ಪಕ್ಷಿಕೆರೆ ಸಂತ ಜೂಡರ ಪುಣ್ಯಕ್ಷೇತ್ರದಲ್ಲಿ ಆಧ್ಯಾತ್ಮಿಕ ಧ್ಯಾನಕೂಟ – ಹರಿದು ಬಂದ ಜನಸಾಗರ
ನಾಳೆ ಫೆಬ್ರವರಿ 8ರಂದು ಸಂಪನ್ನ

ಮಂಗಳೂರಿನ ಶಾಲೋಮ್ ಪ್ರೇಯರ್ ಮಿನಿಸ್ಟ್ರಿ ಸಹಯೋಗ

ಪಕ್ಷಿಕೆರೆ ಇಲ್ಲಿನ ಪ್ರಸಿದ್ಧ ಸಂತ ಜೂಡರ ಚರ್ಚ್ ಹಾಗೂ ಪುಣ್ಯಕ್ಷೇತ್ರದಲ್ಲಿ ಆಯೋಜಿಸಲಾಗಿದ್ದ ಮೂರು ದಿನಗಳ ವಿಶೇಷ ಆಧ್ಯಾತ್ಮಿಕ ಧ್ಯಾನಕೂಟವು ನಾಳೆ ಫೆಬ್ರವರಿ 8ರಂದು ಭಾನುವಾರ ಅತ್ಯಂತ ಭಕ್ತಿಪೂರ್ವಕವಾಗಿ ಮುಕ್ತಾಯಗೊಳ್ಳಲಿದೆ.
ಫೆಬ್ರವರಿ 6ರಿಂದ ಪ್ರಾರಂಭವಾದ ಈ ಧ್ಯಾನಕೂಟವು ಭಾನುವಾರ ಬೆಳಿಗ್ಗೆ 9:00 ಗಂಟೆಯಿಂದ ಮಧ್ಯಾಹ್ನ 1:00 ಗಂಟೆಯವರೆಗೆ ನಡೆಯುವ ವಿಶೇಷ ಪ್ರಾರ್ಥನೆಯೊಂದಿಗೆ ಮಕ್ತಾಯವಾಗಲಿದೆ. ದಶಮಾನೋತ್ಸವದ ಸಂಭ್ರಮದಲ್ಲಿರುವ ಮಂಗಳೂರಿನ ಶಾಲೋಮ್ ಪ್ರೇಯರ್ ಮಿನಿಸ್ಟ್ರಿ ಸಹಯೋಗದೊಂದಿಗೆ, ಸಂತ ಜೂಡರ ಪುಣ್ಯಕ್ಷೇತ್ರದ ವತಿಯಿಂದ ಈ ಧ್ಯಾನಕೂಟವನ್ನು ಆಯೋಜಿಸಲಾಗಿತ್ತು.


ಧ್ಯಾನಕೂಟದ ಪ್ರಮುಖಾಂಶಗಳು:
* ನೇತೃತ್ವ – ಪುಣ್ಯಕ್ಷೇತ್ರದ ಧರ್ಮಗುರುಗಳಾದ ವಂದನೀಯ ಫಾದರ್ ಅನಿಲ್ ಆಲ್ಫ್ರೆಡ್ ಡಿಸೋಜ ಅವರ ನೇತೃತ್ವದಲ್ಲಿ ಧ್ಯಾನಕೂಟ ಪ್ರಾರಂಭವಾಯಿತು.
* ಪ್ರವಚನಕಾರರು – ಅಂತರಾಷ್ಟ್ರೀಯ ಖ್ಯಾತಿಯ ಪ್ರವಚನಕಾರ ವಂದನೀಯ ಡಾ. ಆಗಸ್ಟಿನ್ ವಲ್ಲೂರನ್ ವಿ.ಸಿ. ಅವರು ಮುಖ್ಯ ಪ್ರವಚನ ನೀಡುತ್ತಿದ್ದಾರೆ. ಅವರ ತಂಡದ ಸದಸ್ಯರಾದ ಗ್ಲೆನ್ ಲಾರೆನ್ಸ್, ತೆರೇಸಾ ಲಾರೆನ್ಸ್, ಮರಿಯಾ ಸಂಗೀತ, ಡಾ. ದೀಪು ಹರಿಹರ್ ಮತ್ತು ಮನಿಷಾ ಮಥಾಯಸ್ ಅವರು ಧ್ಯಾನ ನಡೆಸಿಕೊಡುತ್ತಿದ್ದಾರೆ.
* ದೈವ ಸಂದೇಶ – “ದೇವರು ಎಂದರೆ ದಯೆ ತೋರಿಸಿ ಪ್ರೀತಿಸುವ ವ್ಯಕ್ತಿತ್ವ” ಎಂಬ ವಿಷಯದ ಮೇಲೆ ಬೆಳಕು ಚೆಲ್ಲಿದ ವಂದನೀಯ ಡಾ. ಆಗಸ್ಟಿನ್ ವಲ್ಲೂರನ್ ಅವರು, “ಸಾಮಾನ್ಯವಾಗಿ ತಪ್ಪು ಮಾಡಿದವರಿಗೆ ಶಿಕ್ಷೆ ನೀಡುವುದು ಜಗದ ನಿಯಮ, ಆದರೆ ದೇವರು ತಪ್ಪು ಮಾಡಿದವರನ್ನೇ ಹುಡುಕಿ ಪ್ರೀತಿಯಿಂದ ಅಪ್ಪಿಕೊಳ್ಳುವ ದಯಾಮಯಿ” ಎಂದು ಮಾರ್ಮಿಕವಾಗಿ ನುಡಿದರು.


ಗಣ್ಯರ ಉಪಸ್ಥಿತಿ:
ಧ್ಯಾನಕೂಟದಲ್ಲಿ ಶಾಲೋಮ್ ಪ್ರೇಯರ್ ಮಿನಿಸ್ಟ್ರಿಯ ಸ್ಥಾಪಕರಾದ ಎಂ.ಪಿ. ನೊರೊನ್ಹಾ ಅವರು ಆಗಮಿಸಿದವರನ್ನು ಸ್ವಾಗತಿಸಿದರು. ಮುಕ್ಕದ ಹೊಲಿ ಸ್ಪಿರಿಟ್ ಚರ್ಚ್ ಧರ್ಮಗುರುಗಳಾದ ವಂದನೀಯ ಫಾದರ್ ಸ್ಟ್ಯಾನಿ ಪಿಂಟೊ ಅವರು ಬಲಿಪೂಜೆಯನ್ನು ಅರ್ಪಿಸಿದರು. ಈ ಸಂದರ್ಭದಲ್ಲಿ ಹಲವಾರು ಧರ್ಮಗುರುಗಳು, ಧರ್ಮಭಗಿನಿಯರು ಹಾಗೂ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡು ದೈವಾನುಗ್ರಹಕ್ಕೆ ಪಾತ್ರರಾದರು. ನಾಳೆ ಕೊನೆಯ ದಿನ ನಡೆಯುವ ಧ್ಯಾನಕೂಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಭಾಗವಹಿಸಲು ಅವಕಾಶ ಕಲ್ಪಿಸಿಕೊಡಲಾಗಿದೆ ಎಂದು ಆಯೋಜಕರಾದ ಶಾಲೋಮ್ ಪ್ರೇಯರ್ ಮಿನಿಸ್ಟ್ರಿಯ ಮುಖ್ಯಸ್ಥರು ತಿಳಿಸಿದ್ದಾರೆ.








