July 11, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಗುರುವಾಯನಕೆರೆ ವಿದ್ವತ್ ಪಿಯು ಕಾಲೇಜಿನಲ್ಲಿ ಉಚಿತ ವೃತ್ತಿ ಮಾರ್ಗದರ್ಶನ ಕೇಂದ್ರ ಲೋಕಾರ್ಪಣೆ – ‘ಪದ್ಮಶ್ರೀ’ ಹರೇಕಳ ಹಾಜಬ್ಬಗೆ ಗೌರವ

ಸಮಾಜಮುಖಿ ಶಿಕ್ಷಣ ಸಂಸ್ಥೆ ವಿದ್ವತ್ – ಪಿ.ಬಿ. ಹರೀಶ್ ರೈ

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಶೈಕ್ಷಣಿಕ ಕ್ಷೇತ್ರದಲ್ಲಿ ಹೊಸ ಆಯಾಮ ಸೃಷ್ಟಿಸುತ್ತಿರುವ ಗುರುವಾಯನಕೆರೆಯ ವಿದ್ವತ್ ಪಿಯು ಕಾಲೇಜಿನಲ್ಲಿ, ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಸಲುವಾಗಿ ‘Walk-in to VIDVATH’ ಉಚಿತ ಶೈಕ್ಷಣಿಕ ಸಮಾಲೋಚನೆ ಮತ್ತು ವೃತ್ತಿ ಮಾರ್ಗದರ್ಶನ ಕಾರ್ಯಕ್ರಮಕ್ಕೆ ಅದ್ಧೂರಿ ಚಾಲನೆ ನೀಡಲಾಯಿತು.

ಸಮಾಜಮುಖಿ ಶಿಕ್ಷಣ ಸಂಸ್ಥೆ ವಿದ್ವತ್: ಪಿ.ಬಿ. ಹರೀಶ್ ರೈ

ಕಾರ್ಯಕ್ರಮವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ, “ವಿದ್ಯಾರ್ಥಿಗಳಿಗೆ ಲಭ್ಯವಿರುವ 54ಕ್ಕೂ ಅಧಿಕ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಜಿಲ್ಲೆಯಲ್ಲೇ ಮೊದಲ ಬಾರಿಗೆ ಉಚಿತವಾಗಿ ಮಾರ್ಗದರ್ಶನ ನೀಡಲು ಮುಂದಾಗಿರುವ ವಿದ್ವತ್ ಸಂಸ್ಥೆಯ ನಡೆ ಶ್ಲಾಘನೀಯ. ಬರುವ ಹತ್ತು ವರ್ಷಗಳಲ್ಲಿ ಇದು ರಾಜ್ಯದ ಅತ್ಯುತ್ತಮ ಸಂಸ್ಥೆಯಾಗಿ ಬೆಳೆಯಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಲಿತ ಸಂಸ್ಥೆಗೆ ಕೀರ್ತಿ ತನ್ನಿ – ಪದ್ಮಶ್ರೀ ಹರೇಕಳ ಹಾಜಬ್ಬ

ಮಾರ್ಗದರ್ಶನ ಕೇಂದ್ರದ ನಾಮಫಲಕ ಅನಾವರಣಗೊಳಿಸಿದ ಅಕ್ಷರ ಸಂತ, ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ, “ನಾನು ಶಿಕ್ಷಣದಿಂದ ವಂಚಿತನಾಗಿ ಪಟ್ಟ ಕಷ್ಟ ಬೇರೆಯವರು ಪಡಬಾರದು ಎಂಬ ಕಾರಣಕ್ಕೆ ಶಾಲೆ ಕಟ್ಟಿದೆ. ವಿದ್ಯಾರ್ಥಿಗಳು ತಮಗೆ ವಿದ್ಯೆ ನೀಡಿದ ಸಂಸ್ಥೆ ಮತ್ತು ಗುರುಗಳಿಗೆ ಸದಾ ಗೌರವ ಸಲ್ಲಿಸಿ, ಸಂಸ್ಥೆಗೆ ಕೀರ್ತಿ ತರಬೇಕು” ಎಂದು ಭಾವುಕರಾಗಿ ಕರೆ ನೀಡಿದರು.

ಪ್ರಮುಖಾಂಶಗಳು:

* ಪ್ರಯೋಗಾಲಯಗಳ ಉದ್ಘಾಟನೆ: ಕಾಲೇಜಿನ ಸುಸಜ್ಜಿತ ಭೌತಶಾಸ್ತ್ರ ಪ್ರಯೋಗಾಲಯವನ್ನು ಬೆಳ್ತಂಗಡಿ ದರ್ಮಕ್ಷೇತ್ರದ ಶ್ರೇಷ್ಠ ಗುರು ಅತೀ ವಂದನೀಯ ಫಾದರ್ ಜೋಸೆಫ್ ವಲಿಯಪರಂಬಿಲ್, ರಸಾಯನಶಾಸ್ತ್ರ ಪ್ರಯೋಗಾಲಯವನ್ನು ತಹಶೀಲ್ದಾರ್ ಪೃಥ್ವಿ ಸಾನಿಕಮ್ ಹಾಗೂ ಜೀವಶಾಸ್ತ್ರ ಪ್ರಯೋಗಾಲಯವನ್ನು ಭಾರತಿ ಶೆಟ್ಟಿ ಉದ್ಘಾಟಿಸಿದರು.

* ಸನ್ಮಾನ: ಶಿಕ್ಷಣ ಕ್ಷೇತ್ರದಲ್ಲಿನ ಅಪೂರ್ವ ಸಾಧನೆಗಾಗಿ ಪದ್ಮಶ್ರೀ ಹರೇಕಳ ಹಾಜಬ್ಬ ಹಾಗೂ ಹಿರಿಯ ಪತ್ರಕರ್ತ ಪಿ.ಬಿ. ಹರೀಶ್ ರೈ ಅವರನ್ನು ಕಾಲೇಜಿನ ವತಿಯಿಂದ ವಿಶೇಷವಾಗಿ ಸನ್ಮಾನಿಸಲಾಯಿತು.

* ದೂರದೃಷ್ಟಿ: ಸಂಸ್ಥೆಯ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಮಾತನಾಡಿ, ಪೋಷಕರಲ್ಲಿರುವ ಗೊಂದಲ ನಿವಾರಿಸಿ ವಿದ್ಯಾರ್ಥಿಗಳ ವಿವೇಚನೆಗೆ ಪೂರಕ ಮಾಹಿತಿ ನೀಡುವುದು ಈ ಕೇಂದ್ರದ ಮುಖ್ಯ ಉದ್ದೇಶ ಎಂದರು.

ಪ್ರತಿಭಾವಂತರಿಗೆ ಬಂಪರ್ ಕೊಡುಗೆ: ಲ್ಯಾಪ್ಟಾಪ್ ಮತ್ತು ಟ್ಯಾಬ್

ವಿದ್ವತ್ ಎಜುಕೇಶನ್ ಫೌಂಡೇಶನ್ ವತಿಯಿಂದ ರಾಜ್ಯಾದ್ಯಂತ 10ನೇ ತರಗತಿ ವಿದ್ಯಾರ್ಥಿಗಳಿಗಾಗಿ “ಪ್ರತಿಭಾ ಪರೀಕ್ಷೆ” ಹಮ್ಮಿಕೊಳ್ಳಲಾಗಿದೆ. ಈ ಪರೀಕ್ಷೆಯಲ್ಲಿ:

* ಪ್ರಥಮ ಸ್ಥಾನ ಪಡೆಯುವ ವಿದ್ಯಾರ್ಥಿಗೆ ‘ಲ್ಯಾಪ್ಟಾಪ್’ ಬಹುಮಾನ.

* ಅಗ್ರ 10 ವಿದ್ಯಾರ್ಥಿಗಳಿಗೆ ‘ಟ್ಯಾಬ್’ ವಿತರಣೆ.

* ಭಾಗವಹಿಸುವ ಎಲ್ಲಾ ವಿದ್ಯಾರ್ಥಿಗಳಿಗೂ ಅಂಕಗಳ ಆಧಾರದ ಮೇಲೆ ಕಾಲೇಜು ಶುಲ್ಕದಲ್ಲಿ ವಿಶೇಷ ರಿಯಾಯಿತಿ ನೀಡಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷರು ಪ್ರಕಟಿಸಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಪ್ರಜ್ವಲ್ ರೈ, ಟ್ರಸ್ಟಿಗಳು ಮತ್ತು ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು. ಪ್ರಾಂಶುಪಾಲ ಹರೀಶ್ ಕೆ.ಆರ್. ವಂದಿಸಿದರು, ಬಾಲಕೃಷ್ಣ ಪೊರ್ದಾಲ್ ಕಾರ್ಯಕ್ರಮ ನಿರೂಪಿಸಿದರು.

You may also like

News

Father Muller Principal Wins Prestigious Global Young Investigator Award at MASCC/ISOO Congress in Australia

In a moment of immense pride for the nation and the physiotherapy fraternity, Prof. Cherishma Dsilva, Principal of Father Muller
News

ಮಂಗಳೂರಿನ ಸಂದೇಶ ಫೌಂಡೇಶನ್‌ನಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿಯ ಹೊಸ ಅಧ್ಯಾಯ

‘Mangalore IAS – A School for Civil Services’ಗೆ ಚಾಲನೆ ನೀಡಿದ ಬಳ್ಳಾರಿ ಧರ್ಮಕ್ಷೇತ್ರದ ಬಿಷಪ್ ಹೆನ್ರಿ ಡಿಸೋಜ ನಾಗರಿಕ ಸೇವೆಗಳ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗೆ

You cannot copy content of this page