ಪುತ್ತೂರಿನಲ್ಲಿ ಯುವತಿಗೆ ಚಾಕು ತೋರಿಸಿ ಬೆದರಿಕೆ ಹಾಕಿದ ಆರೋಪ – ಸತ್ಯಾಂಶ ಬಿಚ್ಚಿಟ್ಟ ಪೊಲೀಸರು
ಉಭಯ ಕಡೆಯಿಂದ ದೂರು ದಾಖಲು!

ಸುಳ್ಳು ಸುದ್ದಿ ಅಥವಾ ವದಂತಿಗಳನ್ನು ಹಬ್ಬಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ – ಜಿಲ್ಲಾ SP ಡಾ. ಅರುಣ್ ಕೆ.

ಯುವತಿಯೊಬ್ಬಳು ಕೆಲಸಕ್ಕೆ ಹೋಗುತ್ತಿದ್ದ ವೇಳೆ ಚಾಕು ಹಿಡಿದು ಹಿಂಬಾಲಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಪುತ್ತೂರಿನಲ್ಲಿ ಎರಡು ಪ್ರತ್ಯೇಕ ದೂರುಗಳು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಘಟನೆಯ ಹಿನ್ನೆಲೆ:
ದಿನಾಂಕ 08.07.2026 ರಂದು ಬೆಳಿಗ್ಗೆ ಸುಮಾರು 6.45ರ ಸುಮಾರಿಗೆ ಪುತ್ತೂರಿನ ನಿವಾಸಿಯಾದ ಯುವತಿಯೊಬ್ಬಳು ಕೆಲಸಕ್ಕೆ ತೆರಳುತ್ತಿದ್ದಾಗ, ಆಕೆಯ ಕಾಲೇಜು ಪರಿಚಯದ ಸೊಹೈಲ್ ಎಂಬಾತ ಚಾಕು ಹಿಡಿದುಕೊಂಡು ನಿಂತಿರುವುದನ್ನು ಗಮನಿಸಿದ್ದಾಳೆ. ಅಲ್ಲದೆ ಸೊಹೈಲ್ ಮತ್ತು ಆತನ ನಾಲ್ಕು ಜನ ಸ್ನೇಹಿತರು ವಾಹನವೊಂದರಲ್ಲಿ ತನ್ನನ್ನು ಹಿಂಬಾಲಿಸುತ್ತಿದ್ದಾರೆ ಎಂದು ಹೆದರಿದ ಯುವತಿ ತಕ್ಷಣವೇ ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ವಿಚಾರಣೆ ವೇಳೆ ಬಯಲಾದ ಅಸಲಿ ಸತ್ಯ:
ದೂರಿನ ಹಿನ್ನೆಲೆಯಲ್ಲಿ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಸದ್ರಿ ಯುವಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಅಸಲಿ ಸಂಗತಿ ಬೆಳಕಿಗೆ ಬಂದಿದೆ. ಯುವಕರು ಬೇಕರಿಯೊಂದರಲ್ಲಿ ಬ್ರೆಡ್ ಖರೀದಿಸಿ, ಅದಕ್ಕೆ ಚೀಸ್ ಹರಡಲು ಬೇಕರಿ ಮಾಲೀಕರಿಂದ ಚಾಕು ಪಡೆದುಕೊಂಡಿದ್ದರು. ಆ ಬಳಿಕ ಚಾಕುವನ್ನು ಮರಳಿ ಬೇಕರಿಗೆ ಕೊಡಲು ಹೋಗುತ್ತಿದ್ದಾಗ ಯುವತಿ ಇದನ್ನು ಕಂಡು ಆತಂಕಗೊಂಡಿದ್ದಾಳೆ. ತಾವು ಯಾವುದೇ ಅಪರಾಧಿಕ ಕೃತ್ಯ ಎಸಗಿಲ್ಲ ಮತ್ತು ಎಂದಿನಂತೆ ಆ ಬಳಿಕ ಜಿಮ್ಗೆ ತೆರಳಿರುವುದಾಗಿ ಯುವಕರು ಸ್ಪಷ್ಟನೆ ನೀಡಿದ್ದಾರೆ.

ಪ್ರತಿದೂರು ದಾಖಲು:
ಯುವಕರ ವಿಚಾರಣೆಯಿಂದ ನೈಜ ಸಂಗತಿಗಳು ಬೆಳಕಿಗೆ ಬಂದಿದ್ದರೂ ಸಹ, ಧಾರ್ಮಿಕ ದ್ವೇಷಭಾವನೆಯಿಂದ ಮುರಳಿ ಕೃಷ್ಣ ಹಂಸತಡ್ಕ ಎಂಬುವವರು ಮತ್ತು ಇತರರು ತಮ್ಮ ವಿರುದ್ಧ ದುರುದ್ದೇಶಪೂರ್ವಕವಾಗಿ ಯುವತಿಯ ಮೂಲಕ ಕೇಸ್ ದಾಖಲಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ಯುವಕರು ಪುತ್ತೂರು ನಗರ ಠಾಣೆಗೆ ಪ್ರತಿದೂರು ನೀಡಿದ್ದಾರೆ.
ಪೊಲೀಸರ ಎಚ್ಚರಿಕೆ:
ಪ್ರಸ್ತುತ ಪೊಲೀಸರು ಉಭಯ ಕಡೆಯ ದೂರುಗಳನ್ನು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಈ ಘಟನೆಯನ್ನು ಮುಂದಿಟ್ಟುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸಾರ್ವಜನಿಕವಾಗಿ ಸುಳ್ಳು ಸುದ್ದಿ ಅಥವಾ ವದಂತಿಗಳನ್ನು ಹಬ್ಬಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ. ಅರುಣ್ ಕೆ. ಅವರು ಎಚ್ಚರಿಕೆ ನೀಡಿದ್ದಾರೆ.



