August 28, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಕನ್ನಡ ಗ್ರಾಮದಲ್ಲಿ ‘ಕಾಸರಗೋಡು ಗೋ-ಕುಟೀರ’ ನಿರ್ಮಾಣಕ್ಕೆ ಚಾಲನೆ

ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರಿಂದ ಭೂಮಿಪೂಜೆ

ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.), ಕನ್ನಡ ಗ್ರಾಮ, ಕಾಸರಗೋಡು ಇದರ 35ನೇ ಸಂಸ್ಥಾಪನಾ ವರ್ಷಾಚರಣೆ ಹಾಗೂ ಕನ್ನಡ ಗ್ರಾಮದ ಸಂಸ್ಥಾಪಕ ಶಿವರಾಮ ಕಾಸರಗೋಡು ಅವರ 60ನೇ ಜನ್ಮ ವರ್ಷಾಚರಣೆಯನ್ನು ಗೋಸೇವೆಯ ಮೂಲಕ ಅರ್ಥಪೂರ್ಣವಾಗಿ ಆಚರಿಸುವ ಉದ್ದೇಶದಿಂದ ‘ಕಾಸರಗೋಡು ಗೋ-ಕುಟೀರ’ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು.

2025ರ ನವೆಂಬರ್ 4ರಂದು ಕಾಸರಗೋಡು ಕನ್ನಡ ಗ್ರಾಮದ ಆವರಣದಲ್ಲಿ ಎಡನೀರು ಮಠದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಭೂಮಿಪೂಜೆ ನೆರವೇರಿಸಿ ಗೋ-ಕುಟೀರ ನಿರ್ಮಾಣ ಕಾರ್ಯಕ್ಕೆ ಶುಭಾರಂಭ ಮಾಡಿದರು. ಜಗಜ್ಜನನಿ ಗೋಮಾತೆಯ ಆಶೀರ್ವಾದವನ್ನು ಪಡೆಯುವ ಜೊತೆಗೆ ದೇಸಿ ಗೋವುಗಳ ಸಂರಕ್ಷಣೆ, ಪೋಷಣೆ ಹಾಗೂ ಗೋಸೇವೆಯನ್ನು ಧಾರ್ಮಿಕ ಶ್ರದ್ದಾ ಕೇಂದ್ರವಾಗಿ ರೂಪಿಸುವ ಉದ್ದೇಶದಿಂದ ಸಾರ್ವಜನಿಕರು ಮತ್ತು ಗೋಭಕ್ತರ ಸಹಕಾರದಲ್ಲಿ ಸುಮಾರು 25 ಲಕ್ಷ ರೂಪಾಯಿ ವೆಚ್ಚದಲ್ಲಿ ಬೃಹತ್ ಕಾರ್ಯಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ.

ರಾಜ್ಯದ ಪ್ರತಿಯೊಂದು ಮನೆಯವರಿಂದ ಭಕ್ತಿ ಪೂರ್ವಕವಾಗಿ ಗೋವಿಗೆ ಮೇವು ಹಾಗೂ ಗೋ-ಆಹಾರವನ್ನು ‘ಹೊರೆಕಾಣಿಕೆ – ಹಸಿರು ವಾಣಿ ಮಾದರಿಯಲ್ಲಿ ದಿನನಿತ್ಯ ಅರ್ಪಿಸುವ ಗೋಸೇವಾ ಅಭಿಯಾನವನ್ನು ಪ್ರಾರಂಭಿಸುವ ಉದ್ದೇಶವಿದೆ. ಗೋಭಕ್ತರ ಕುಟುಂಬದ ಮಕ್ಕಳಿಗೆ ದೇಸಿ ಗೋವಿನ ಹಾಲಿನ ಬಳಕೆಯನ್ನು ಉತ್ತೇಜಿಸುವುದು ಹಾಗೂ ಮಠ, ಮಂದಿರ, ದೈವಸ್ಥಾನ, ದೇವಸ್ಥಾನಗಳ ಧಾರ್ಮಿಕ ಉತ್ಸವಗಳಿಗೆ ಅಗತ್ಯವಾದ ಗೋಮೂತ್ರ, ಪಂಚಗವ್ಯ, ಗೋಮಯ ಇತ್ಯಾದಿಗಳನ್ನು ‘ಕಾಸರಗೋಡು ಗೋ-ಕುಟೀರದಲ್ಲಿ ನಿರಂತರವಾಗಿ ಲಭ್ಯವಾಗುವಂತೆ ಮಾಡಲಾಗುವುದು.

2025ರ ದೀಪಾವಳಿ ಹಬ್ಬದ ಗೋ ಪೂಜೆಯ ದಿನದಂದು ಗೋ ಸಂಭ್ರಮವನ್ನು ಶ್ರದ್ಧಾ ಪೂರ್ವಕವಾಗಿ ಆಚರಿಸಿ ಗೋ-ಸಂಕಲ್ಪವನ್ನು ಕೈಗೊಳ್ಳಲಾಯಿತು. ಗೋ-ಕುಟೀರದಲ್ಲಿ ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ಗೋವುಗಳಿಗೆ ಸ್ನಾನ ಮಾಡಿಸಿ ಗೋ-ಗ್ರಾಸ ನೀಡಲು ಇಚ್ಛಿಸುವ ಗೋಸೇವಾ ಭಕ್ತರ ಕುಟುಂಬಸ್ಥರಿಗೆ ಗೌರವಪೂರ್ವಕ ಆಹ್ವಾನ ನೀಡಲಾಗಿದೆ.

ಮುಂದಿನ ದಿನಗಳಲ್ಲಿ ಪ್ರತಿಯೊಂದು ಕುಟುಂಬವೂ ಒಂದು ದಿನ ಗೋಮಾತೆಯ ಸೇವೆ ಸಲ್ಲಿಸಿ ಅನುಗ್ರಹ ಪಡೆಯಲು ಹಾಗೂ ತಮ್ಮ ಮನೆಗಳಲ್ಲಿ ನಡೆಯುವ ಶುಭ ಸಮಾರಂಭಗಳ ಸಂದರ್ಭದಲ್ಲಿ ಗೋ-ಕ್ಷೇತ್ರ ಗೋ-ಕುಟೀರಕ್ಕೆ ಆಗಮಿಸಿ ಗೋಸೇವೆಯೊಂದಿಗೆ ಸಂಭ್ರಮ ಹಂಚಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಪ್ರತಿಯೊಬ್ಬರೂ ಕುಟುಂಬ ಸಮೇತರಾಗಿ ಕಾಸರಗೋಡು ಕನ್ನಡ ಗ್ರಾಮಕ್ಕೆ ಆಗಮಿಸಿ ಗೋ-ಗ್ರಾಸ ಅರ್ಪಿಸಿ, ಗೋ-ಆರತಿ ಬೆಳಗಿಸಿ, ಗೋ-ಸಂಕೀರ್ತನೆ ಹಾಡಿ ಗೋ-ಕುಟೀರದಲ್ಲಿ ಪ್ರಾರ್ಥನೆ ಸಲ್ಲಿಸಬಹುದಾಗಿದೆ. ಕಾಮಧೇನು ಸ್ವರೂಪದ ಗೋವಿಗೆ ಗೋಮಾತೆ ಎಂಬ ವಿಶೇಷ ಸ್ಥಾನ ನೀಡಿ ಪೂಜಿಸಲಾಗುತ್ತಿದ್ದು, ಗೋವುಗಳ ಮಹತ್ವ ಮತ್ತು ಸಂರಕ್ಷಣೆ ಕುರಿತು ಜನಜಾಗೃತಿ ಮೂಡಿಸುವ ಕಾರ್ಯಕ್ಕೂ ಆದ್ಯತೆ ನೀಡಲಾಗುವುದು.

ಗೋ-ಕುಟೀರ ನಿರ್ಮಾಣಕ್ಕೆ ಸಹಕರಿಸಿದ ಸಂಘ ಸಂಸ್ಥೆಗಳು, ಸಾರ್ವಜನಿಕರು ಹಾಗೂ ಗೋಸೇವಾ ದಾನಿಗಳ ಹೆಸರಿನಲ್ಲಿ ಅವರ ಕುಟುಂಬದ ಒಳಿತಿಗಾಗಿ ಗೋ-ಗ್ರಾಸ ಅರ್ಪಿಸಿ ಗೋ-ಆರತಿ ಹಾಗೂ ಪ್ರಾರ್ಥನೆ ನೆರವೇರಿಸಲಾಗುವುದು ಎಂದು ತಿಳಿಸಲಾಗಿದೆ.

ಗೋಸೇವೆಯಲ್ಲಿ ಭಾಗವಹಿಸಲು ಅಥವಾ ದೇಣಿಗೆ ನೀಡಲು ಇಚ್ಛಿಸುವವರು

ಶಿವರಾಮ ಕಾಸರಗೋಡು, ಅಧ್ಯಕ್ಷರು,

ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ), ಕನ್ನಡ ಗ್ರಾಮ,

ಕನ್ನಡ ಗ್ರಾಮ ರಸ್ತೆ, ಕಾಸರಗೋಡು – 671121

ಮೊಬೈಲ್: 9448572016

ಗೂಗಲ್ ಪೇ: SHIVARAMA KASARAGOD – 9448572016

ಇವರನ್ನು ಸಂಪರ್ಕಿಸಬಹುದು.

You may also like

News

CODP ಮಂಗಳೂರು ಹಾಗೂ ಕ್ರಾಸ್ ಸಂಸ್ಥೆ ಬೆಂಗಳೂರು ಇವರ ಸಹಯೋಗದಲ್ಲಿ ಸ್ಥಳೀಯ ಆಡಳಿತದಲ್ಲಿ ಮಹಿಳಾ ನಾಯಕತ್ವಕ್ಕೆ ತರಬೇತಿ

ಸ್ಥಳೀಯ ಆಡಳಿತದಲ್ಲಿ ಮಹಿಳೆಯರ ನಾಯಕತ್ವವನ್ನು ಬಲಪಡಿಸುವ ಉದ್ದೇಶದಿಂದ ಸಿಓಡಿಪಿ ಮಂಗಳೂರು ಹಾಗೂ ಕ್ರಾಸ್ ಸಂಸ್ಥೆ, ಬೆಂಗಳೂರು ಇವರ ಸಹಯೋಗದಲ್ಲಿ ಮಹಿಳಾ ಸಬಲೀಕರಣ ಯೋಜನೆಯಡಿ “ಸ್ಥಳೀಯ ಆಡಳಿತದಲ್ಲಿ ನಾಯಕತ್ವ”
News

ಮಿಲಾಗ್ರಿಸ್ ಸೊಸೈಟಿಯಿಂದ ಪಾನೀರ್ ಅನಾಥಾಶ್ರಮದ ವಿದ್ಯಾರ್ಥಿಗಳಿಗೆ ಅಗತ್ಯ ವಸ್ತುಗಳ ನೆರವು

ಆಶ್ರಮಗಳಿಗೆ ಅಗತ್ಯ ವಸ್ತುಗಳನ್ನು ವಿತರಿಸುತ್ತಿರುವುದು ಶ್ಲಾಘನೀಯ – ಜೆ. ಆರ್. ಲೋಬೊ ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ., ಕಾರವಾರ ಇದರ ಉರ್ವಾ ಶಾಖೆಯ ಆಶ್ರಯದಲ್ಲಿ

You cannot copy content of this page