ಮಂಗಳೂರು ನಗರದಲ್ಲಿ ಸಾಧನೆಗೈದ 147 ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಪ್ರಶಂಸನಾ ಪತ್ರ, ನಗದು ಬಹುಮಾನ ಗೌರವ
ಮಂಗಳೂರು ನಗರದಲ್ಲಿ ಕಳೆದ ಆರು ತಿಂಗಳಲ್ಲಿ ಅಪರಾಧ ತಡೆ, ಸೈಬರ್ ಕ್ರೈಂ ಪತ್ತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ 29 ಪೊಲೀಸ್ ಅಧಿಕಾರಿಗಳು ಹಾಗೂ 118 ಸಿಬ್ಬಂದಿಗೆ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವತಿಯಿಂದ ಪ್ರಶಂಸನಾ ಪತ್ರ ಹಾಗೂ ನಗದು ಬಹುಮಾನ ನೀಡಿ ಗೌರವಿಸಲಾಗಿದೆ. ಜುಲಾಯಿ 20ರಂದು ಸೋಮವಾರ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಮಂಗಳೂರು ಪೊಲೀಸ್ ಆಯುಕ್ತರಾದ ಸುಧೀರ್ ಕುಮಾರ್ ರೆಡ್ಡಿ ಅವರು ಕರ್ತವ್ಯದಕ್ಷತೆ ಮೆರೆದ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಈ ಪುರಸ್ಕಾರಗಳನ್ನು ವಿತರಿಸಿದರು.

ಆರು ತಿಂಗಳ ಸಾಧನೆಯ ಪ್ರಮುಖ ಮುಖ್ಯಾಂಶಗಳು:
* ಕಳವು ಸೊತ್ತುಗಳ ವಶ: 2026ರಲ್ಲಿ ವರದಿಯಾದ ಕಳವು ಪ್ರಕರಣಗಳಲ್ಲಿ 88 ಪ್ರಕರಣಗಳನ್ನು ಭೇದಿಸಿ, ₹1.20 ಕೋಟಿ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಳ್ಳಲಾಗಿದೆ.
* ದೀರ್ಘಕಾಲದ ಪ್ರಕರಣಗಳ (LPC) ಆರೋಪಿಗಳ ಬಂಧನ: ಹಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದ 24 LPC ಪ್ರಕರಣಗಳ ಆರೋಪಿಗಳು ಹಾಗೂ NBW ವಾರಂಟ್ ಹೊಂದಿದ್ದ ವ್ಯಕ್ತಿಗಳನ್ನು ಯಶಸ್ವಿಯಾಗಿ ಬಂಧಿಸಲಾಗಿದೆ.

* ಮಾದಕದ್ರವ್ಯ ಜಾಲದ ವಿರುದ್ಧ ಕಠಿಣ ಕ್ರಮ:
* ಗಾಂಜಾ/ಮಾದಕವಸ್ತು ಮಾರಾಟ ಮತ್ತು ಸಾಗಾಟಕ್ಕೆ ಸಂಬಂಧಿಸಿದಂತೆ 84 ಪ್ರಕರಣಗಳನ್ನು ದಾಖಲಿಸಿ, 142 ಪೆಡ್ಲರ್ಗಳನ್ನು ಬಂಧಿಸಲಾಗಿದೆ.
* ಮಾದಕದ್ರವ್ಯ ಸೇವನೆಗೆ ಸಂಬಂಧಿಸಿ 346 ಪ್ರಕರಣಗಳನ್ನು ದಾಖಲಿಸಿ, 443 ಆರೋಪಿಗಳನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗಿದೆ.

ನೇಪಾಳದ ಸೈಬರ್ ವಂಚನೆ ಜಾಲ ಭೇದಿಸಿದ ತಂಡಕ್ಕೆ ಶ್ಲಾಘನೆ:
ಸೈಬರ್ ಅಪರಾಧಗಳ ತಡೆಗೆ ನಿರಂತರ ಜಾಗೃತಿ ಮೂಡಿಸುತ್ತಿರುವುದರಿಂದ ಸೈಬರ್ ವಂಚನೆ ಪ್ರಮಾಣ ತಗ್ಗಿದೆ. 1930 ಸಹಾಯವಾಣಿ ಮೂಲಕ ತಕ್ಷಣ ಸ್ಪಂದಿಸಿ ಸಾರ್ವಜನಿಕರ ಹಣ ಮರಳಿ ಪಡೆಯಲು ಶ್ರಮಿಸಿದ ಅಧಿಕಾರಿಗಳನ್ನು ಗೌರವಿಸಲಾಯಿತು. ಮುಖ್ಯವಾಗಿ ನೇಪಾಳದಿಂದ ಕಾರ್ಯಾಚರಿಸುತ್ತಿದ್ದ ಬೃಹತ್ ‘Investment Fraud’ ಜಾಲವನ್ನು ಭೇದಿಸಿ, ದೇಶದ ವಿವಿಧ ರಾಜ್ಯಗಳಲ್ಲಿದ್ದ ಸೈಬರ್ ಅಪರಾಧಿಗಳನ್ನು ಪತ್ತೆಹಚ್ಚಿದ ಸಿಬ್ಬಂದಿಯ ಕಾರ್ಯಕ್ಕೆ ವಿಶೇಷ ಮೆಚ್ಚುಗೆ ವ್ಯಕ್ತವಾಯಿತು.


ಇತರ ಪ್ರಮುಖ ಸಾಧನೆಗಳು:
* ಸಾಮಾಜಿಕ ಜಾಲತಾಣ ನಿಗಾ: ದ್ವೇಷ ಭಾಷಣ, ಅಪಪ್ರಚಾರ ಹಾಗೂ ಪ್ರಚೋದನಕಾರಿ ಸಂದೇಶ ಹರಡುವವರ ವಿರುದ್ಧ ಪ್ರಕರಣ ದಾಖಲಿಸಿ ಶಾಂತಿ ಸುವ್ಯವಸ್ಥೆ ಕಾಪಾಡಲಾಗಿದೆ.
* ಶಿಕ್ಷೆ ಪ್ರಮಾಣ ಹೆಚ್ಚಳ: ಗುಣಮಟ್ಟದ ತನಿಖೆ ನಡೆಸಿ ನ್ಯಾಯಾಲಯದಲ್ಲಿ ಆರೋಪಿಗಳಿಗೆ ಶಿಕ್ಷೆಯಾಗುವಂತೆ ಮಾಡಿದ ತನಿಖಾಧಿಕಾರಿಗಳಿಗೆ ಗೌರವ ಸಲ್ಲಿಸಲಾಗಿದೆ.
* ತುರ್ತು ಸೇವೆ & ಬಂದೋಬಸ್ತ್: 112 ತುರ್ತು ಸ್ಪಂದನೆ ಸಹಾಯವಾಣಿ ಮತ್ತು ಬಂದೋಬಸ್ತ್ ಕಾರ್ಯಗಳನ್ನು ಸುಗಮವಾಗಿ ನಿರ್ವಹಿಸಿದ ನಗರ ನಿಸ್ತಂತು (Wireless) ವಿಭಾಗದ ಸಿಬ್ಬಂದಿಗೂ ಪ್ರಶಂಸನಾ ಪತ್ರ ನೀಡಲಾಗಿದೆ.




