ಸೇವಾ ಕಾರ್ಯಗಳಿಗೆ ಸೈಂಟ್ ಮಿಲಾಗ್ರಿಸ್ ಸಂಸ್ಥೆಯ ಕೊಡುಗೆ ಶ್ಲಾಘನೀಯ – ಶಾಸಕ ವೇದವ್ಯಾಸ್ ಕಾಮತ್
ವಿದ್ಯಾರ್ಥಿಗಳಿಗೆ ಅಗತ್ಯ ವಸ್ತುಗಳ ವಿತರಣೆ

ಮಂಗಳೂರು: ಅಗತ್ಯವಿರುವವರಿಗೆ ನೆರವು ನೀಡುವ ಮೂಲಕ ಮಾನವೀಯ ಸೇವೆಯಲ್ಲಿ ತೊಡಗಿರುವ ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಕಾರ್ಯ ಶ್ಲಾಘನೀಯವಾಗಿದ್ದು, ಇಂತಹ ಸಮಾಜಮುಖಿ ಸೇವಾ ಕಾರ್ಯಗಳು ನಿರಂತರವಾಗಿ ಮುಂದುವರಿಯಬೇಕು ಎಂದು ಮಂಗಳೂರು ದಕ್ಷಿಣ ಶಾಸಕರಾದ ಡಿ. ವೇದವ್ಯಾಸ್ ಕಾಮತ್ ಹೇಳಿದರು.


ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ., ಕಾರವಾರ ಇದರ ಉರ್ವಾ ಶಾಖೆಯ ಆಶ್ರಯದಲ್ಲಿ ಸೆಪ್ಟೆಂಬರ್ 2ರಂದು ಮಂಗಳೂರಿನ ಚೇತನಾ ಬಾಲ ವಿಕಾಸ ಕೇಂದ್ರದಲ್ಲಿ ನಡೆದ ಅಗತ್ಯ ವಸ್ತುಗಳ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.






ಸೈಂಟ್ ಮಿಲಾಗ್ರಿಸ್ ಸಂಸ್ಥೆಯು ವಿವಿಧ ಆಶ್ರಮಗಳು ಹಾಗೂ ಅಗತ್ಯವಿರುವವರಿಗೆ ಅಗತ್ಯ ವಸ್ತುಗಳನ್ನು ಒದಗಿಸುವ ಮೂಲಕ ಉತ್ತಮ ಸೇವಾ ಕಾರ್ಯ ನಡೆಸುತ್ತಿದೆ. ಸಮಾಜದ ಒಳಿತಿಗಾಗಿ ಇಂತಹ ಕಾರ್ಯಗಳು ಮುಂದಿನ ದಿನಗಳಲ್ಲಿಯೂ ಇನ್ನಷ್ಟು ವಿಸ್ತರಿಸಲಿ ಎಂದು ಶಾಸಕ ಕಾಮತ್ ಆಶಿಸಿದರು.







ಖ್ಯಾತ ಆರ್ಜೆ ಅಭಿಷೇಕ್ ಶೆಟ್ಟಿ ಮಾತನಾಡಿ, ಇತರರಿಗೆ ನೆರವಾಗುವುದು ದೇವರ ಸೇವೆ ಮಾಡಿದಂತೆಯೇ. ಸೈಂಟ್ ಮಿಲಾಗ್ರಿಸ್ ಸಂಸ್ಥೆಯು ಇಂತಹ ಮಾನವೀಯ ಕಾರ್ಯಗಳ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಚೇತನಾ ಬಾಲ ವಿಕಾಸ ಕೇಂದ್ರದ ಎಲ್ಲಾ ವಿದ್ಯಾರ್ಥಿಗಳಿಗೆ ಅಗತ್ಯ ವಸ್ತುಗಳನ್ನು ವಿತರಿಸಲಾಯಿತು.

ವೇದಿಕೆಯಲ್ಲಿ ಮಾಜಿ ಉಪಮೇಯರ್ ಪೂರ್ಣಿಮಾ, ಚೇತನಾ ಬಾಲ ವಿಕಾಸ ಕೇಂದ್ರದ ಟ್ರಸ್ಟಿ ಪ್ರಕಾಶ್ ಪೈ, ಚೇತನಾ ಶಾಲೆಯ ಮುಖ್ಯಶಿಕ್ಷಕಿ ಸುಪ್ರೀತಾ, ಸೈಂಟ್ ಮಿಲಾಗ್ರಿಸ್ ಸಂಸ್ಥೆಯ ಮಂಗಳೂರು–ಪುತ್ತೂರು ವಿಭಾಗದ ಅಭಿವೃದ್ಧಿ ಅಧಿಕಾರಿ ನಾಗರಾಜ್ ಮಡಿವಾಳ್, ಪುತ್ತೂರು ವಿಭಾಗದ ರಿಕವರಿ ಆಫೀಸರ್ ಮಹೇಶ್ ಪ್ರಸಾದ್ ಸಿ.ಎನ್., ಮಂಗಳೂರು ವಿಭಾಗದ ರಿಕವರಿ ಆಫೀಸರ್ ವಿಷ್ಣು ಸಿ.ಕೆ., ವಾಲೆನ್ಸಿಯಾ ಶಾಖಾ ವ್ಯವಸ್ಥಾಪಕ ಐವನ್ ವಿವಿಯನ್ ವೇಗಸ್ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.


ಉರ್ವಾ ಶಾಖಾ ವ್ಯವಸ್ಥಾಪಕ ಮೆಲ್ ರೋಯ್ ಪ್ರೇಮ್ ಡಿಸೋಜ ಸ್ವಾಗತಿಸಿದರು. ಶಾಖಾ ಸಿಬ್ಬಂದಿ ರಕ್ಷಿತಾ ವಂದಿಸಿದರು. ಪ್ರತಿಮಾ ಕಾರ್ಯಕ್ರಮ ನಿರೂಪಿಸಿದರು.



