ತಂದೆಯಿಂದಲೇ 18 ವರ್ಷದ ಮಗಳ ಹತ್ಯೆ
ಮಂಜೇಶ್ವರದಲ್ಲಿ ದಾರುಣ ಘಟನೆ – ಆರೋಪಿ ಬಂಧನ

ತಂದೆಯೊಬ್ಬನು ತನ್ನ 18 ವರ್ಷದ ಮಗಳನ್ನೇ ಕಡಿದು ಬರ್ಬರವಾಗಿ ಹತ್ಯೆಗೈದ ದಾರುಣ ಘಟನೆ ಕಾಸರಗೋಡು ಜಿಲ್ಲೆಯ ಮಂಜೇಶ್ವರ ಸಮೀಪದ ಕುಂಜತ್ತೂರು ತೂಮಿನಾಡು ಎಂಬಲ್ಲಿ ನಡೆದಿದೆ. ಕೌಟುಂಬಿಕ ಕಲಹವೇ ಈ ಕೃತ್ಯಕ್ಕೆ ಕಾರಣ ಎಂದು ಪ್ರಾಥಮಿಕವಾಗಿ ತಿಳಿದುಬಂದಿದೆ. ತೂಮಿನಾಡಿನ 18 ವರ್ಷ ಪ್ರಾಯದ ಜುಮೈಲಾ ಕೊಲೆಗೀಡಾದ ಯುವತಿ. ಈ ಕೃತ್ಯ ನಡೆಸಿದ ಆರೋಪದಲ್ಲಿ ಆಕೆಯ ತಂದೆ ಉಮ್ಮರ್ ಫಾರೂಕ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆ ವೇಳೆ ಕಿರುಚಾಟದ ಶಬ್ದ ಕೇಳಿ ಪರಿಸರದವರು ಮನೆಗೆ ಧಾವಿಸಿದಾಗ, ಜುಮೈಲಾ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಕೃತ್ಯ ನಡೆದ ಸಮಯದಲ್ಲಿ ಮನೆಯಲ್ಲೇ ತಾಯಿ ಇದ್ದರು ಎನ್ನಲಾಗಿದೆ.

ಸ್ಥಳೀಯರ ಪ್ರಕಾರ, ವಿದೇಶದಲ್ಲಿದ್ದ ಉಮ್ಮರ್ ಫಾರೂಕ್ ಮೂರು ತಿಂಗಳ ಹಿಂದೆ ಊರಿಗೆ ವಾಪಸಾಗಿದ್ದು, ಆಸ್ತಿ ವಿಚಾರವಾಗಿ ಕುಟುಂಬದಲ್ಲಿ ಆಗಾಗ್ಗೆ ಕಲಹ ನಡೆಯುತ್ತಿತ್ತು. ಈ ಹಿನ್ನೆಲೆಯಲ್ಲಿ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಘಟನೆಯಿಂದ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮಂಜೇಶ್ವರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ಮುಂದುವರಿದಿದೆ.



