ಪುತ್ತೂರು ಗ್ರಾಮಾಂತರ ಪೊಲೀಸ್ ಕಾರ್ಯಾಚರಣೆ – 106 ಕಿಲೋ ಗಾಂಜಾ ವಶ
ಇಬ್ಬರು ಆರೋಪಿಗಳ ಬಂಧನ


ಪುತ್ತೂರು ತಾಲೂಕು ಪಡುವನ್ನೂರು ಗ್ರಾಮದ ಸಜಂಕಾಡಿ ಪ್ರದೇಶದಲ್ಲಿ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯವರು ನಡೆಸಿದ ಯಶಸ್ವಿ ಕಾರ್ಯಾಚರಣೆಯಲ್ಲಿ ಸುಮಾರು 106 ಕಿಲೋ 60 ಗ್ರಾಂ ತೂಕದ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.
ಜನವರಿ 19ರಂದು ಸಂಜೆ, ಒಂದು ಕಾರು ಮತ್ತು ಒಂದು ಅಶೋಕ್ ಲೈಲ್ಯಾಂಡ್ ಗೂಡ್ಸ್ ವಾಹನದಲ್ಲಿ ಗಾಂಜಾ ಸಾಗಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ, ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕ ಗುಣಪಾಲ ಜೆ. ಅವರು ಸಿಬ್ಬಂದಿಗಳೊಂದಿಗೆ ಸಜಂಕಾಡಿ ಪ್ರದೇಶದಲ್ಲಿ ವಾಹನಗಳನ್ನು ತಪಾಸಣೆಗೆ ನಿಲ್ಲಿಸಿದರು. ತಪಾಸಣೆಯ ವೇಳೆ ಕಾರಿನ ಚಾಲಕ ಬೆಳ್ತಂಗಡಿ ತಾಲೂಕು ಚಾರ್ಮಾಡಿ ಗ್ರಾಮದ ನಿವಾಸಿ 37 ವರ್ಷ ಪ್ರಾಯದ ರಫೀಕ್ ಪಿ. ಎಂದು ಗುರುತಿಸಿಕೊಂಡಿದ್ದು, ಆತನ ವರ್ತನೆಯಿಂದ ಸಂಶಯಗೊಂಡು ವಾಹನ ಪರಿಶೀಲಿಸಿದಾಗ ಪ್ಲಾಸ್ಟಿಕ್ ಕವರ್ನಲ್ಲಿ ಸುಮಾರು 100 ಗ್ರಾಂ ತೂಕದ ಗಾಂಜಾ ಸೊಪ್ಪು, ಹೂ ಹಾಗೂ ಕಾಯಿ ಹೊಂದಿದ್ದ ಕಟ್ಟು ಪತ್ತೆಯಾಯಿತು.


ಅನಂತರ ಗೂಡ್ಸ್ ವಾಹನದ ಚಾಲಕನನ್ನು ವಿಚಾರಿಸಲಾಗಿ ಆತನು ಬೆಳ್ತಂಗಡಿ ತಾಲೂಕು ಚಾರ್ಮಾಡಿ ಗ್ರಾಮದ ನಿವಾಸಿ 37 ವರ್ಷ ಪ್ರಾಯದ ಅಬ್ದುಲ್ ಸಾದಿಕ್ ಎಂದು ತಿಳಿದುಬಂದಿತು. ಗೂಡ್ಸ್ ವಾಹನವನ್ನು ಪರಿಶೀಲಿಸಿದಾಗ ಅದರಲ್ಲಿ ಒಟ್ಟು 73 ಕಟ್ಟುಗಳಲ್ಲಿ 106 ಕಿಲೋ 60 ಗ್ರಾಂ ತೂಕದ ಗಾಂಜಾ ಪತ್ತೆಯಾಗಿದ್ದು, ಇದರ ಅಂದಾಜು ಮೌಲ್ಯ ರೂಪಾಯಿ 53,03,000/- ಆಗಿದೆ.
ವಿಚಾರಣೆ ವೇಳೆ ಆರೋಪಿಗಳು ಸದ್ರಿ ಗಾಂಜಾವನ್ನು ಕೇರಳ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಭಾಗಗಳಲ್ಲಿ ಮಾರಾಟ ಮಾಡುವ ಉದ್ದೇಶದಿಂದ ಸಾಗಾಟ ಮಾಡುತ್ತಿದ್ದುದಾಗಿ ತಿಳಿಸಿರುವರು. ಮುಂದಿನ ಕಾನೂನು ಕ್ರಮಕ್ಕಾಗಿ ಗಾಂಜಾ, ಸಾಗಾಟಕ್ಕೆ ಬಳಸಿದ ಕಾರು ಹಾಗೂ ಗೂಡ್ಸ್ ವಾಹನ, ಮತ್ತು ಆರೋಪಿಗಳ ಬಳಿಯಿದ್ದ ಎರಡು ಮೊಬೈಲ್ ಫೋನ್ಗಳನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ಈ ಸಂಬಂಧ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ. ಸಂ. 09/2026ರಂತೆ ಕಲಂ 8(c), 20(b)(ii)C, ಎನ್ಡಿಪಿಎಸ್ ಕಾಯ್ದೆ–1985 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.

ಸದ್ರಿ ಕಾರ್ಯಾಚರಣೆಯಲ್ಲಿ ಪೊಲೀಸ್ ಉಪ ನಿರೀಕ್ಷಕ ಗುಣಪಾಲ ಜೆ. ಅವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಹರೀಶ್, ಹರ್ಷಿತ್, ಪ್ರಶಾಂತ್, ಅದ್ರಾಮ, ಪ್ರಶಾಂತ್ ರೈ, ಪ್ರವೀಣ್ ರೈ, ಭವಿತ್ ರೈ, ನಾಗರಾಜ್, ಸತೀಶ್, ರಮೇಶ್, ಸುಬ್ರಮಣಿ ಮತ್ತು ವಿನೋದ್ ಅವರುಗಳು ಭಾಗವಹಿಸಿದ್ದರು.




