41 ಬಾರಿ ವಾರೆಂಟ್ ಜಾರಿಯಾಗಿದ್ದ ಖತರ್ನಾಕ್ ಆರೋಪಿ ನೆಲ್ಸನ್ ಕೊನೆಗೂ ಪುತ್ತೂರು ಪೊಲೀಸರ ವಶಕ್ಕೆ!
ಕಳೆದ 5 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ, ಬರೋಬ್ಬರಿ 41 ಬಾರಿ ದಸ್ತಗಿರಿ ವಾರೆಂಟ್ ಆದೇಶವಾಗಿದ್ದ ದರೋಡೆ ಪ್ರಕರಣದ ಪ್ರಮುಖ ಆರೋಪಿಯನ್ನು ಪುತ್ತೂರು ನಗರ ಪೊಲೀಸರು ಕೇರಳದಲ್ಲಿ ಅತ್ಯಂತ ಚಾಣಾಕ್ಷತನದಿಂದ ಬಂಧಿಸಿದ್ದಾರೆ. ಕೇರಳದ ತ್ರಿಶೂರ್ ನಿವಾಸಿ 38 ವರ್ಷ ಪ್ರಾಯದ ನೆಲ್ಸನ್ ಸಿ.ವಿ ಬಂಧಿತ ಆರೋಪಿಯಾಗಿದ್ದಾನೆ.

ಹಿನ್ನೆಲೆ ಏನಿತ್ತು?
ಕಳೆದ 2017ರ ಡಿಸೆಂಬರ್ 22ರಂದು ಪುತ್ತೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದಕ್ಕೆ ನುಗ್ಗಿದ್ದ ಮೂವರು ಅಪರಿಚಿತರು, ಮನೆಯಲ್ಲಿದ್ದವರಿಗೆ ಪಿಸ್ತೂಲ್ ಹಾಗೂ ಚೂರಿ ತೋರಿಸಿ ಹೆದರಿಸಿದ್ದರು. ಮನೆಯಿಂದ ಸುಮಾರು 2,88,000 ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ 6,00,000 ರೂಪಾಯಿ ನಗದನ್ನು ಸುಲಿಗೆ ಮಾಡಿಕೊಂಡು ಪರಾರಿಯಾಗಿದ್ದರು. ಈ ಬಗ್ಗೆ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ (ಅ.ಕ್ರ 200/2017) ದಾಖಲಾಗಿತ್ತು.

41 ಬಾರಿ ವಾರೆಂಟ್ ಉಲ್ಲಂಘನೆ!
ಈ ದರೋಡೆ ಪ್ರಕರಣದ ಆರೋಪಿಯಾಗಿದ್ದ ನೆಲ್ಸನ್ಗೆ ನ್ಯಾಯಾಲಯವು ಷರತ್ತುಬದ್ಧ ಜಾಮೀನು ನೀಡಿತ್ತು. ಆದರೆ, 2021ರ ಆಗಸ್ಟ್ 27ರಿಂದ ಈತ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ, ಷರತ್ತುಗಳನ್ನು ಪದೇ ಪದೇ ಉಲ್ಲಂಘಿಸಿ ತಲೆಮರೆಸಿಕೊಂಡಿದ್ದ. ಈತನನ್ನು ಪತ್ತೆ ಹಚ್ಚಲು ಮಾನ್ಯ ನ್ಯಾಯಾಲಯವು ಈವರೆಗೆ ಒಟ್ಟು 41 ಬಾರಿ ದಸ್ತಗಿರಿ ವಾರೆಂಟ್ (Arrest Warrant) ಆದೇಶ ಹೊರಡಿಸಿತ್ತು.

ಪೊಲೀಸರ ಕಾರ್ಯಾಚರಣೆ:
ಕೊನೆಗೂ ಆರೋಪಿಯ ಪತ್ತೆಗೆ ಜಾಲ ಬೀಸಿದ ಪುತ್ತೂರು ನಗರ ಪೊಲೀಸ್ ಠಾಣೆಯ ಹೆಚ್.ಸಿ. (413) ಸಂತೋಷ್ ಎ., ಪಿಸಿ (2347) ವಿನಾಯಕ ಮತ್ತು ಪಿಸಿ (454) ಶಿವರಾಜ್ ಅವರನ್ನೊಳಗೊಂಡ ವಿಶೇಷ ತಂಡವು ಕೇರಳ ರಾಜ್ಯದ ತ್ರಿಶೂರು ಜಿಲ್ಲೆಯ ‘ಮಿಯೂರು’ ಎಂಬಲ್ಲಿಗೆ ತೆರಳಿ, 2026ರ ಜುಲೈ 8ರಂದು ಆರೋಪಿಯನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ. ಬಂಧಿತನನ್ನು ಸದ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ನ್ಯಾಯಾಲಯದ ಷರತ್ತುಬದ್ಧ ಜಾಮೀನು ಆದೇಶವನ್ನು ಪದೇ ಪದೇ ಉಲ್ಲಂಘಿಸಿ ದ್ರೋಹ ಬಗೆದ ಹಿನ್ನೆಲೆಯಲ್ಲಿ ಆರೋಪಿ ನೆಲ್ಸನ್ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಇದೀಗ ಹೊಸದಾಗಿ ಮತ್ತೊಂದು ಪ್ರಕರಣ (ಅ ಕ್ರ: 80/2026, ಕಲಂ: 269 NS 2023) ದಾಖಲಾಗಿದೆ.



