ಕಾಲುಸಂಕ ದಾಟುವಾಗ ಹರಿಯುತ್ತಿದ್ದ ತೋಡಿಗೆ ಬಿದ್ದು ಪ್ರವಾಸಿ ಉದ್ಯೋಗಿ ನಾಪತ್ತೆ – NDRF ತೀವ್ರ ಶೋಧ
ರಾಯಿ ಪಾಂಚಕೋಡಿ ನಿವಾಸಿ ಜೋಸೆಫ್ ಪಿಂಟೋ ಅವರ ಪುತ್ರ ಜೀವನ್ ಪಿಂಟೋ

ಬಂಟ್ವಾಳ ತಾಲೂಕಿನ ರಾಯಿ ಗ್ರಾಮದ ಪಾಂಚಕೋಡಿ ಎಂಬಲ್ಲಿ ಧಾರಾಕಾರ ಮಳೆಯ ನಡುವೆ ಕಾಲುಸಂಕ ದಾಟುತ್ತಿದ್ದ ವ್ಯಕ್ತಿಯೊಬ್ಬರು ನೀರು ತುಂಬಿ ಹರಿಯುತ್ತಿದ್ದ ತೋಡಿಗೆ ಬಿದ್ದು ಕೊಚ್ಚಿಹೋಗಿರುವ ಶಂಕೆ ವ್ಯಕ್ತವಾಗಿದೆ. ನಾಪತ್ತೆಯಾದ ವ್ಯಕ್ತಿಯ ಪತ್ತೆಗಾಗಿ NDRF ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ.
ರಾಯಿ ಪಾಂಚಕೋಡಿ ನಿವಾಸಿ ಜೋಸೆಫ್ ಪಿಂಟೋ ಅವರ ಪುತ್ರ 48 ವರ್ಷ ಪ್ರಾಯದ ಜೀವನ್ ಪಿಂಟೋ ನಾಪತ್ತೆಯಾದವರು. ವಿದೇಶದಲ್ಲಿ ಉದ್ಯೋಗದಲ್ಲಿರುವ ಜೀವನ್ ಅವರು ಕೆಲ ತಿಂಗಳ ಹಿಂದೆಯಷ್ಟೇ ಊರಿಗೆ ಬಂದಿದ್ದು, ಈ ತಿಂಗಳು (ಆಗಸ್ಟ್) ಮರಳಿ ವಿದೇಶಕ್ಕೆ ತೆರಳಲು ಸಿದ್ಧತೆ ನಡೆಸುತ್ತಿದ್ದರು.



ಘಟನೆಯ ವಿವರ:
ನಿನ್ನೆ ಆಗಸ್ಟ್ 1ರಂದು ಶನಿವಾರ ರಾತ್ರಿ ಸುಮಾರು 7.30ರ ವೇಳೆಗೆ ಸುರಿಯುತ್ತಿದ್ದ ಭಾರೀ ಮಳೆಯ ನಡುವೆ, ಜೀವನ್ ಅವರು ಕೈಯಲ್ಲಿ ಟಾರ್ಚ್ ಹಿಡಿದುಕೊಂಡು ಮನೆ ಸಮೀಪದಲ್ಲೇ ಇರುವ ಮಾವನ ಮನೆಗೆ ಹೊರಟಿದ್ದರು. ಮಾರ್ಗಮಧ್ಯೆ ಹರಿಯುವ ತೋಡಿನ ಮೇಲಿದ್ದ ಮರದ ಕಾಲುಸಂಕವನ್ನು ದಾಟುವಾಗ ಆಕಸ್ಮಿಕವಾಗಿ ಕಾಲುಜಾರಿ ನೀರಿನ ಪ್ರವಾಹಕ್ಕೆ ಬಿದ್ದಿರಬಹುದು ಎಂದು ಶಂಕಿಸಲಾಗಿದೆ. ಘಟನಾ ಸ್ಥಳದಲ್ಲಿ ಅವರ ಟಾರ್ಚ್ ಹಾಗೂ ಚಪ್ಪಲಿ ಪತ್ತೆಯಾಗಿವೆ.


ಸ್ಥಳೀಯರು ನೀಡಿದ ಮಾಹಿತಿಯಂತೆ ಬಂಟ್ವಾಳ ಗ್ರಾಮಾಂತರ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಹಾಗೂ ಎನ್ಡಿಆರ್ಎಫ್ ಪಡೆಗಳು ಇಂದು ಆಗಸ್ಟ್ 2ರಂದು ಭಾನುವಾರ ದಿನವಿಡೀ ತೋಡಿನುದ್ದಕ್ಕೂ ಸುದೀರ್ಘ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಮಳೆಯ ಆರ್ಭಟ ಹೆಚ್ಚಿರುವುದರಿಂದ ಕಾರ್ಯಾಚರಣೆಗೆ ಅಡೆತಡೆ ಎದುರಾಗಿದ್ದು, ಶೋಧ ಕಾರ್ಯ ಮುಂದುವರಿದಿದೆ.



