July 11, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಕಾಸರಗೋಡು ನಗರಸಭೆಯ 9ನೇ ವಾರ್ಡ್ ಸಭೆ ಯಶಸ್ವಿ

ಮಾದರಿ ನಗರಸಭೆ ನಿರ್ಮಾಣಕ್ಕೆ ನಗರಸಭಾ ಅಧ್ಯಕ್ಷೆ ಶಾಹಿನಾ ಸಲೀಂ ಸಂಕಲ್ಪ

ಕಾಸರಗೋಡು ನಗರಸಭೆಯ 2026–27ನೇ ವಾರ್ಷಿಕ ಯೋಜನೆ ರೂಪಿಕರಣದ ಅಂಗವಾಗಿ 9ನೇ ವಾರ್ಡ್‌ನ ನುಳ್ಳಿಪಾಡಿ (ಅಣಂಗೂರು, ಜೆ.ಪಿ. ನಗರ, ಕನ್ನಡ ಗ್ರಾಮ) ಪ್ರದೇಶದ ವಾರ್ಡ್ ಸಭೆ ಫೆಬ್ರವರಿ 9ರಂದು ಸೋಮವಾರ ಕನ್ನಡ ಗ್ರಾಮದಲ್ಲಿ ಯಶಸ್ವಿಯಾಗಿ ನಡೆಯಿತು.

ಸಭೆಯನ್ನು ನಗರಸಭಾ ಅಧ್ಯಕ್ಷೆ ಶಾಹಿನಾ ಸಲೀಂ ಉದ್ಘಾಟಿಸಿದರು. ಕಾಸರಗೋಡು ನಗರಸಭೆಯನ್ನು ರಾಜ್ಯದಲ್ಲೇ ಮಾದರಿ ನಗರಸಭೆಯನ್ನಾಗಿ ರೂಪಿಸಲು ಜನರ ಸಹಕಾರ ಅಗತ್ಯವಿದೆ ಎಂದು ಅವರು ತಿಳಿಸಿದರು. ಎಲ್ಲಾ ವಾರ್ಡ್‌ಗಳಲ್ಲಿ ಸಭೆಗಳನ್ನು ನೇರವಾಗಿ ಭೇಟಿ ಮಾಡಿ, ಸದಸ್ಯರ ಸಲಹೆ–ಸೂಚನೆ ಹಾಗೂ ಅಭಿಪ್ರಾಯಗಳನ್ನು ಸಂಗ್ರಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು. ಭಾಷಾ ಸಮನ್ವಯ ಪ್ರದೇಶವಾದ ಕಾಸರಗೋಡಿನಲ್ಲಿ ನಗರಸಭೆಯ ಪ್ರಕಟಣೆಗಳನ್ನು ಕನ್ನಡದಲ್ಲೂ ಮುದ್ರಿಸಲಾಗುವುದು ಎಂದು ಭರವಸೆ ನೀಡಿದರು. ಕನ್ನಡ ಗ್ರಾಮದಲ್ಲಿ ಪ್ರಥಮ ವಾರ್ಡ್ ಸಭೆಯನ್ನು ಉತ್ತಮವಾಗಿ ಸಂಘಟಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.

9ನೇ ವಾರ್ಡ್ ಕೌನ್ಸಿಲರ್ ಶಾರದಾ ದಯಾನಂದ ಜೆ.ಪಿ. ನಗರ ಅವರು ಸಭೆಗೆ ಅಧ್ಯಕ್ಷತೆ ವಹಿಸಿದರು. ನಗರಸಭೆಯ ಆರೋಗ್ಯ ಕ್ಷೇಮ ಸ್ಥಾಯಿ ಸಮಿತಿ ಅಧ್ಯಕ್ಷೆ ಮೆಹರುನ್ನೀಸಾ ಹಮೀದ್ ಅವರು 2026–27ನೇ ವಾರ್ಷಿಕ ಯೋಜನೆಯಡಿ ಅನುಷ್ಠಾನಗೊಳ್ಳಲಿರುವ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಪ್ರಸ್ತಾಪಿಸಿದರು. ವಾರ್ಡ್ ಸದಸ್ಯರು ಮುಂದಿಟ್ಟ ಹಲವು ಬೇಡಿಕೆಗಳನ್ನು ಸಭೆಯಲ್ಲಿ ದಾಖಲಿಸಲಾಯಿತು.

ಮುಖ್ಯ ಅತಿಥಿಗಳಾಗಿ ಮಾಜಿ ಕೌನ್ಸಿಲರ್ ಶಂಕರ ಜೆ.ಪಿ. ನಗರ ಹಾಗೂ ಕಾಸರಗೋಡು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ಉಪಸ್ಥಿತರಿದ್ದರು. ಶಿವರಾಮ ಕಾಸರಗೋಡು ಅವರು ಕನ್ನಡ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಗೋಕುಟೀರ ಯೋಜನೆ ಕುರಿತು ಮಾಹಿತಿ ನೀಡಿದರು. ಗೋಕುಟೀರ ಆವರಣದಲ್ಲಿ ಸಾವಯವ ಕೃಷಿ, ಗ್ರಾಮೀಣ ಸ್ವಉದ್ಯೋಗ ಕೇಂದ್ರ, ವಿದ್ಯಾರ್ಥಿಗಳು–ಯುವಜನರು–ಮಹಿಳೆಯರಿಗಾಗಿ ಹೊಲಿಗೆ ತರಬೇತಿ ಕೇಂದ್ರ, ವಸ್ತ್ರ ವಿನ್ಯಾಸ ಹಾಗೂ ಕಂಪ್ಯೂಟರ್–ಡಿಜಿಟಲ್ ಮಾಧ್ಯಮ ಕೇಂದ್ರ, ಗ್ರಂಥಾಲಯ ಮತ್ತು ಹಿರಿಯ ನಾಗರಿಕರಿಗಾಗಿ ಗ್ರಾಮೀಣ ಕ್ಲಿನಿಕ್ ಸ್ಥಾಪನೆ ಮಾಡುವ ಕಾರ್ಯಯೋಜನೆಗಳನ್ನು ಪ್ರಸ್ತಾಪಿಸಿದರು.

ಸಭೆಯಲ್ಲಿ 2025–26ನೇ ವಾರ್ಷಿಕ ಯೋಜನೆ ಅವಲೋಕನ, 2026–27ನೇ ವಾರ್ಷಿಕ ಯೋಜನೆ ರೂಪಿಕರಣ, 2026–27ನೇ ಸಾಲಿನ ಅಯ್ಯಂಗಾಳಿ ನಗರ ಉದ್ಯೋಗ ಖಾತರಿ ಯೋಜನೆ ಆಕ್ಷನ್ ಪ್ಲಾನ್ ಅಂಗೀಕಾರ, ಮಾನಿಟರಿಂಗ್ ಸಮಿತಿ ಹಾಗೂ ಸೋಶಿಯಲ್ ಆಡಿಟ್ ತಂಡದ ಸದಸ್ಯರ ಆಯ್ಕೆ ಪ್ರಕ್ರಿಯೆಗಳ ಮಾಹಿತಿಯನ್ನು ಸಭೆಯ ಮುಂದಿರಿಸಲಾಯಿತು.

ಸುಚಿತ್ರಾ ಸ್ವಾಗತಿಸಿ, ಶಾಂತಾ ಧನ್ಯವಾದ ಸಲ್ಲಿಸಿದರು. ನೂರಾರು ಸಂಖ್ಯೆಯಲ್ಲಿ ವಾರ್ಡ್ ಸದಸ್ಯರು ಸಕ್ರಿಯವಾಗಿ ಭಾಗವಹಿಸಿ ಸಭೆಯನ್ನು ಯಶಸ್ವಿಗೊಳಿಸಿದರು.

You may also like

News

Father Muller Principal Wins Prestigious Global Young Investigator Award at MASCC/ISOO Congress in Australia

In a moment of immense pride for the nation and the physiotherapy fraternity, Prof. Cherishma Dsilva, Principal of Father Muller
News

ಮಂಗಳೂರಿನ ಸಂದೇಶ ಫೌಂಡೇಶನ್‌ನಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿಯ ಹೊಸ ಅಧ್ಯಾಯ

‘Mangalore IAS – A School for Civil Services’ಗೆ ಚಾಲನೆ ನೀಡಿದ ಬಳ್ಳಾರಿ ಧರ್ಮಕ್ಷೇತ್ರದ ಬಿಷಪ್ ಹೆನ್ರಿ ಡಿಸೋಜ ನಾಗರಿಕ ಸೇವೆಗಳ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗೆ

You cannot copy content of this page