ಬೆಳ್ತಂಗಡಿ ಒಡಿಲ್ನಾಳ ಸುಮಂತ್ ಸಾವು ಪ್ರಕರಣ – ಹತ್ಯೆ ಕಲಂ ಸೇರಿಸಿ ತನಿಖೆ ತೀವ್ರ
ಸುಳ್ಳು ಸುದ್ದಿ ಹಾಗೂ ವದಂತಿಗಳನ್ನು ಹರಡುವವರ ವಿರುದ್ಧ ಕಾನೂನು ಕ್ರಮ – ಜಿಲ್ಲಾ ಎಸ್.ಪಿ.

ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಒಡಿಲ್ನಾಳ ಗ್ರಾಮದ ಸಂಬೋಳ್ಯದಲ್ಲಿ ದಿನಾಂಕ 14-01-2026 ರಂದು ನಡೆದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ, ಈ ಮೊದಲು ಹೊರಡಿಸಲಾಗಿದ್ದ ಪತ್ರಿಕಾ ಪ್ರಕಟಣೆಯಲ್ಲಿ ಮೃತ್ಯುವಿನ ಕಾರಣ ಮುಳುಗು (drowning) ಎಂದು ತಿಳಿಸಲಾಗಿತ್ತು. ಆದರೆ ಮೃತರ ತಲೆಯ ಭಾಗದಲ್ಲಿ ಗಾಯ ಕಂಡುಬಂದ ಹಿನ್ನೆಲೆಯಲ್ಲಿ ಪ್ರಕರಣದ ಬಗ್ಗೆ ಸಂಶಯ ಮೂಡಿದ್ದು, ಸಂಪೂರ್ಣ ಹಾಗೂ ಸಮಗ್ರ ತನಿಖೆ ನಡೆಸುವ ಉದ್ದೇಶದಿಂದ ಇದೀಗ ಪ್ರಕರಣಕ್ಕೆ ಹತ್ಯೆ (murder) ಕಲಂ ಸೇರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವೈದ್ಯಕೀಯ ನ್ಯಾಯವಿಜ್ಞಾನ (Forensic) ಹಾಗೂ ಅಂತಿಮ ಮರಣೋತ್ತರ ಪರೀಕ್ಷೆ (Final PM) ವರದಿ ಇನ್ನೂ ಲಭ್ಯವಾಗಬೇಕಿದ್ದು, ಇದು ಹತ್ಯೆಯೇ ಅಥವಾ ಅಸಹಜ ಮರಣ (UDR)ವೇ ಎಂಬುದರ ಕುರಿತು ಈ ಹಂತದಲ್ಲಿ ಯಾವುದೇ ಅಂತಿಮ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಈ ನಡುವೆ, ಪ್ರಕರಣಕ್ಕೆ ಸಂಬಂಧಿಸಿ ಕೆಲವರು ವಿವಿಧ ಸಿದ್ಧಾಂತಗಳನ್ನು ರೂಪಿಸಿ, ನಿರ್ದಿಷ್ಟ ವ್ಯಕ್ತಿಗಳನ್ನು ಆರೋಪಿಗಳೆಂದು ಉಲ್ಲೇಖಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸಾರ್ವಜನಿಕ ವಲಯದಲ್ಲಿ ಊಹಾಪೋಹಗಳನ್ನು ಹರಡುತ್ತಿರುವುದು ಗಮನಕ್ಕೆ ಬಂದಿದೆ. ವಿಚಾರಣೆಗೊಳಪಡಿಸಲಾದ ಪ್ರತಿಯೊಬ್ಬರೂ ಆರೋಪಿಗಳೇ ಎನ್ನುವುದಿಲ್ಲ ಎಂದು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.

ಪ್ರಕರಣದ ಎಲ್ಲಾ ಅಂಶಗಳನ್ನು ಸಮಗ್ರವಾಗಿ ಪರಿಶೀಲಿಸುವ ನಿಟ್ಟಿನಲ್ಲಿ ನಾಲ್ಕು ವಿಶೇಷ ತನಿಖಾ ತಂಡಗಳನ್ನು ರಚಿಸಲಾಗಿದ್ದು, ಎಲ್ಲಾ ಸಾಧ್ಯತೆಗಳನ್ನೂ ಗಮನದಲ್ಲಿಟ್ಟುಕೊಂಡು ತನಿಖೆ ಮುಂದುವರಿಸಲಾಗುತ್ತಿದೆ. ಇದಲ್ಲದೆ, ಆಗಸ್ಟ್ 2025ರಲ್ಲಿ ದಾಖಲಾಗಿದ್ದ ಮತ್ತೊಂದು ಅಸಹಜ ಮರಣ (UDR) ಪ್ರಕರಣವನ್ನು ಈ ಪ್ರಕರಣದೊಂದಿಗೆ ಸಂಪರ್ಕಿಸಲಾಗಿದೆ ಎಂಬ ವಿಚಾರವೂ ಬೆಳಕಿಗೆ ಬಂದಿದ್ದು, ಆ ಪ್ರಕರಣ ಹತ್ಯೆಯಾಗಿದೆ ಎಂಬುದಕ್ಕೆ ಇದುವರೆಗೆ ಯಾವುದೇ ಸಾಕ್ಷ್ಯ ಲಭ್ಯವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.


ಯಾವುದೇ ಶಂಕಿತರ ಕುರಿತು ಹರಡಲಾಗುತ್ತಿರುವ ವದಂತಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದು ಎಂದು ಪೊಲೀಸರು ಮನವಿ ಮಾಡಿದ್ದು, ಸುಳ್ಳು ಸುದ್ದಿ ಹಾಗೂ ವದಂತಿಗಳನ್ನು ಹರಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ. ಎಚ್ಚರಿಕೆ ನೀಡಿದ್ದಾರೆ.




