ಕಾಜೂರು ಉರೂಸ್ ಸಂಭ್ರಮ: ಪ್ರತಿದಿನ ವಿಭಿನ್ನ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನ
ಸುಮಾರು ಎಂಟು ಶತಮಾನಗಳಿಗೂ ಅಧಿಕ ಇತಿಹಾಸ ಹೊಂದಿರುವ, ದಕ್ಷಿಣ ಭಾರತದ ಅಜ್ಮೀರ್ ಎಂದೇ ಖ್ಯಾತಿ ಪಡೆದ ಸರ್ವಧರ್ಮೀಯರ ಸಮನ್ವಯ ಕೇಂದ್ರ ಕಾಜೂರು ದರ್ಗಾ ಶರೀಫ್ ಇಲ್ಲಿ ಜನವರಿ 16ರಿಂದ ಆರಂಭಗೊಂಡ ಉರೂಸ್ ಸಂಭ್ರಮದ ಅಂಗವಾಗಿ ಪ್ರತಿದಿನ ವಿಭಿನ್ನ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿಭಾವದಿಂದ ನಡೆಯುತ್ತಿವೆ.

ಉರೂಸ್ ಅಂಗವಾಗಿ ಜನವರಿ 16ರಂದು ಸಯ್ಯಿದ್ ಕಾಜೂರು ತಂಙಳ್ ಉಪನ್ಯಾಸ ಮಾಲಿಕೆಗೆ ಶುಭಾರಂಭಗೊಳಿಸಿದರು. ಜನವರಿ 17ರಂದು ಸಯ್ಯಿದ್ ಕಿಲ್ಲೂರು ತಂಙಳ್ ಉಪನ್ಯಾಸ ನೀಡಿದರೆ, ಜನವರಿ 18ರಂದು ಲತೀಫ್ ಸಖಾಫಿ ಕಾಂತಪುರಂ ನೇತೃತ್ವದಲ್ಲಿ ಮದನಿಯಂ ಮಜ್ಲಿಸ್ ನಡೆಯಿತು. ಜನವರಿ 19ರಂದು ದಾರುಸ್ಸಲಾಂ ಬೆಳ್ತಂಗಡಿ ಚೇರ್ಮೆನ್ ಸಯ್ಯಿದ್ ಜಿಫ್ರಿ ತಂಙಳ್ ದುಆ ನೇತೃತ್ವ ವಹಿಸಿದ್ದು, ವಾಗ್ಮಿ ಅಬ್ದುಲ್ ಅಝೀಝ್ ಅಶ್ರಫಿ ಪಾಣತ್ತೂರು ಉಪನ್ಯಾಸ ನೀಡಿದರು. ಜನವರಿ 20ರಂದು ಜಲಾಲಿ ಉಸ್ತಾದ್ ಉಪನ್ಯಾಸ ನೆರವೇರಿಸಿದ್ದು, ಜನವರಿ 21ರಂದು ಪೆರ್ಮುಗಂ ಅಶ್ರಫ್ ಉಸ್ತಾದ್ ನೇತೃತ್ವದಲ್ಲಿ ಇಸ್ಲಾಮಿಕ್ ಕಥಾಪ್ರಸಂಗ ನಡೆಯಲಿದೆ.


ಉರೂಸಿನ ಅಂಗವಾಗಿ ಇನ್ನು ನಾಲ್ಕು ದಿನಗಳ ಕಾರ್ಯಕ್ರಮಗಳು ಬಾಕಿಯಿದ್ದು, ಜನವರಿ 22ರಂದು ಬಾಯಾರ್ ತಂಙಳ್ ನೇತೃತ್ವದಲ್ಲಿ ಬೃಹತ್ ದ್ಸಿಕ್ರ್ ಮಜ್ಲಿಸ್ ನಡೆಯಲಿದೆ. ಡಾ. ಕಾವಳಕಟ್ಟೆ ಹಝ್ರತ್ ಸೇರಿದಂತೆ ಉಲೆಮಾ ಪ್ರಮುಖರು ಭಾಗವಹಿಸಲಿದ್ದಾರೆ. ಜನವರಿ 23ರಂದು ಕಾಜೂರು ಮಹಿಳಾ ಶರೀಅತ್ ಕಾಲೇಜು ವಿದ್ಯಾರ್ಥಿಗಳ ಪದವಿ ಪ್ರದಾನ ಸಮಾರಂಭ ನಡೆಯಲಿದೆ.

ಜನವರಿ 25ರಂದು ಬೆಳಿಗ್ಗೆ ಉರೂಸ್ ಸಮಾರಂಭ ನಡೆಯಲಿದ್ದು, ಸಯ್ಯಿದ್ ಕುಂಬೋಳ್ ತಂಙಳ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಜೆ ನಡೆಯುವ ಸಮಾರೋಪ ಸಮಾರಂಭಕ್ಕೆ ಸುಲ್ತಾನುಲ್ ಉಲಮಾ, ಇಂಡಿಯನ್ ಗ್ರ್ಯಾಂಡ್ ಮುಫ್ತಿ ಎ.ಪಿ. ಉಸ್ತಾದ್ ನೇತೃತ್ವ ನೀಡಲಿದ್ದಾರೆ. ಸಮಾರಂಭದಲ್ಲಿ ವಿಧಾನ ಸಭಾ ಸ್ಪೀಕರ್ ಯು.ಟಿ. ಖಾದರ್, ವಕ್ಫ್ ಸಚಿವ ಬಿ.ಝೆಡ್. ಝಮೀರ್ ಅಹಮ್ಮದ್, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಮೌಲಾನಾ ಶಾಫಿ ಸಅದಿ, ಅಝೀಝ್ ದಾರಿಮಿ ಚೊಕ್ಕಬೆಟ್ಟು, ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕ ಹರೀಶ್ ಪೂಂಜ, ಮೆಸ್ಕಾಂ ನಿಗಮಾಧ್ಯಕ್ಷ ಕೆ. ಹರೀಶ್ ಕುಮಾರ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ. ಕೊನೆಯ ದಿನ ಅನ್ನದಾನ ಕೂಡ ನಡೆಯಲಿದೆ.




