ಹಿರಿಯರ ಮಾರ್ಗದರ್ಶನ ನಿರ್ಲಕ್ಷ್ಯ ಸಲ್ಲದು – ಡಾಕ್ಟರ್ ತುಕಾರಾಮ ಪೂಜಾರಿ
ಅವಿಭಕ್ತ ಕುಟುಂಬ ಪದ್ಧತಿಯಲ್ಲಿ ನಾವು ಹಿರಿಯರಿಂದ ಕೇಳಿದ ಮತ್ತು ಪಡೆದ ಮಾಹಿತಿಯು ಈಗಲೂ ಮಾರ್ಗದರ್ಶಕವೆನಿಸುತ್ತದೆ. ಆದರೆ ಇಂದಿನ ಯುವಜನಾಂಗಕ್ಕೆ ತಾಳ್ಮೆಯ ಕೊರತೆ ಇದ್ದು ಹಿರಿಯರ ಸೂಚನೆಗಳನ್ನು ನಿರ್ಲಕ್ಷ್ಯ ಮಾಡಿ ಪ್ರತಿ ಹೆಜ್ಜೆಗೂ ಸಮಸ್ಯೆಗಳನ್ನು ಅನುಭವಿಸುವುದನ್ನು ಕಾಣುತ್ತೇವೆ. ಜ್ಞಾನ ಕೇಂದ್ರವಾದ ಹಿರಿಯರು ಗ್ರಂಥಾಲಯವಿದ್ದಂತೆ. ಅವರ ಮಾರ್ಗದರ್ಶನದ ನಿರ್ಲಕ್ಷ ಸಲ್ಲದು ಎಂದು ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಸ್ಥಾಪಕ ಡಾಕ್ಟರ್ ತುಕಾರಾಮ ಪೂಜಾರಿ ತಿಳಿಸಿದರು.
ಬಂಟ್ವಾಳದ ಸಂಚಯಗಿರಿಯಲ್ಲಿರುವ ಅಧ್ಯಯನ ಕೇಂದ್ರದಲ್ಲಿ ಜರಗಿದ ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ (ರಿ.) ಮೆಲ್ಕಾರ್ ಬಂಟ್ವಾಳ ಇದರ ಕೇಂದ್ರ ಸಮಿತಿಯ ಸಭೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರತಿಷ್ಠಾದ ಅಧ್ಯಕ್ಷ ಕಯ್ಯೂರು ನಾರಾಯಣ ಭಟ್ ಮಾತನಾಡಿ ಪ್ರತಿಷ್ಠಾನದ ವತಿಯಿಂದ ಸಹಕಾರಿ ಸಂಘದ ಸ್ಥಾಪನೆ, ಮೂರನೇ ವಾರ್ಷಿಕೋತ್ಸವ, ತಾಲೂಕು ಸಮಿತಿಗಳ ನವೀಕರಣ, ಕೇಂದ್ರ ಸಮಿತಿಯ ಸಭೆಯಲ್ಲಿ ಭಾಗವಹಿಸಲು ಪ್ರತಿನಿಧಿಗಳ ಆಯ್ಕೆ ಬಗ್ಗೆ ಮಾಹಿತಿ ನೀಡಿದರು.
ಡಾಕ್ಟರ್ ತುಕಾರಾಮ ಪೂಜಾರಿ ಅವರನ್ನು ಹಿರಿಯರ ಸೇವಾ ಪ್ರತಿಷ್ಠಾನದ ವತಿಯಿಂದ ಗೌರವಿಸಲಾಯಿತು. ಸದಸ್ಯರಾದ ಸೀತಾರಾಮ ಕೆ. ಸಾಲೆತ್ತೂರು ಅವರನ್ನು ಪ್ರತಿಷ್ಠಾನಕ್ಕೆ ನೀಡಿದ ಕೊಡುಗೆಗಾಗಿ ಗೌರವಿಸಲಾಯಿತು. ಅಧ್ಯಯನ ಕೇಂದ್ರದ ವಸ್ತು ಸಂಗ್ರಹಾಲಯದ ಬಗ್ಗೆ ಸಮಗ್ರ ಮಾಹಿತಿಯನ್ನು ಪ್ರತಿಷ್ಠಾನದ ಸದಸ್ಯರಿಗೆ ತುಕಾರಾಮ ಪೂಜಾರಿಯವರು ನೀಡಿದರು. ಬಂಟ್ವಾಳ ಘಟಕದ ಅಧ್ಯಕ್ಷ ಕಾಂತಾಡಿ ಸೀತಾರಾಮ ಶೆಟ್ಟಿ, ಪ್ರತಿಷ್ಠಾನದ ಪದಾಧಿಕಾರಿಗಳಾದ ಡಾಕ್ಟರ್ ಬಿ. ಯನ್. ಮಹಾಲಿಂಗ ಭಟ್, ಜಯರಾಮ ಪೂಜಾರಿ, ಗಣೇಶ್ ಭಟ್ ಕುತ್ರೋಟ್ಟು, ಸೀತಾರಾಮ ಶೆಟ್ಟಿ ಉಜಿರೆ, ಭವಾನಿ ಶಂಕರ ಶೆಟ್ಟಿ, ಪುತ್ತೂರು, ಚಂದ್ರಶೇಖರ ಆಳ್ವ ಪಡುಮಲೆ, ಪರಮೇಶ್ವರ ಎಂ. ಕೆ. ಉಜಿರೆ ಉಪಸ್ಥಿತರಿದ್ದರು. ರಾಮಕೃಷ್ಣ ನಾಯಕ್ ಕೋಕಳ ಪ್ರಾರ್ಥಿಸಿದರು. ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ ಪ್ರಸ್ತಾವನೆಗೈದರು. ಉಪಾಧ್ಯಕ್ಷ ಲೋಕೇಶ್ ಹೆಗ್ಡೆ ಪುತ್ತೂರು ಸ್ವಾಗತಿಸಿ ಎಂ. ಜಯರಾಮ ಭಂಡಾರಿ ಧರ್ಮಸ್ಥಳ ವಂದಿಸಿದರು. ಸಹ ಸಂಚಾಲಕ ಭಾಸ್ಕರ ಬಾರ್ಯ ಕಾರ್ಯಕ್ರಮ ನಿರೂಪಿಸಿದರು.