ಪರಿಸರ ಪ್ರೇಮಿ ಡಾ. ಆರ್. ಕೆ. ನಾಯರ್ ಅವರಿಗೆ ರಾಜ್ಯ ಮಟ್ಟದ ಪ್ರತಿಷ್ಠಿತ ‘ವಂದನಾ ಪ್ರಶಸ್ತಿ’ – 2026
ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಮತ್ತು ರೋಟರಾಕ್ಟ್ ಕ್ಲಬ್ ಮಂಗಳೂರು ಸಿಟಿ ವತಿಯಿಂದ ನೀಡಲಾಗುವ ವಾರ್ಷಿಕ ರಾಜ್ಯ ಮಟ್ಟದ ಪ್ರತಿಷ್ಠಿತ ‘ವಂದನಾ ಪ್ರಶಸ್ತಿ – 2026’ ಕ್ಕೆ ಖ್ಯಾತ ಪರಿಸರ ಪ್ರೇಮಿ ಮತ್ತು ಹಸಿರು ಕ್ರಾಂತಿಕಾರಿ ಡಾ. ಆರ್. ಕೆ. ನಾಯರ್ ಅವರು ಆಯ್ಕೆಯಾಗಿದ್ದಾರೆ.

ಪ್ರಶಸ್ತಿ ಪ್ರದಾನ ಸಮಾರಂಭದ ವಿವರಗಳು:
* ದಿನಾಂಕ: ಮಾರ್ಚ್ 21, 2026 (ಶನಿವಾರ)
* ಸಮಯ: ಸಂಜೆ 07:30 ಗಂಟೆಗೆ
* ಸ್ಥಳ: ನಗರದ ಹೋಟೆಲ್ “ಸಿ ವ್ಯೂ” ಸಭಾಂಗಣ


ಸಾಧನೆಯ ಹಾದಿ:
ಕೇರಳದ ಕಾಸರಗೋಡು ಮೂಲದ ಡಾ. ಆರ್. ಕೆ. ನಾಯರ್ ಅವರು ದೇಶದ ಹಸಿರು ನಾಯಕ ಎಂದೇ ಚಿರಪರಿಚಿತರು. ಭಾರತದ 12 ರಾಜ್ಯಗಳಲ್ಲಿ ಸಾವಿರಾರು ಎಕರೆ ಬಂಜರು ಭೂಮಿಯನ್ನು ಜಪಾನ್ ಮಾದರಿಯ ‘ಮಿಯಾವಾಕಿ’ ಅರಣ್ಯ ಪ್ರದೇಶವನ್ನಾಗಿ ಪರಿವರ್ತಿಸುವಲ್ಲಿ ಅವರು ಮಾಡಿರುವ ಮಹತ್ವದ ಸಾಧನೆಯನ್ನು ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು ಸ್ಮರಣಿಕೆ, ಪ್ರಶಸ್ತಿ ಪಲಕ ಹಾಗೂ ಪ್ರಮಾಣ ಪತ್ರವನ್ನು ಒಳಗೊಂಡಿದೆ.


ಗಣ್ಯರ ಉಪಸ್ಥಿತಿ:
ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ರೋಟರಿ ಮಂಗಳೂರು ಸೆಂಟ್ರಲ್ ಅಧ್ಯಕ್ಷರಾದ ರೋ| ಭಾಸ್ಕರ್ ರೈ ಕಟ್ಟ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ರೋಟರಿ ಜಿಲ್ಲೆ 3181ರ ಸಹಾಯಕ ಗವರ್ನರ್ ರೋ| ಪ್ರೊ| ಡಾ. ಚೆನ್ನಗಿರಿ ಗೌಡ ಹಾಗೂ ರೋಟರಾಕ್ಟ್ ಜಿಲ್ಲಾ ಪ್ರತಿನಿಧಿ ರೋ| ಪ್ರಜ್ವಲ್ ಆರ್. ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಪ್ರಶಸ್ತಿ ಆಯ್ಕೆ ಸಮಿತಿಯ ಸಭಾಪತಿಯಾದ ರೋ| ಡಾ| ದೇವದಾಸ್ ರೈ ತಿಳಿಸಿದ್ದಾರೆ.
ಈ ಪ್ರಶಸ್ತಿಯನ್ನು ಪ್ರತಿ ವರ್ಷ ಕ್ರೀಡೆ, ವಾಣಿಜ್ಯೋದ್ಯಮ, ಶಿಕ್ಷಣ, ಕಲೆ, ಸಂಗೀತ, ಸಾಹಿತ್ಯ, ವಿಜ್ಞಾನ ಹಾಗೂ ಸಮಾಜ ಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದವರಿಗೆ ರೋಟರಿ ಸಂಸ್ಥೆಯ ವೃತ್ತಿಪರ ಸೇವೆಯ ಅಂಗವಾಗಿ ನೀಡಲಾಗುತ್ತದೆ.




