ನಾರಾವಿ ಶ್ರೀ ಸೂರ್ಯನಾರಾಯಣ ದೇವಸ್ಥಾನದಲ್ಲಿ ಫೆಬ್ರವರಿ 28ರಿಂದ ಅಷ್ಟಬಂಧ ಬ್ರಹ್ಮಕಲಶೋತ್ಸವ ಸಂಭ್ರಮ
ಬೆಳ್ತಂಗಡಿ ತಾಲೂಕಿನ ಐತಿಹಾಸಿಕ ಪ್ರಸಿದ್ಧ ನಾರಾವಿ ಶ್ರೀ ಸೂರ್ಯನಾರಾಯಣ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ವರ್ಷಾವಧಿ ಜಾತ್ರಾ ಮಹೋತ್ಸವವು ಫೆಬ್ರವರಿ 28 ರಿಂದ ಮಾರ್ಚ್ 9ರ ತನಕ ಅತ್ಯಂತ ವೈಭವದಿಂದ ನಡೆಯಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ರಕ್ಷಿತ್ ಶಿವರಾಂ ತಿಳಿಸಿದ್ದಾರೆ. ದೇವಸ್ಥಾನದ ಆವರಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ರಹ್ಮಶ್ರೀ ಎಡಪದವು ರಾಧಾಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ಹತ್ತು ದಿನಗಳ ಕಾಲ ವಿವಿಧ ವೈದಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮಗಳ ವಿವರ ಇಂತಿದೆ:
* ಫೆಬ್ರವರಿ 28: ಬೆಳಿಗ್ಗೆ 9:30ಕ್ಕೆ ಕ್ಷಮಾಯಾಚನ ಪ್ರಾರ್ಥನೆ ಮತ್ತು ಮುಷ್ಟಿ ಕಾಣಿಕೆ ಸೇವೆ. ಸಂಜೆ 5:30ಕ್ಕೆ ಅಘೋರ ಹೋಮ.
* ಮಾರ್ಚ್ 1: ಸಂಜೆ 3ಕ್ಕೆ ಅರಸುಕಟ್ಟೆಯಿಂದ ಭವ್ಯ ‘ಹಸಿರುವಾಣಿ ಹೊರೆಕಾಣಿಕೆ’ ಶೋಭಾಯಾತ್ರೆ. ಸಂಜೆ 5ಕ್ಕೆ ಸೂರ್ಯ ವಂದನಾ ಭಜನೋತ್ಸವ. ಅಳದಂಗಡಿ ಅರಮನೆಯ ಡಾ. ಪದ್ಮಪ್ರಸಾದ ಆಜಿಲರಿಂದ ಧಾರ್ಮಿಕ ಸಭೆ ಉದ್ಘಾಟನೆ.

* ಮಾರ್ಚ್ 2 ರಿಂದ 5: ಪ್ರತಿದಿನ ವಿವಿಧ ಮಠಾಧಿಪತಿಗಳಾದ ಶ್ರೀ ವಿಖ್ಯಾತನಂದ ಸ್ವಾಮೀಜಿ (ಸೋಲೂರು ಮಠ), ಡಾ. ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ (ಮೂಡಬಿದಿರೆ), ಕಾಳಹಸ್ತೇಂದ್ರ ಸರಸ್ವತೀ ಸ್ವಾಮೀಜಿ (ಆನೆಗುಂದಿ), ವಿದ್ಯಾ ಪ್ರಸನ್ನತೀರ್ಥ ಶ್ರೀಪಾದರು (ಸುಬ್ರಮಣ್ಯ) ಮತ್ತು ಮೋಹನದಾಸ ಪರಮಹಂಸ ಸ್ವಾಮೀಜಿ (ಮಾಣಿಲ) ಅವರಿಂದ ಆಶೀರ್ವಚನ ನಡೆಯಲಿದೆ.
* ಮಾರ್ಚ್ 6 (ಪ್ರಮುಖ ದಿನ): ಬೆಳಿಗ್ಗೆ 10:44ಕ್ಕೆ ಬ್ರಹ್ಮಕಲಶಾಭಿಷೇಕ ಮತ್ತು ಪ್ರಸನ್ನ ಪೂಜೆ. ಸಂಜೆ ನಡೆಯುವ ಧಾರ್ಮಿಕ ಸಭೆಯಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಆಶೀರ್ವಚನ ನೀಡಲಿದ್ದಾರೆ.
* ಮಾರ್ಚ್ 8: ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ.
* ದೈವದ ನೇಮೋತ್ಸವ: ಮಾರ್ಚ್ 9ರಂದು ಕೊಡಮಣಿತ್ತಾಯ ದೈವದ ನೇಮ ಮತ್ತು ಮಾರ್ಚ್ 10ರಂದು ಮೂಜಿಲ್ನಾಯ ಬೊಮ್ಮರ್ದಾಯ ಪಿಲ್ಚಂಡಿ ದೈವಗಳಿಗೆ ಬಲಿನೇಮ ನಡೆಯಲಿದೆ.

ಸಾಂಸ್ಕೃತಿಕ ಮೆರುಗು:
ಕಾರ್ಯಕ್ರಮದ ಅಂಗವಾಗಿ ಪ್ರತಿದಿನ ಸಂಜೆ ಸಂಗೀತ ನೃತ್ಯ ವೈಭವ, ದಾಸರ ಪದಗಳ ಗಾಯನ, ಯೋಗಾಸನ ನೃತ್ಯ, ಭರತನಾಟ್ಯ, ಯಕ್ಷಗಾನ, ಜಾನಪದ ನೃತ್ಯ ಹಾಗೂ ದೇವದಾಸ್ ಕಾಪಿಕಾಡ್ ತಂಡದಿಂದ ‘ಪುದರ್ ದೀತಿಜಿ’ ತುಳು ಹಾಸ್ಯ ನಾಟಕ ಸೇರಿದಂತೆ ವಿವಿಧ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರ ರವೀಂದ್ರ ಪೂಜಾರಿ ಬಾಂದೊಟ್ಟು, ಪ್ರಧಾನ ಅರ್ಚಕ ಕೃಷ್ಣತಂತ್ರಿ, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ವಿನಯ ಹೆಗ್ಡೆ, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಗುರುವಾಯನಕೆರೆ ಇದರ ಯೋಜನಾಧಿಕಾರಿ ಅಶೋಕ್ ಬಿ., ಕಾರ್ಯಾಧ್ಯಕ್ಷರಾದ ಮಹಾವೀರ ಜೈನ್, ಜಗದೀಶ್ ಅಂಚನ್, ವ್ಯವಸ್ಥಾಪನ ಸಮಿತಿ ಸದಸ್ಯರಾದ ಎನ್. ದಿವಾಕರ ಭಂಡಾರಿ, ಜಗದೀಶ್ ಹೆಗ್ಡೆ, ರಶ್ಮಿ, ಶಂಕರ್ ತುಂಬೆಗುಡ್ಡೆ, ಯಶೋಧ ಹಾಗೂ ವಿವಿಧ ಉಪ ಸಮಿತಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.




