ಮಾಣಿ ಗ್ರಾಮದ ಜನರ ದಶಕಗಳ ಕನಸು ನನಸು – ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ಅವರ ಭಗೀರಥ ಪ್ರಯತ್ನಕ್ಕೆ ಸಂದ ಜಯ
ಮುಖ್ಯಮಂತ್ರಿ, ಗೃಹಸಚಿವ, ಸ್ಪೀಕರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಹೃದಯಾಂತರಾಳದ ಕೃತಜ್ಞತೆ ಸಲ್ಲಿಸಿದ ಸುದೀಪ್ ಕುಮಾರ್ ಶೆಟ್ಟಿ

ದಕ್ಷಿಣ ಕನ್ನಡ ಜಿಲ್ಲೆಯ ಆಯಕಟ್ಟಿನ ಪ್ರದೇಶವಾದ ಮಾಣಿಯಲ್ಲಿ ನೂತನ ಪೊಲೀಸ್ ಠಾಣೆ ಸ್ಥಾಪನೆಗೆ ರಾಜ್ಯ ಸರ್ಕಾರ ಅಧಿಕೃತ ಮುದ್ರೆ ಒತ್ತಿದೆ. ಇದು ಕೇವಲ ಸರ್ಕಾರದ ಘೋಷಣೆಯಲ್ಲ, ಬದಲಾಗಿ ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುದೀಪ್ ಕುಮಾರ್ ಶೆಟ್ಟಿ ಅವರ ದೂರದೃಷ್ಟಿ ಮತ್ತು ಸತತ ಬೆನ್ನುಬಿದ್ದ ಪ್ರಯತ್ನಕ್ಕೆ ಸಂದ ದೊರೆತ ಐತಿಹಾಸಿಕ ಜಯವಾಗಿದೆ.

ಸಚಿವರುಗಳಿಗೆ ಹಾಗೂ ಸ್ಪೀಕರ್ಗೆ ವಿಶೇಷ ಧನ್ಯವಾದ:


ಬಜೆಟ್ನಲ್ಲಿ ಮಾಣಿಯಲ್ಲಿ ಪೊಲೀಸ್ ಠಾಣೆ ಮಂಜೂರಾದ ಈ ಸುಸಂದರ್ಭದಲ್ಲಿ, ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುದೀಪ್ ಕುಮಾರ್ ಶೆಟ್ಟಿಯವರು ರಾಜ್ಯದ ನಾಯಕರಿಗೆ ತುಂಬು ಹೃದಯದ ಕೃತಜ್ಞತೆ ಸಲ್ಲಿಸಿದ್ದಾರೆ.


“ಗ್ರಾಮದ ಜನರ ಬಹುಕಾಲದ ಬೇಡಿಕೆಯನ್ನು ಮನ್ನಿಸಿದ ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವರಾದ ಜಿ. ಪರಮೇಶ್ವರ್, ವಿಧಾನಸಭಾ ಸ್ಪೀಕರ್ ಸನ್ಮಾನ್ಯ ಯು.ಟಿ. ಖಾದರ್ ಹಾಗೂ ಜಿಲ್ಲಾ ಉಸ್ತುವಾರಿರಾದ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಮಾಣಿ ಗ್ರಾಮದ ಪರವಾಗಿ ಅನಂತ ಧನ್ಯವಾದಗಳು. ಇವರೆಲ್ಲರ ವಿಶೇಷ ಸಹಕಾರದಿಂದಾಗಿ ಇಂದು ಮಾಣಿಯಲ್ಲಿ ಸುರಕ್ಷತೆಯ ಹೊಸ ಅಧ್ಯಾಯ ಆರಂಭವಾಗಿದೆ,” ಎಂದು ಅವರು ಭಾವಪೂರ್ಣವಾಗಿ ನುಡಿದರು.

ಗ್ರಾಮ ಸಭೆಯಿಂದ ವಿಧಾನಸೌಧದವರೆಗೆ ಪರಿಶ್ರಮ:
ಮಾಣಿಯಲ್ಲಿ ಪೊಲೀಸ್ ಠಾಣೆ ಬೇಕೆಂಬುದು ಜನರ ಅತ್ಯಂತ ತುರ್ತು ಅಗತ್ಯವಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ಅವರು, ಗ್ರಾಮ ಸಭೆಯಲ್ಲಿ ನಿರ್ಣಯ ಕೈಗೊಂಡು ಪ್ರಸ್ತಾವನೆಯನ್ನು ಸರ್ಕಾರದ ಮುಂದಿಟ್ಟಿದ್ದರು. ಈ ಹೋರಾಟದಲ್ಲಿ ಅವರಿಗೆ ಸಾಥ್ ನೀಡಿದ ಪಂಚಾಯತ್ ಸದಸ್ಯರಾದ ಬಾಲಕೃಷ್ಣ ಆಳ್ವ ಕೊಡಾಜೆ, ಇಬ್ರಾಹಿಂ ಕೆ., ಪ್ರೀತಿ ಡಿನ್ನಾ ಪಿರೇರಾ, ಸುಜಾತ, ಸೀತಾ, ರಮಣಿ, ತೋಟ ನಾರಾಯಣ ಶೆಟ್ಟಿ ಮತ್ತು ಮಿತ್ರಾಕ್ಷಿ ಈ ಎಲ್ಲಾ ಸದಸ್ಯರ ಶ್ರಮವನ್ನು ಗ್ರಾಮಸ್ಥರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ತಕ್ಷಣವೇ ಕಾರ್ಯಾರಂಭಕ್ಕೆ ಮುಹೂರ್ತ:
ನೂತನ ಠಾಣೆಯ ಸ್ಥಾಪನೆಗೆ ಈಗಾಗಲೇ ಸರ್ಕಾರಿ ಆಸ್ಪತ್ರೆಯ ಬಳಿ ಜಾಗ ಗುರುತಿಸಲಾಗಿದೆ. ಸ್ವಂತ ಕಟ್ಟಡ ನಿರ್ಮಾಣವಾಗುವವರೆಗೆ ವಿಳಂಬ ಮಾಡದೆ, ತಕ್ಷಣವೇ ಕಾರ್ಯನಿರ್ವಹಿಸಲು ಅನುಕೂಲವಾಗುವಂತೆ ಹಳೆಯ ಬಾಲ ವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಠಾಣೆ ಆರಂಭಿಸಲು ಅಧ್ಯಕ್ಷರು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ ಎಂದು ಕರಾವಳಿ ಸುದ್ದಿ ಪತ್ರಿಕೆಗೆ ಸಂಪರ್ಕಿಸಿದ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ಅವರು ಹೇಳಿದ್ದಾರೆ.






