ಅಕ್ರಮ ಕೆಂಪುಕಲ್ಲು ಸಾಗಾಟ – ವಿಟ್ಲ ಪೊಲೀಸರ ದಾಳಿ, ನಾಲ್ವರ ವಿರುದ್ಧ ಪ್ರಕರಣ
PSI ರಾಮಕೃಷ್ಣ ಹಾಗೂ ಸಿಬ್ಬಂದಿಯಿಂದ ದಾಳಿ – ವಾಹನಗಳು ವಶ

ಯಾವುದೇ ರಶೀದಿ ಅಥವಾ ಪರವಾನಿಗೆ ಇಲ್ಲದೆ ಅಕ್ರಮವಾಗಿ ಕೆಂಪು ಕಲ್ಲುಗಳನ್ನು ಸಾಗಿಸುತ್ತಿದ್ದ ಎರಡು ಲಾರಿಗಳನ್ನು ವಿಟ್ಲ ಠಾಣಾ ಪೊಲೀಸರು ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಇಬ್ಬರು ಚಾಲಕರು ಸೇರಿದಂತೆ ನಾಲ್ವರ ವಿರುದ್ಧ ದೂರು ದಾಖಲಾಗಿದೆ. ವಿಟ್ಲ ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ರಾಮಕೃಷ್ಣ ಹಾಗೂ ಸಿಬ್ಬಂದಿಗಳಾದ ಗೋಪಾಲ ಹಾಗೂ ಶ್ರೀಶೈಲ್ ಕಾರ್ಯಾಚರಣೆ ನಡೆಸಿದ್ದಾರೆ.

ಮೊದಲ ಪ್ರಕರಣ:
ದಿನಾಂಕ 14.09.2026ರಂದು ರಾತ್ರಿ ಕೇರಳ ಕಡೆಯಿಂದ ಕನ್ಯಾನ ಮಾರ್ಗವಾಗಿ ಅಕ್ರಮವಾಗಿ ಕೆಂಪು ಕಲ್ಲು ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದ ನೆಲ್ಲಿಕಟ್ಟೆ ಜಂಕ್ಷನ್ ಬಳಿ KA-21-D-0784 ನಂಬರಿನ ಲಾರಿಯನ್ನು ತಡೆದು ಪರಿಶೀಲಿಸಲಾಯಿತು. ಈ ವೇಳೆ ಯಾವುದೇ ದಾಖಲೆಗಳಿಲ್ಲದೆ ಕಲ್ಲು ಸಾಗಿಸುತ್ತಿರುವುದು ಪತ್ತೆಯಾಗಿದೆ.
ಈ ಸಂಬಂಧ ಲಾರಿ ಚಾಲಕ ವೀರಕಂಭ ನಿವಾಸಿ 26 ವರ್ಷ ಪ್ರಾಯದ ಮಹಮ್ಮದ್ ತೌಕಿರ್, ಲಾರಿ ಮಾಲಿಕ ಮೊಹಮ್ಮದ್ ಸಿಮ್ರಾನ್ ಹಾಗೂ ಕೃತ್ಯಕ್ಕೆ ಸಹಕರಿಸಿದ ಸಜೀರ್ ಎಂಬವರ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಅಕ್ರ 193/2026ರಲ್ಲಿ ಪ್ರಕರಣ ದಾಖಲಿಸಿ, ಲಾರಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.

ಎರಡನೇ ಪ್ರಕರಣ:
ಅದೇ ದಿನ ತಡರಾತ್ರಿ ಕಲ್ಲಡ್ಕ-ಕಾಂಞಗಾಡ್ ಅಂತರರಾಜ್ಯ ಹೆದ್ದಾರಿಯ ಕುದ್ದುಪದವು ಮಾರ್ಗವಾಗಿ ಪರವಾನಿಗೆಯಿಲ್ಲದೆ ಕೆಂಪು ಕಲ್ಲು ಸಾಗಿಸುತ್ತಿದ್ದ KA-70-A-1926 ನಂಬರಿನ ಟಿಪ್ಪರ್ ಲಾರಿಯನ್ನು ಪಿಎಸ್ಐ ರಾಮಕೃಷ್ಣ ಹಾಗೂ ಸಿಬ್ಬಂದಿಗಳು ವಶಕ್ಕೆ ಪಡೆದಿದ್ದಾರೆ. ಲಾರಿ ಚಾಲಕ ಬೆಳ್ತಂಗಡಿ ಕನ್ಯಾಡಿ ನಿವಾಸಿ 40 ವರ್ಷ ಪ್ರಾಯದ ಚಂದ್ರೇಶ್ ಎಂಬಾತನ ವಿರುದ್ಧ ವಿಟ್ಲ ಠಾಣೆಯಲ್ಲಿ ಅಕ್ರ 194/2026ರಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 303(2), ಗಣಿ ಮತ್ತು ಖನಿಜ ಕಾಯ್ದೆ (MMDR Act) ಹಾಗೂ ಕರ್ನಾಟಕ ಉಪ ಖನಿಜಗಳ ನಿಯಮಾವಳಿಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



