾನ್ಯ ಯು.ಟಿ. ಖಾದರ್ ಉದ್ಘಾಟಿಸಲಿದ್ದು, ಪುತ್ತೂರಿನ ಮಾಯ್ ದೆ ದೇವುಸ್ ಚರ್ಚಿನ ಧರ್ಮಗುರುಗಳಾದ ಅತೀ ವಂದನೀಯ ಫಾದರ್ ಲಾರೆನ್ಸ್ ಮಸ್ಕರೇನ್ಹಸ್ ಶುಭಾಶಂಸನೆ ಸಲ್ಲಿಸಲಿದ್ದಾರೆ. ಫ್ಲಾವಿಯಾ ಅಲ್ಬುಕರ್ಕ್ ಅವರ “ಸಖಿ ಸೂಸಿದ ಸೌಗಂಧ” ಕೃತಿಯನ್ನು ಬಹುಭಾಷಾ ಕವಿ ಹಾಗೂ ಚಲನಚಿತ್ರ ನಟರಾದ ಮುಹಮ್ಮದ್ ಬಡ್ಡೂರು ಲೋಕಾರ್ಪಣೆಗೊಳಿಸಲಿದ್ದಾರೆ.

ಕೃತಿಕಾರರ ಪರಿಚಯವನ್ನು ಸಂತ ವಿಕ್ಟರನ ಆಂಗ್ಲ ಮಾಧ್ಯಮ ಶಾಲೆ, ಪುತ್ತೂರಿನ ಶಿಕ್ಷಕಿ ಕುಮುದಾಕ್ಷಿ ವಿ. ನಡೆಸಲಿದ್ದು, ಕೃತಿ ಪರಿಚಯವನ್ನು ಶಿವಮೊಗ್ಗದ ಉಪನ್ಯಾಸಕಿ ಹಾಗೂ ಕವಯಿತ್ರಿ ಡಾ. ಹಸೀನಾ ಎಚ್. ಖಾದ್ರಿ ಮಾಡಲಿದ್ದಾರೆ. ಪುರಸ್ಕಾರದ ಮಹತ್ವವನ್ನು ಡಾ. ರೇಣುಕಾತಾಯಿ ಸಂತಬಾ (ಹುಬ್ಬಳ್ಳಿ) ವಿವರಿಸಲಿದ್ದು, ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಮಾನ್ಯ ಅಶೋಕ್ ಕುಮಾರ್ ರೈ ಅವರು ಪುರಸ್ಕಾರ ಪ್ರದಾನ ಮಾಡಲಿದ್ದಾರೆ. ಹಿರಿಯ ಲೇಖಕ, ವಕೀಲ ಹಾಗೂ ಸಂಘಟಕರಾದ ಬಿ. ಪುರಂದರ ಭಟ್ ಆಶಯ ಭಾಷಣ ಮಾಡಲಿದ್ದು, ಮುಕ್ಕದ ಪವಿತ್ರಾತ್ಮರ ಇಗರ್ಜಿ ಧರ್ಮಗುರು ವಂದನೀಯ ಫಾದರ್ ಸ್ಟ್ಯಾನಿ ಪಿಂಟೋ ಶುಭನುಡಿ ನೀಡಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಕವಿ ಹಾಗೂ ಪ್ರಕಾಶಕರಾದ ಎ.ಎಸ್. ಮಕಾನದಾರ (ಗದಗ) ವಹಿಸಲಿದ್ದಾರೆ.

ಅದೇ ದಿನ ಬಹುಭಾಷಾ ಕವಿ ಗೋಷ್ಠಿ ಹಾಗೂ ಚುಟುಕು ಕವಿಗೋಷ್ಠಿ ನಡೆಯಲಿದೆ. ಕನ್ನಡ, ತುಳು, ಕೊಂಕಣಿ, ಹಿಂದಿ, ಬ್ಯಾರಿ, ಮರಾಠಿ ಸೇರಿದಂತೆ ವಿವಿಧ ಭಾಷೆಗಳ ಖ್ಯಾತ ಕವಿಗಳು ಗದಗ, ಶಿವಮೊಗ್ಗ, ಧಾರವಾಡ, ಹುಬ್ಬಳ್ಳಿ, ಕೊಡಗು, ಬೆಂಗಳೂರು, ಉಡುಪಿ, ಮಂಗಳೂರು ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾಹಿತಿ ಕವಿಗಳು ಈ ಗೋಷ್ಠಿಯಲ್ಲಿ ಭಾಗವಹಿಸಲಿದ್ದು, ಸಾಹಿತ್ಯದ ಸೌಹಾರ್ದತೆಯ ಅನನ್ಯ ಮೇಳವಾಗಲಿದೆ.

ಕಾರ್ಯಕ್ರಮದಲ್ಲಿ ನೃತ್ಯ, ಸಾಂಸ್ಕೃತಿಕ ಪ್ರದರ್ಶನಗಳು, ವಿದ್ಯಾರ್ಥಿಗಳ ಪದ್ಯ ಬಂಡಿ ಹಾಗೂ ಸಹಭೋಜನವೂ ಏರ್ಪಡಿಸಲಾಗಿದೆ. ಫ್ಲಾವಿಯಾ ಅಲ್ಬುಕರ್ಕ್ ಅವರ ಕುಟುಂಬಸ್ಥರು, ಶಿಷ್ಯರು, ಅಭಿಮಾನಿಗಳು ಹಾಗೂ ಸಾಹಿತ್ಯಾಸಕ್ತರು ಈ ಸಾಹಿತ್ಯೋತ್ಸವಕ್ಕೆ ಸಾಕ್ಷಿಯಾಗಲಿದ್ದಾರೆ. ಈ ಸಂದರ್ಭ ಎಲ್ಲರಿಗೂ ಕ್ರಿಸ್ಮಸ್ ಹಾಗೂ 2026ನೇ ಹೊಸ ವರ್ಷದ ಹಾರ್ದಿಕ ಶುಭಾಶಯಗಳನ್ನು ಆಯೋಜಕರು ಕೋರಿದ್ದಾರೆ.

You may also like

News

ಬಂಟ್ವಾಳದ ತೌಹೀದ್ ಶಾಲೆಗೆ ಕೀರ್ತಿ ತಂದ ಆಭಿದುನ್ನೀಸ – SSLC ಪರೀಕ್ಷೆಯಲ್ಲಿ ಭರ್ಜರಿ ಸಾಧನೆ

ಇತ್ತೀಚೆಗೆ ಪ್ರಕಟಗೊಂಡ ರಾಜ್ಯ ಮಟ್ಟದ SSLC ಪರೀಕ್ಷಾ ಫಲಿತಾಂಶದಲ್ಲಿ ಬಂಟ್ವಾಳದ ತೌಹೀದ್ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ಆಭಿದುನ್ನೀಸ ಎಂ. ಅವರು ಅತ್ಯುತ್ತಮ ಅಂಕಗಳನ್ನು ಗಳಿಸುವ ಮೂಲಕ
News

ಪಾಲ್ದನೆ ಚರ್ಚ್‌ನಲ್ಲಿ ವಿದ್ಯಾರ್ಥಿಗಳಿಗೆ ಭವಿಷ್ಯದ ದಾರಿ – ವೃತ್ತಿ ಮಾರ್ಗದರ್ಶನ ಶಿಬಿರ ಯಶಸ್ವಿ

ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ನಂತರ ಸರಿಯಾದ ವೃತ್ತಿಜೀವನವನ್ನು ಆರಿಸಿಕೊಳ್ಳಲು ನೆರವಾಗುವ ನಿಟ್ಟಿನಲ್ಲಿ, ಮಂಗಳೂರು ಧರ್ಮಕ್ಷೇತ್ರಕ್ಕೆ ಒಳಪಟ್ಟ ಪಾಲ್ದನೆಯ ಸಂತ ತೆರೆಸಾ ಚರ್ಚ್‌ನ ಶೈಕ್ಷಣಿಕ ಆಯೋಗದ ವತಿಯಿಂದ ಇತ್ತೀಚೆಗೆ

You cannot copy content of this page