ಉಡುಪಿಯಲ್ಲಿ ನಡೆಯುವ ಸಮಾಧಾನ ಮಹೋತ್ಸವಕ್ಕೆ ಅಡ್ಡಿ; 38 ಹಿಂಜಾವೇ ಕಾರ್ಯಕರ್ತರ ಬಂಧನ – ಪ್ರಕರಣ ದಾಖಲು
ಹೈಕೋರ್ಟ್ ಅನುಮತಿ ನಡುವೆಯೂ ಪ್ರತಿಭಟನೆ

ಪ್ರಾರ್ಥನಾ ಕೂಟಕ್ಕೆ ಪೊಲೀಸ್ ಇಲಾಖೆ ಬಿಗಿ ಭದ್ರತೆ – ಕೃತಜ್ಞತೆ ಸಲ್ಲಿಸಿದ ಸ್ಟ್ಯಾನಿ ಪಿಂಟೋ ಬೆಂಗಳೂರು

ಉಡುಪಿ ಜಿಲ್ಲೆಯಲ್ಲಿ ಆಯೋಜಿಸಲಾಗಿರುವ ಕ್ರೈಸ್ತರ ‘ಸಮಾಧಾನ ಮಹೋತ್ಸವ’ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿ, ಪ್ರತಿಭಟನೆ ನಡೆಸಿದ ಹಿಂದೂ ಜಾಗರಣ ವೇದಿಕೆಯ (ಹಿಂಜಾವೇ) ಮುಖಂಡ ಶ್ರೀಕಾಂತ್ ಶೆಟ್ಟಿ ಸೇರಿದಂತೆ 38 ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ, ಅವರ ಮೇಲೆ ಪ್ರಕರಣ ದಾಖಲಿಸಿದ್ದಾರೆ.



ಮಾರ್ಚ್ 20 ರಿಂದ 22 ರವರೆಗೆ ಸಹೋದರ ಮೋಹನ್ ಸಿ. ಲಾಜರಸ್ ಅವರ ನೇತೃತ್ವದಲ್ಲಿ ಈ ಪ್ರಾರ್ಥನಾ ಕೂಟ ನಡೆಯುತ್ತಿದೆ. ತಮಿಳುನಾಡಿನ ವಿವಾದಾತ್ಮಕ ವ್ಯಕ್ತಿ ಎಂದು ಗುರುತಿಸಿಕೊಂಡಿರುವ ಮೋಹನ್ ಸಿ. ಲಾಜರಸ್ ಅವರು ಈ ಕಾರ್ಯಕ್ರಮ ನಡೆಸಬಾರದು ಮತ್ತು ಜಿಲ್ಲಾಡಳಿತ ಇದಕ್ಕೆ ತಡೆ ನೀಡಬೇಕು, ಇಲ್ಲದಿದ್ದರೆ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ಶ್ರೀಕಾಂತ್ ಶೆಟ್ಟಿ ಈ ಹಿಂದೆ ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದ್ದರು.
ಪ್ರತಿಭಟನೆ ಲೆಕ್ಕಿಸದೆ ಹರಿದು ಬಂದ ಜನಸಾಗರ


ಹೈಕೋರ್ಟ್ ಅನುಮತಿ ನಡುವೆಯೂ ಪ್ರತಿಭಟನೆ:

ಈ ಸಮಾಧಾನ ಮಹೋತ್ಸವಕ್ಕೆ ಮಾನ್ಯ ಹೈಕೋರ್ಟ್ನಿಂದಲೇ ಅನುಮತಿ ದೊರೆತಿತ್ತು. ಕಾನೂನುಬದ್ಧವಾಗಿ ನಡೆಯುತ್ತಿದ್ದ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಮುಂದಾದ ಹಿಂಜಾವೇ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಾರ್ಥನಾ ಕೂಟಕ್ಕೆ ಯಾವುದೇ ತೊಂದರೆಯಾಗದಂತೆ ಪೊಲೀಸ್ ಇಲಾಖೆ ಬಿಗಿ ಭದ್ರತೆ ಒದಗಿಸಿದೆ.
ಕ್ರೈಸ್ತ ಸಂಘಟನೆಯಿಂದ ಅಭಿನಂದನೆ:


ಈ ಕುರಿತು ಪ್ರತಿಕ್ರಿಯಿಸಿರುವ ಕರ್ನಾಟಕ ಕ್ರೈಸ್ತ ಸಂಘಟನೆಯ ರಾಜ್ಯಾಧ್ಯಕ್ಷರಾದ ಸ್ಟ್ಯಾನಿ ಪಿಂಟೋ ಬೆಂಗಳೂರು ಅವರು ಕ್ರೈಸ್ತರು ಸಮಾಧಾನ ಪ್ರಿಯರು ಮತ್ತು ದೇಶದ ಏಳಿಗೆಗಾಗಿ ಪ್ರಾರ್ಥಿಸುವವರು. ಈ ಕೂಟದಲ್ಲಿ ಕೇವಲ ಕ್ರೈಸ್ತರು ಮಾತ್ರವಲ್ಲದೆ ವಿವಿಧ ಧರ್ಮದ ಜನರು ಭಾಗವಹಿಸುತ್ತಿದ್ದಾರೆ. ಮೋಹನ್ ಸಿ. ಲಾಜರಸ್ ಅವರು ಕರ್ನಾಟಕದಾದ್ಯಂತ ಹಲವು ವರ್ಷಗಳಿಂದ ಇಂತಹ ಕೂಟಗಳನ್ನು ನಡೆಸುತ್ತಾ ಬಂದಿದ್ದಾರೆ. ಪ್ರಾರ್ಥನಾ ಕೂಟಕ್ಕೆ ಬಿಗಿ ಪೊಲೀಸ್ ಬಂದೊಬಸ್ತ್ ನೀಡಿದ ಉಡುಪಿ ಪೊಲೀಸ್ ವರಿಷ್ಠಾಧಿಕಾರಿ, ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಮತ್ತು ಸಿಬ್ಬಂಧಿಗಳಿಗೆ ಹಾಗೂ ಕಾರ್ಯಕ್ರಮಕ್ಕೆ ಅವಕಾಶ ಮಾಡಿಕೊಟ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಜಿ. ಪರಮೇಶ್ವರ್, MLC ಐವನ್ ಡಿಸೋಜ ಅವರಿಗೆ ಈ ಸಂದರ್ಭದಲ್ಲಿ ಕೃತಜ್ಞತೆ ಸಲ್ಲಿಸಿದ್ದಾರೆ.






