ಲಂಚ ಪ್ರಕರಣ – ಚಿಕ್ಕಬಳ್ಳಾಪುರ PSI ಮತ್ತು ASI ಮಧ್ಯಂತರ ಜಾಮೀನು ರದ್ದು
ಲೋಕಾಯುಕ್ತ ವಶಕ್ಕೆ ಆರೋಪಿಗಳು

ಬಿ-ರಿಪೋರ್ಟ್ ಸಲ್ಲಿಸಲು ಲಂಚ ಸ್ವೀಕರಿಸಿದ ಆರೋಪ ಎದುರಿಸುತ್ತಿರುವ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಇಬ್ಬರು ಅಧಿಕಾರಿಗಳಿಗೆ ನ್ಯಾಯಾಲಯ ಬಿಗ್ ಶಾಕ್ ನೀಡಿದೆ. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿರುವ ಜಿಲ್ಲಾ 3ನೇ ಸತ್ರ ನ್ಯಾಯಾಲಯವು PSI ಶರಣಪ್ಪ ಮತ್ತು ASI ವೆಂಕಟೇಶಪ್ಪ ಅವರಿಗೆ ನೀಡಿದ್ದ ಮಧ್ಯಂತರ ಜಾಮೀನನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ.

ಪ್ರಕರಣದ ಹಿನ್ನೆಲೆ:
* ಲಂಚದ ಬೇಡಿಕೆ: ಪ್ರಕರಣವೊಂದರಲ್ಲಿ ‘ಬಿ-ರಿಪೋರ್ಟ್’ (B-Report) ಹಾಕಲು ವ್ಯಕ್ತಿಯೊಬ್ಬರಿಂದ 70 ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದಾಗ ಈ ಅಧಿಕಾರಿಗಳು ಲೋಕಾಯುಕ್ತ ಬಲೆಗೆ ಬಿದ್ದಿದ್ದರು.
* ಬಂಧನ ಮತ್ತು ಜಾಮೀನು: ಮಾರ್ಚ್ 3ರಂದು ಲೋಕಾಯುಕ್ತ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಆ ಸಮಯದಲ್ಲಿ ನ್ಯಾಯಾಧೀಶರು ಇಬ್ಬರಿಗೂ ಮಧ್ಯಂತರ ಜಾಮೀನು ಮಂಜೂರು ಮಾಡಿದ್ದರು.
* ಲೋಕಾಯುಕ್ತರ ಆಕ್ಷೇಪ: ಜಾಮೀನು ಮಂಜೂರಾತಿಯನ್ನು ಪ್ರಶ್ನಿಸಿ ಲೋಕಾಯುಕ್ತ ಪೊಲೀಸರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ತನಿಖೆಯ ಹಿತದೃಷ್ಟಿಯಿಂದ ಆರೋಪಿಗಳ ಕಸ್ಟಡಿ ಅಗತ್ಯ ಎಂದು ವಾದಿಸಿದ್ದರು.


ನ್ಯಾಯಾಲಯದ ಅಂತಿಮ ತೀರ್ಪು:
ಕಳೆದ ಶನಿವಾರ ನಡೆದ ಸುದೀರ್ಘ ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಧೀಶರು, ಇಂದು ಮಾರ್ಚ್ 9ರಂದು ಸೋಮವಾರ ತಮ್ಮ ಅಂತಿಮ ತೀರ್ಪು ಪ್ರಕಟಿಸಿದ್ದಾರೆ. ಭ್ರಷ್ಟಾಚಾರದ ಆರೋಪ ಹೊತ್ತಿರುವ ಅಧಿಕಾರಿಗಳಿಗೆ ನೀಡಲಾಗಿದ್ದ ರಕ್ಷಣೆಯನ್ನು ಹಿಂಪಡೆದಿರುವ ನ್ಯಾಯಾಲಯ, ಕೂಡಲೇ ಅವರನ್ನು ಲೋಕಾಯುಕ್ತ ವಶಕ್ಕೆ ನೀಡುವಂತೆ ಆದೇಶಿಸಿದೆ.

ಈ ತೀರ್ಪಿನ ಬೆನ್ನಲ್ಲೇ ಲೋಕಾಯುಕ್ತ ಅಧಿಕಾರಿಗಳು ಇಬ್ಬರು ಪೊಲೀಸ್ ಅಧಿಕಾರಿಗಳನ್ನು ವಶಕ್ಕೆ ಪಡೆದು ಮುಂದಿನ ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ. ಆದರೆ ಲೋಕಾಯುಕ್ತ ಪೊಲೀಸರು ಜಾಮೀನು ನೀಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಶನಿವಾರ ಮತ್ತೆ ಪ್ರಕರಣದ ವಿಚಾರಣೆ ನಡೆದು ವಾದ, ಪ್ರತಿವಾದ ಆಲಿಸಿದ ನ್ಯಾಯಾಧೀಶರು ಸೋಮವಾರ ಅಂತಿಮ ತೀರ್ಪು ನೀಡುವುದಾಗಿ ಪ್ರಕಟಿಸಿದ್ದರು. ಇದೀಗ ನ್ಯಾಯಾಧೀಶರ ತೀರ್ಪು ಹೊರ ಬಿದ್ದಿದೆ. ಮಧ್ಯಂತರ ಜಾಮೀನು ರದ್ದುಗೊಳಿಸಿ ಲೋಕಾಯುಕ್ತರ ವಶಕ್ಕೆ ಪಿಎಸ್ಐ ಹಾಗೂ ಎಎಸ್ ಐ ಅವರನ್ನು ನೀಡುವಂತೆ ನ್ಯಾಯಾಲಯ ಆದೇಶಿಸಿದೆ.




