ಅಕ್ಟೋಬರ್ 26 ಮತ್ತು 27 ರಂದು ಗೋವಾದ ಮಡ್ಗಾಂವ್ ರವೀಂದ್ರಭವನದಲ್ಲಿ ಅಖಿಲ ಭಾರತ ಕೊಂಕಣಿ ಪರಿಷದ್ನ 33ನೇ ಅಧಿವೇಶನ

ಅಖಿಲ ಭಾರತ ಕೊಂಕಣಿ ಪರಿಷದ್ನ 33ನೇ ಅಧಿವೇಶನ ಗೋವಾದ ಮಡ್ಗಾಂವ್ ರವೀಂದ್ರಭವನದಲ್ಲಿ ಅಕ್ಟೋಬರ್ 26 ಮತ್ತು 27 ರಂದು ನಡೆಯಲಿದೆ. ಈ ಎರಡು ದಿನಗಳ ಕಾರ್ಯಕ್ರಮವನ್ನು ಅಕ್ಟೋಬರ್ 26ರ ಬೆಳಗ್ಗೆ ಹಿರಿಯ ಬರಹಗಾರ ಮತ್ತು ಭಾಷಾ ವಿದ್ವಾಂಸರಾದ ಡಾ. ಗಣೇಶ ದೇವಿ ಉದ್ಘಾಟಿಸಲಿದ್ದಾರೆ. ಪರಿಷದ್ನಲ್ಲಿ ಕೊಂಕಣಿ ಶಿಕ್ಷಣ, ಭಾಷೆಯ ಅಭಿವೃದ್ಧಿಯಲ್ಲಿ ತಂತ್ರಜ್ಞಾನದ ಬಳಕೆ ಇತ್ಯಾದಿಗಳನ್ನು ಒಳಗೊಂಡ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಯಲಿದೆ. ಪರಿಷದಿಗೆ ಕರ್ನಾಟಕ, ಕೇರಳ, ಮಹಾರಾಷ್ಟ್ರ ಮತ್ತು ಗೋವಾದಿಂದ ಪ್ರತಿನಿಧಿಗಳು ಹಾಜರಾಗಲಿದ್ದಾರೆ. ರೆ। ಮೌಝಿನೋ ಅರ್ತಾಡೆ ಅವರು ಪರಿಷದಿನ ಅಧ್ಯಕ್ಷರಾಗಿ ನಾಮನಿರ್ದೇಶನಗೊಂಡಿದ್ದು, ಎರಡು ವರ್ಷಗಳ ಕಾಲ ಈ ಹುದ್ದೆಯನ್ನು ಹೊಂದಿರುತ್ತಾರೆ. ಕೊಂಕಣಿ ಭಾಷಾ ಮಂಡಳದ ಮಾಜಿ ಅಧ್ಯಕ್ಷ ಪ್ರಶಾಂತ್ ನಾಯಕ್ ಅವರು ಸ್ವಾಗತ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಅನಂತ ಅಗ್ನಿ, ಮಂಗಲ್ದಾಸ್ ಭಟ್ ಅವರು ಸಂಘಟನಾ ಸಮಿತಿಯ ಕಾರ್ಯಾಧ್ಯಕ್ಷ ಮತ್ತು ಕಾರ್ಯದರ್ಶಿಯಾಗಿದ್ದಾರೆ.
ಪರಿಷದಿನ ಕಾರ್ಯಾಧ್ಯಕ್ಷ ಚೇತನ್ ಅಚಾರ್ಯ, ಪ್ರಶಾಂತ್ ನಾಯಕ್ ಮತ್ತು ಸುದೀನ್ ಲೊಲಿಯೇಕರ್ ಅವರನ್ನು ಒಳಗೊಂಡ ಪ್ರತಿನಿಧಿಗಳು ಪರಿಷದಿಗೆ ಪ್ರತಿನಿಧಿಗಳನ್ನು ಆರಿಸುವ ಸಲುವಾಗಿ ಕರ್ನಾಟಕ ಮತ್ತು ಕೇರಳ ರಾಜ್ಯಗಳಿಗೆ ಪ್ರವಾಸ ಕೈಗೊಂಡಿದ್ದಾರೆ.
1939ರಲ್ಲಿ ಸ್ವರ್ಗೀಯ ಮಾಧವ ಮಂಜುನಾಥ ಶಾನುಭಾಗ್ ಅವರು ಸ್ಥಾಪಿಸಿದ ಪರಿಷದ್ ಕೊಂಕಣಿ ಭಾಷೆ ಮತ್ತು ಅದರ ಜನರ ಅಭಿವೃದ್ಧಿಯತ್ತ ಕಾರ್ಯನಿರ್ವಹಿಸುತ್ತಿದೆ. ಆಯೋಜಕರು ಕರ್ನಾಟಕದ ಕೊಂಕಣಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪರಿಷದಿಗೆ ಹಾಜರಾಗುವಂತೆ ಮನವಿ ಮಾಡಿದ್ದಾರೆ. ಪತ್ರಿಕಾಗೋಷ್ಠಿಯನ್ನು ಪರಿಷದಿನ ಕಾರ್ಯಾಧ್ಯಕ್ಷ ಚೇತನ್ ಅಚಾರ್ಯ ಮತ್ತು ಸ್ವಾಗತ ಸಮಿತಿಯ ಅಧ್ಯಕ್ಷ ಪ್ರಶಾಂತ್ ನಾಯಕ್ ಅವರು ನಡೆಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಪ್ರಶಾಂತ್ ನಾಯಕ್ – ಅಧ್ಯಕ್ಷರು, ಸ್ವಾಗತ ಸಮಿತಿ, ಅಖಿಲ ಭಾರತ ಕೊಂಕಣಿ ಪರಿಷದ್, ಚೇತನ್ ಅಚಾರ್ಯ – ಕಾರ್ಯಾಧ್ಯಕ್ಷರು, ಅಖಿಲ ಭಾರತ ಕೊಂಕಣಿ ಪರಿಷದ್, ಡಾ| ಕಸ್ತೂರಿ ಮೋಹನ್ ಪೈ, ಎಚ್. ಎಮ್. ಪೆರ್ನಾಲ್, ಟೈಟಸ್ ನೊರೊನ್ಹಾ ಮತ್ತು ಮೆಲ್ವಿನ್ ರೊಡ್ರಿಗಸ್ ಹಾಜರಿದ್ದರು.