January 19, 2025
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಪಾವೂರು ಉಳಿಯ ದ್ವೀಪ ಪ್ರದೇಶಗಳಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ ವಿರುದ್ಧ ಸ್ಪೀಕರ್ ಸನ್ಮಾನ್ಯ ಯು.ಟಿ. ಖಾದರ್ ಹಾಗೂ ಜಿಲ್ಲಾಧಿಕಾರಿಯವರಿಗೆ ಕಥೊಲಿಕ್ ಸಭಾ ಸಂಘಟನೆಯಿಂದ ಮನವಿ

ಮಂಗಳೂರು : ಪಾವೂರು ಉಳಿಯ, ರಾಣಿಪುರ, ಉಳ್ಳಾಲ ಹೊಯಿಗೆ, ಮಳವೂರು, ಕೆಂಜಾರು ಮತ್ತು ಹರೇಕಳ ನದಿಯ ಪ್ರದೇಶಗಳಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ ವಿರುದ್ಧ ವಿಧಾನಸಭಾ ಸ್ಪೀಕರ್ ಸನ್ಮಾನ್ಯ ಯು.ಟಿ. ಖಾದರ್ ಹಾಗೂ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರಿಗೆ ಮಂಗಳೂರು ಧರ್ಮಕ್ಷೇತ್ರದ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಸಂಘಟನೆಯಿಂದ ಸಪ್ಟಂಬರ್ 30ರಂದು ಸೋಮವಾರ ಮನವಿ ಸಲ್ಲಿಸಲಾಯಿತು.

ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಇದರ ಕೇಂದ್ರಿಯ ಅಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್ ಇವರ ನಿಯೋಗವು ಮನವಿ ಸಲ್ಲಿಸಿದ್ದು ನದಿಯ ನಡುವೆ ಹೊಸತಾಗಿ ನಿರ್ಮಿಸಿದ ಅಣೆಕಟ್ಟಿನ ಬುಡದಲ್ಲಿ ಅಕ್ರಮವಾಗಿ ಮರಳು ತೆಗೆಯುದರಿಂದಾಗಿ ಅಣೆಕಟ್ಟು ಕುಸಿಯುವ ಸಾಧ್ಯತೆ ಇದ್ದು, ಇಲ್ಲಿನ ಚರ್ಚ್ ಹಾಗೂ ಮನೆಗಳು ಬೀಳುವ ಪರಿಸ್ಥಿತಿಯಿಂದಾಗಿ ಜನತೆ ಆತಂಕದಲ್ಲಿ ಬದುಕುತ್ತಿದ್ದಾರೆ ಎಂದು ತಿಳಿಸಲಾಗಿದೆ.

ಮನವಿ ಸ್ವೀಕರಿಸಿದ ಸ್ಪೀಕರ್ ಸನ್ಮಾನ್ಯ ಯು.ಟಿ. ಖಾದರ್ ಸಮಸ್ಯೆಯನ್ನು ಆಲಿಸಿ ಈ ಪ್ರದೇಶದ ಸಂಪೂರ್ಣ ಸರ್ವೆಯನ್ನು ನಡೆಸಿ ಅಕ್ರಮವಾಗಿ ಮರಳು ತೆಗೆಯುವ ದಂಧೆಯನ್ನು ನಿಷೇಧಿಸುವ ಭರವಸೆ ನೀಡಿದರು. ಪಾವೂರು ಉಳಿಯ ಪ್ರದೇಶಕ್ಕೆ ಅತೀ ಶೀಘ್ರದಲ್ಲಿ ತೂಗು ಸೇತುವೆಯನ್ನು ನಿರ್ಮಿಸುವುದಾಗಿ ತಿಳಿಸಿದರು.

ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿಯವರು ವಿಧಾನ ಪರಿಷತ್ ಚುನಾವಣೆ ಕಳೆದ ನಂತರ ಸ್ವತಃ ಈ ಪ್ರದೇಶಕ್ಕೆ ಭೇಟಿ ನೀಡಿ ಹೊಸ ಅಣೆಕಟ್ಟಿನ ಬುಡದಲ್ಲಿ ಪೋಲಿಸ್ ಇಲಾಖೆಯ ವತಿಯಿಂದ ಗಸ್ತು ಹಾಕಿ ಅಲ್ಲಿ ಮರಳು ತೆಗೆಯುವುದು, ಖಾಸಗಿ ಭೂಮಿಯಲ್ಲಿ ಮರಳು ದಾಸ್ತಾನು ಮಾಡುವುದನ್ನು ನಿಷೇಧಿಸಲಾಗುವುದು. ಈ ಪ್ರದೇಶಕ್ಕೆ ಟಿಪ್ಪರ್ ಹಾಗೂ ಹಿಟಾಚಿ ವಾಹನಗಳನ್ನು ಪ್ರವೇಶ ಮಾಡದಂತೆ ಅಲ್ಲಿ ಜೆಸಿಬಿ ಯಂತ್ರದ ಮೂಲಕ ಕಂದಕ ನಿರ್ಮಿಸುವುದು, ನದಿಯ ಮಧ್ಯಭಾಗದಲ್ಲಿ ಸಂಚಾರದ ದೋಣಿಗಳನ್ನು ಬಿಟ್ಟು ಇತರ ದೋಣಿಗಳನ್ನು ಮುಟ್ಟುಗೊಲು ಹಾಕುವುದು, ಅಕ್ರಮವಾಗಿ ನಿರ್ಮಿಸಿದ ಶೆಡ್ ಗಳನ್ನು ತೆರವುಗೊಳಿಸುವುದು, ಅಕ್ರಮವಾಗಿ ಮರಳು ತೆಗೆಯುವವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿ ಅಲ್ಲಿಯ ನಿವಾಸಿಗಳಿಗೆ ನ್ಯಾಯ ಒದಗಿಸಿ ಕೊಡುವ ಭರವಸೆಯನ್ನು ನೀಡಿದರು.

ಗುರುವಾರ ಅಕ್ಟೋಬರ್ 3 ರಂದು ಇದೇ ನಿಯೋಗವು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜರೊಂದಿಗೆ ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಹಾಗೂ ಗಣಿ ಮತ್ತು ಭೂ ವಿಜ್ಞಾನ ಸಚಿವರಾದ ಎಸ್.ಎಸ್. ಮಲ್ಲಿಕಾರ್ಜುನರವರನ್ನು ಭೇಟಿ ಮಾಡಿ ಮನವಿಯನ್ನು ಸಲ್ಲಿಸಲಾಗುವುದು ಎಂದು ಕಥೊಲಿಕ್ ಸಭಾ ಕೇಂದ್ರೀಯ ಅಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಇದರ ಮಾಜಿ ಅಧ್ಯಕ್ಷ ಪಾವ್ಲ್ ರೋಲ್ಪಿ ಡಿಕೊಸ್ತಾ, ಪೆಜಾರ್ ವಲಯ ಅಧ್ಯಕ್ಷ ಸಂತೋಷ್ ಡಿಸೋಜ ಬಜ್ಪೆ, ದಕ್ಷಿಣ ವಲಯ ಅಧ್ಯಕ್ಷ ಡೊಲ್ಫಿ ಡಿಸೋಜ ಪೆರ್ಮನ್ನೂರು, ಬಂಟ್ವಾಳ ವಲಯ ಅಧ್ಯಕ್ಷ ಜೋನ್ ಲಸ್ರಾದೊ ಹಾಗೂ ಕಾರ್ಯದರ್ಶಿ ಆಸ್ಟಿನ್ ಲೋಬೊ, ಕಾಸರಗೋಡು ವಲಯ ಅಧ್ಯಕ್ಷ ಫ್ರಾನ್ಸಿಸ್ ಮೊಂತೇರೊ ಮರಿಯಾಶ್ರಮ್, ಸಿಟಿ ವಲಯ ಅಧ್ಯಕ್ಷ ಅರುಣ್ ಡಿಸೋಜ, ಸ್ಟ್ಯಾನಿ ಬಂಟ್ವಾಳ, ಪಾವೂರು ಉಳಿಯ, ರಾಣಿಪುರ, ಉಳ್ಳಾಲ ಹೊಯಿಗೆ, ಮಳವೂರು ಮತ್ತು ಕೆಂಜಾರು ಹಾಗೂ ಹರೇಕಳ ಪ್ರದೇಶದ ಪ್ರಮುಖರು ಉಪಸ್ಥಿತರಿದ್ದರು.

You may also like

News

ಕನ್ನಡ ಭವನ ಜಿಲ್ಲಾಧ್ಯಕ್ಷರಾಗಿ ಎಸ್. ನಂಜುಂಡಯ್ಯ ಚಾಮರಾಜನಗರ ಆಯ್ಕೆ

ಕಾಸರಗೋಡು : ಸಂಘಟಕ, ಸಾಹಿತಿ ಶಿಕ್ಷಕ, ಸಾಹಿತ್ಯ ಪರಿಷತ್, ಜಾನಪದ ಪರಿಷತ್ ಮೊದಲಾಗಿ ಕರ್ನಾಟಕ ರಾಜ್ಯದ ಚಾಮರಾಜನಗರ ಜಿಲ್ಲೆಯ ಹೆಚ್ಚಿನ ಸಂಘ, ಸಂಸ್ಥೆಗಳಲ್ಲಿ ಪದಾಧಿಕಾರಿಯಾಗಿ ಸಕ್ರಿಯರಾಗಿರುವ ಎಸ್.
News

ಕಾಜೂರು ಉರೂಸ್ ಪ್ರಯುಕ್ತ ಕಾನೂನು ಸುವ್ಯವಸ್ಥೆ ಬಗ್ಗೆ ಪೊಲೀಸ್ ಅಧಿಕಾರಿಗಳ ಜೊತೆ ಸಭೆ

ಬೆಳ್ತಂಗಡಿ ಇತಿಹಾಸ ಪ್ರಸಿದ್ಧ ಧಾರ್ಮಿಕ ಸಮನ್ವಯ ಕೇಂದ್ರ, ದಕ್ಷಿಣ ಭಾರತದ ಅಜ್ಮೀರ್ ಎಂದೇ ಪ್ರಸಿದ್ಧಿ ಪಡೆದಿರುವ ಕಾಜೂರು ಮಖಾಂ ಶರೀಫ್ ನಲ್ಲಿ ಈ‌ ವರ್ಷದ ಉರೂಸ್ ಮಹಾ

You cannot copy content of this page