ಧರ್ಮ ಕೇಳಿ ಅವಾಚ್ಯ ನಿಂದನೆ ಹಾಗೂ ಹಲ್ಲೆ – ಕೊಲೆಯತ್ನ ಪ್ರಕರಣದಲ್ಲಿ ಕಾವೂರು ಠಾಣಾ ಪೊಲೀಸರಿಂದ ಮೂವರ ಬಂಧನ
ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಧರ್ಮ ವಿಚಾರಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾವೂರು ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.



ಜನವರಿ 11ರಂದು ಭಾನುವಾರ ಸಂಜೆ 6.05 ಗಂಟೆಗೆ ನಾಲ್ವರು ಆರೋಪಿತರು ಪಿರ್ಯಾದಿದಾರರನ್ನು ತಡೆದು ನಿಲ್ಲಿಸಿ “ನೀನು ಹಿಂದೂನಾ, ಮುಸ್ಲಿಂನಾ” ಎಂದು ಜೋರಾಗಿ ಪ್ರಶ್ನಿಸಿ, “ನೀನು ಬಾಂಗ್ಲಾದೇಶದವನು” ಎಂದು ಆರೋಪಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಬಳಿಕ ಸಾರಣಿ ಮಾಡುವ ಕರಣಿ (ತಾಪಿ)ಯಿಂದ ಹಲ್ಲೆ ನಡೆಸಿ ಕೊಲೆ ಮಾಡಲು ಯತ್ನಿಸಿದ ಬಗ್ಗೆ ಜನವರಿ 12ರಂದು ಕಾವೂರು ಪೊಲೀಸ್ ಠಾಣೆಯಲ್ಲಿ ಠಾಣಾ ಅಪರಾಧ ಸಂಖ್ಯೆ 03/2026 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ–2023ರ ಕಲಂಗಳು 126(2), 352, 351(3), 353, 109, 118(1) ಹಾಗೂ 3(5) ಅಡಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ.

ಬಂಧಿತರ ವಿವರ ಹೀಗಿದೆ:
- ರತೀಶ್ ದಾಸ್ (32) – ರಾಮ್ ದಾಸ್ ಅವರ ಪುತ್ರ, ಮನೆ ನಂ. 3-100, ರಾಮಣ್ಣ ಜ್ಯೋಗಿ ಕಂಪೌಂಡ್, ನಾರಾಯಣಗುರು ಭಜನಾ ಮಂದಿರದ ಬಳಿ, ಕೂಳೂರು ಗ್ರಾಮ, ಮಂಗಳೂರು ತಾಲೂಕು.
- ಧನುಷ್ (24) – ಶ್ರೀನಿವಾಸ ಅವರ ಪುತ್ರ, ನಾರಾಯಣಗುರು ಭಜನಾ ಮಂದಿರದ ಬಳಿ, ಕೂಳೂರು ಗ್ರಾಮ, ಮಂಗಳೂರು ತಾಲೂಕು.
- ಸಾಗರ್ (24) – ಸುರೇಶ್ ಅವರ ಪುತ್ರ, ಪ್ರೇಮ್ ಕಂಪೌಂಡ್, ರಾಯಕಟ್ಟೆ, ಕೂಳೂರು ಗ್ರಾಮ, ಮಂಗಳೂರು ತಾಲೂಕು.



ಈ ಮೇಲಿನ ಆರೋಪಿತರನ್ನು ಮಂಗಳೂರು ಉತ್ತರ ಉಪವಿಭಾಗದ ಎಸಿಪಿ ಶ್ರೀಕಾಂತ್ ಕೆ. ಅವರ ಮಾರ್ಗದರ್ಶನದಲ್ಲಿ, ಕಾವೂರು ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ರಾಘವೇಂದ್ರ ಎಂ. ಬೈಂದೂರು ಅವರ ನೇತೃತ್ವದಲ್ಲಿ, ಪೊಲೀಸ್ ಉಪನಿರೀಕ್ಷಕರಾದ ಮಲ್ಲಿಕಾರ್ಜುನ ಬಿರಾದಾರ, ಎಎಸ್ಐ ಚಂದ್ರಹಾಸ್, ಹೆಚ್.ಸಿ. ಸನೀಲ್, ಬಾಲಕೃಷ್ಣ ಹಾಗೂ ಸಿಬ್ಬಂದಿಗಳಾದ ರಾಘವೇಂದ್ರ, ರಿಯಾಜ್, ನಾಗರಾಜ್, ಹನುಮಂತ ಅವರುಗಳು ಪತ್ತೆ ಮಾಡಿ ಬಂಧಿಸಿದ್ದಾರೆ.
ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗುವ ಯಾವುದೇ ಕೃತ್ಯಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕಾವೂರು ಪೊಲೀಸರು ತಿಳಿಸಿದ್ದಾರೆ.




