ಪಾಣೆಮಂಗಳೂರು ಶಾರದಾ ಪ್ರೌಢ ಶಾಲೆಯಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ
ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬಂಟ್ವಾಳ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ತುಂಬೆ ವಲಯ, ಶ್ರೀ ಶಾರದಾ ಪ್ರೌಢ ಶಾಲೆ ಪಾಣೆಮಂಗಳೂರು ಇದರ ಸಂಯುಕ್ತ ಆಶ್ರಯದಲ್ಲಿ ಪಾಣೆಮಂಗಳೂರು ಶ್ರೀ ಶಾರದಾ ಪ್ರೌಢ ಶಾಲೆಯಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಸಪ್ಟಂಬರ್ 18ರಂದು ಮಂಗಳವಾರ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಸಂಪನ್ಮೂಲ ವ್ಯಕ್ತಿ ಸಾರ್ವಜನಿಕ ಆಸ್ಪತ್ರೆ ಬಂಟ್ವಾಳದ ಆಪ್ತ ಸಮಾಲೋಚಕಿ ಅಕ್ಷತಾ, ಮಕ್ಕಳು ಯಾವ ಯಾವ ಕೆಟ್ಟ ಅಭ್ಯಾಸಗಳಿಂದಾಗಿ ವ್ಯಸನಿಗಳಾಗುತ್ತಾರೆ, ಅದರಿಂದ ಆಗುವ ಸಮಸ್ಯೆಗಳ ಬಗ್ಗೆ ನಿಜ ಘಟನೆಗಳ ವಿವರಣೆಯೊಂದಿಗೆ ಮಾಹಿತಿ ನೀಡಿ, ಕೆಟ್ಟ ಅಭ್ಯಾಸದ ಕಡೆ ಗಮನ ಕೊಡದೆ, ತಮ್ಮ ಆರೋಗ್ಯದ ಜೊತೆಗೆ ಸಮಾಜದ ಆರೋಗ್ಯ ಕಾಪಾಡಿ ಉತ್ತಮ ಸಮಾಜ ಸೇವೆಯಲ್ಲಿ ತೊಡಗಿಕೊಳ್ಳಿ ಎಂದರು.
ಗ್ರಾಮಭಿವೃದ್ಧಿ ಯೋಜನೆಯ ತುಂಬೆ ವಲಯ ಮೇಲ್ವಿಚಾರಕಿ ಮಮತಾ, ಕ್ಷಣಿಕ ಸುಖಕ್ಕೋಸ್ಕರ ಯುವಜನತೆ ದುರಭ್ಯಾಸಕ್ಕೆ ತುತ್ತಾಗುತ್ತಿದ್ದು, ಕೆಟ್ಟ ದುರಭ್ಯಾಸಗಳಿಂದ ಮುಂದೆ ವ್ಯಸನಿಗಳಾಗುತ್ತಾರೆ, ಅದನ್ನು ತಡೆಗಟ್ಟುವ ಉದ್ದೇಶದಿಂದಲೇ ಮಕ್ಕಳಿಗೆ ಪ್ರೌಢ ಅವಸ್ಥೆಯಲ್ಲಿ ಕೆಟ್ಟ ದುರಭ್ಯಾಸಗಳಿಂದ ಆಗುವ ತೊಂದರೆಗಳ ಬಗ್ಗೆ ಮನವರಿಕೆ ಮಾಡುವ ಕಾರ್ಯಕ್ರಮವೇ ಸ್ವಾಸ್ಥ ಸಂಕಲ್ಪ ಕಾರ್ಯಕ್ರಮ ಎಂದು ಹೇಳಿ ಮಕ್ಕಳಿಗೆ ಸ್ವಾಸ್ಥ್ಯ ಸಂಕಲ್ಪದ ಪ್ರತಿಜ್ಞಾವಿಧಿ ಬೋಧಿಸಿದರು.
ವೇದಿಕೆಯಲ್ಲಿ ನಂದಾವರ ಒಕ್ಕೂಟ ಸೇವಾ ಪ್ರತಿನಿಧಿ ವನಿತಾ, ಶಾಲಾ ನಾಯಕ ಮನ್ವಿತ್ ಸಿ. ಪೂಜಾರಿ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕ ಶಿವಪ್ಪ ನಾಯ್ಕ್ ಸ್ವಾಗತಿಸಿ, ಕನ್ನಡ ಶಿಕ್ಷಕರಾದ ಧನಂಜಯ ಕಾರ್ಯಕ್ರಮ ನಿರೂಪಿಸಿದರು.