ಅಂತಾರಾಜ್ಯ ಮಾದಕವಸ್ತು ಮಾರಾಟ ಜಾಲ ಪತ್ತೆ – ಕೇರಳ ಮೂಲದ ಮೂವರು ಕಿಲಾಡಿಗಳ ಬಂಧನ
ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿ, ಭಾರಿ ಪ್ರಮಾಣದ ಎಂಡಿಎಂಎ (MDMA) ಮಾದಕವಸ್ತು ಸಾಗಾಟ ಮಾಡುತ್ತಿದ್ದ ಅಂತಾರಾಜ್ಯ ಜಾಲದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಮಾದಕ ದ್ರವ್ಯ ಹಾಗೂ ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.



ಬಂಧಿತ ಆರೋಪಿಗಳು:
* ಮುಹಮ್ಮದ್ ಅಜ್ಮಲ್ ಸಿ. @ ಅಜ್ಜು (30), ಕೋಝಿಕೋಡ್, ಕೇರಳ.
* ಇಸ್ಮಾಯಿಲ್ (28), ವಯನಾಡ್, ಕೇರಳ.
* ಸಂಶೀರ್ (27), ಕೊಝಿಕೋಡ್, ಕೇರಳ.

ಘಟನೆಯ ವಿವರ:
ದಿನಾಂಕ 18-02-2026 ರಂದು ಆರೋಪಿಗಳು ಪುತ್ತೂರು ಕಡೆಯಿಂದ ಸುಳ್ಯಕ್ಕೆ ಕಾರಿನಲ್ಲಿ ಅಕ್ರಮವಾಗಿ ಮಾದಕವಸ್ತು ಸಾಗಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಪೊಲೀಸರು ವಾಹನ ತಡೆದು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಸುಮಾರು 5,38,800 ರೂಪಾಯಿ ಮೌಲ್ಯದ 53.58 ಗ್ರಾಂ ಎಂಡಿಎಂಎ ಪತ್ತೆಯಾಗಿದೆ.
ಆರೋಪಿಗಳ ವಶದಿಂದ ಒಂದು ಕಾರು, ಮಾರಕಾಸ್ತ್ರ (ತಲವಾರು), ಮೊಬೈಲ್ ಫೋನ್ಗಳು ಹಾಗೂ 10,000 ರೂಪಾಯಿ ನಗದನ್ನು ಜಪ್ತಿ ಮಾಡಲಾಗಿದೆ. ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಎನ್ಡಿಪಿಎಸ್ (NDPS) ಕಾಯ್ದೆ ಹಾಗೂ ಆರ್ಮ್ಸ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಅಂತಾರಾಜ್ಯ ಜಾಲದ ನಂಟು:
ಬಂಧಿತರು ಕೇರಳ, ಗೋವಾ ಮತ್ತು ಕರ್ನಾಟಕದ ವಿವಿಧ ಭಾಗಗಳಿಗೆ ಮಾದಕವಸ್ತು ಪೂರೈಸುವ ಜಾಲ ಹೊಂದಿದ್ದಾರೆ. ಇವರ ವಿರುದ್ಧ ಕೇರಳದ ಕೋಝಿಕೋಡ್, ಕಣ್ಣೂರು ಮತ್ತು ವಯನಾಡ್ ಜಿಲ್ಲೆಗಳಲ್ಲಿ ಈಗಾಗಲೇ ಪ್ರಕರಣಗಳು ದಾಖಲಾಗಿದ್ದು, ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ತಲೆಮರೆಸಿಕೊಂಡಿದ್ದರು. ಮುಖ್ಯ ಆರೋಪಿ ಮುಹಮ್ಮದ್ ಅಜ್ಮಲ್ ಈ ಹಿಂದೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದ್ದ ಮತ್ತೊಂದು ಡ್ರಗ್ಸ್ ಪ್ರಕರಣದಲ್ಲೂ ಆರೋಪಿಯಾಗಿದ್ದಾನೆ.


ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ತಂಡ:
ಪುತ್ತೂರು ಉಪ ವಿಭಾಗದ ಡಿವೈಎಸ್ಪಿ ಪ್ರಮೋದ್ ಕುಮಾರ್, ಇನ್ಸ್ಪೆಕ್ಟರ್ಗಳಾದ ಸುನಿಲ್ ಕುಮಾರ್ ಮತ್ತು ನಂದ ಕುಮಾರ್, ಉಪನಿರೀಕ್ಷಕರಾದ ಗುಣಪಾಲ ಮತ್ತು ಸುಶ್ಮಾ ಜೆ. ಭಂಡಾರಿ ಅವರ ನೇತೃತ್ವದ ವಿಶೇಷ ತಂಡ ಈ ಯಶಸ್ವಿ ಕಾರ್ಯಾಚರಣೆ ನಡೆಸಿದೆ. ತಂಡದಲ್ಲಿ ಸಿಬ್ಬಂದಿಗಳಾದ ಅದ್ರಾಮ, ಪ್ರಶಾಂತ್ ರೈ, ಪ್ರವೀಣ್ ರೈ, ಹರ್ಷಿತ್, ಪರಮೇಶ್ವರ ಗೌಡ ಸೇರಿದಂತೆ ಗಣಕಯಂತ್ರ ವಿಭಾಗದ ಸಿಬ್ಬಂದಿಗಳು ಸಹಕರಿಸಿದ್ದಾರೆ.




