ಚಿನ್ನದ ನಕಲಿ ಪಾಲೀಶ್ ದಂಧೆ – ವೇಣೂರು ಪೊಲೀಸರ ಭರ್ಜರಿ ಕಾರ್ಯಾಚರಣೆ, ಬಿಹಾರ ಮೂಲದ ಆರೋಪಿ ಅರೆಸ್ಟ್
ಚಿನ್ನದ ಒಡವೆಗಳನ್ನು ಪಾಲೀಶ್ ಮಾಡಿಕೊಡುವುದಾಗಿ ನಂಬಿಸಿ, ಸಾರ್ವಜನಿಕರನ್ನು ವಂಚಿಸುತ್ತಿದ್ದ ಅಂತರಾಜ್ಯ ಆರೋಪಿಯೊಬ್ಬನನ್ನು ವೇಣೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಿಹಾರದ ಸುಫೋಲ್ ಜಿಲ್ಲೆಯ ನಿವಾಸಿ 30 ವರ್ಷ ಪ್ರಾಯದ ಚಂದನ್ ಕುಮಾರ್ ಬಂಧಿತ ಆರೋಪಿ.


ಘಟನೆಯ ವಿವರ:
ಕಳೆದ ಫೆಬ್ರವರಿ 10ರಂದು ಬೆಳ್ತಂಗಡಿ ತಾಲೂಕಿನ ಕಾಶಿಪಟ್ಣ ಗ್ರಾಮದ ಪಣಿಲಾಜೆ ಎಂಬಲ್ಲಿ ಈ ಘಟನೆ ನಡೆದಿತ್ತು. ಆರೋಪಿಯು ಸೇಲ್ಸ್ಮ್ಯಾನ್ ಸೋಗಿನಲ್ಲಿ ಮನೆಗೆ ಬಂದು, ಹಳೆಯ ಚಿನ್ನದ ಒಡವೆಗಳನ್ನು ದ್ರಾವಣ ಬಳಸಿ ತೊಳೆದು ಹೊಸದರಂತೆ ಮಿನುಗುವಂತೆ ಮಾಡಿಕೊಡುವುದಾಗಿ ನಂಬಿಸಿದ್ದಾನೆ. ಇದನ್ನು ನಂಬಿದ ಮನೆಯವರು ನೀಡಿದ ಚಿನ್ನವನ್ನು ಯಾವುದೋ ರಾಸಾಯನಿಕ ದ್ರಾವಣದಲ್ಲಿ ಹಾಕಿ ತೊಳೆದಂತೆ ನಟಿಸಿ, ಅಸಲಿ ಚಿನ್ನದ ಪದರವನ್ನು ಕರಗಿಸಿ ವಂಚಿಸಿದ್ದಾನೆ.
ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ (ಅ.ಕ್ರ: 13/2026, ಬಿ.ಎನ್. ಎಸ್. 2023 ಕಲಂ 318(4)) ದಾಖಲಾಗಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿ ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನಿಂದ ಅಂದಾಜು 75,000/- ರೂಪಾಯಿ ಮೌಲ್ಯದ 7 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ.


ಪೊಲೀಸ್ ತಂಡದ ಕಾರ್ಯಾಚರಣೆ:
ವೇಣೂರು ಪೊಲೀಸ್ ಉಪನಿರೀಕ್ಷಕರಾದ ಅಕ್ಷಯ್ ಡವಗಿ ಮತ್ತು ಓಮನ ಎನ್. ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಎ.ಎಸ್.ಐ.ಗಳಾದ ವೆಂಕಟೇಶ್ ನಾಯ್ಕ ಹಾಗೂ ಬೆನ್ನಿಚ್ಚನ್, ಹೆಚ್.ಸಿ.ಗಳಾದ ಕೃಷ್ಣ ಮತ್ತು ಕೇಶವತಿ, ಪಿ.ಸಿ.ಗಳಾದ ಬಸವರಾಜ್, ಮೋಹನ್ ಮತ್ತು ರಾಕೇಶ್ ಭಾಗವಹಿಸಿದ್ದರು. ಆರೋಪಿಯನ್ನು ಸದ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಸಾರ್ವಜನಿಕರಿಗೆ ಎಚ್ಚರಿಕೆ: ಮನೆ ಮನೆಗೆ ಬಂದು ಚಿನ್ನ ಪಾಲೀಶ್ ಮಾಡಿಕೊಡುತ್ತೇವೆ ಎಂದು ಹೇಳುವ ಅಪರಿಚಿತ ವ್ಯಕ್ತಿಗಳ ಬಗ್ಗೆ ಜಾಗರೂಕರಾಗಿರುವಂತೆ ಮತ್ತು ಇಂತಹ ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ಕೂಡಲೇ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಪೊಲೀಸ್ ಇಲಾಖೆ ತಿಳಿಸಿದೆ.




