April 21, 2025
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಬಂಟ್ವಾಳ ತಾಲೂಕು 23ನೇ ಕನ್ನಡ ಸಾಹಿತ್ಯ ಸಮ್ಮೇಳನ ಸ್ವಾಗತ ಸಮಿತಿಯ ಘೋಷಣೆ ಹಾಗೂ ಲಾಂಛನ ಅನಾವರಣ ಕಾರ್ಯಕ್ರಮ

ಬಂಟ್ವಾಳ  : ಬಂಟ್ವಾಳ ತಾಲೂಕು 23ನೇ ಕನ್ನಡ ಸಾಹಿತ್ಯ ಸಮ್ಮೇಳನ ಸ್ವಾಗತ ಸಮಿತಿಯ ಘೋಷಣೆ ಹಾಗೂ ಲಾಂಛನ ಅನಾವರಣ ಕಾರ್ಯಕ್ರಮ ಮಂಚಿ ಕೊಳ್ನಾಡು ಸರ್ಕಾರಿ ಪ್ರೌಢಶಾಲೆಯಲ್ಲಿ   ನಡೆಯಿತು. ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿಶ್ವನಾಥ ಬಂಟ್ವಾಳ ಇವರು ಸಮಿತಿಯ ಪದಾಧಿಕಾರಿಗಳ ಮಾಹಿತಿ ಪತ್ರದ ಬಿಡುಗಡೆ ಮಾಡುವುದರ ಮೂಲಕ ಸ್ವಾಗತ ಸಮಿತಿಯ ಅಧಿಕೃತ ಘೋಷಣೆ ಮಾಡಿದರು. ಇದೇ ಸಂದರ್ಭದಲ್ಲಿ ಮಂಚಿಯಲ್ಲಿ ನಡೆಯಲಿರುವ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ಅನಾವರಣಗೊಳಿಸಲಾಯಿತು.

ಕಳೆದ ಬಾರಿ ಅಮ್ಮುಂಜೆಯಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಪ್ರಧಾನ ಸಂಚಾಲಕ ಅಬೂಬಕ್ಕರ್ ಅಮ್ಮುಂಜೆ ಮಾತನಾಡಿ “ಸಾಹಿತ್ಯ ಸಮ್ಮೇಳನದ ಆಯೋಜನೆ ಎನ್ನುವುದು ಜೇನು ಸಂಗ್ರಹಿಸುವ ಕಾರ್ಯದಂತೆ. ಯಶಸ್ವಿಯಾದರೆ ಎಲ್ಲರಿಗೂ ಜೇನು ಹಂಚಿದಂತೆ. ಕೆಲವೊಮ್ಮೆ ಒಂದೆರಡು ಜೇನಿನ ದಾಳಿಯ ನೋವನ್ನು ಅನುಭವಿಸಲು ಸಿದ್ಧರಾಗಿರಬೇಕು. ಒಟ್ಟಾಗಿ ಒಂದು ಶಿಕ್ಷಣದ ಅಥವಾ ಅನುಭವದ ಪಾಠ ನಮಗೆ ಸಿಗುವುದು” ಎಂದರು.

ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷ ಲಯನ್ ಸತೀಶ್ ಕುಮಾರ್ ಆಳ್ವ ಇರಾ ಬಾಳಿಕೆ ಮಾತನಾಡಿ, “ಕನ್ನಡ ಭಾಷೆಯ ಉಳಿವಿಗೆ ಇದೊಂದು ಉತ್ತಮ ಅವಕಾಶ. ಕನ್ನಡ ಭಾಷೆಯ ಕೃಷಿಗೆ ಈ ಸಮ್ಮೇಳನದ ಮೂಲಕ ಇನ್ನಷ್ಟು ಉತ್ತೇಜನ ಸಿಗುವಂತಾಗಲಿ. ಸಾಕಷ್ಟು ಸಾಹಿತಿಗಳನ್ನು ಕೊಡುಗೆಯಾಗಿ ನೀಡಿರುವ ಮಂಚಿಗೆ 23ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆಯೋಜನೆ ಮಾಡಲು ಮಂಚಿ – ಕೊಳ್ನಾಡು ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ಮೂಲಕ ಅವಕಾಶ ನೀಡಿರುವುದು ನಮಗೆ ಹೆಮ್ಮೆಯಾಗಿದೆ.” ಎಂದರು. ಸಂಕಪ್ಪ ಶೆಟ್ಟಿ, ಸರಪಾಡಿ ಅಶೋಕ್ ಕುಮಾರ್ ಶೆಟ್ಟಿ ತಮ್ಮ ಅನುಭವದ ಮಾತುಗಳನ್ನಾಡಿದರು.  ಸಮಿತಿ ಆಯೋಜನೆ ಮಾಡಿದ ಸಭೆಯಲ್ಲಿ ಸಾಹಿತ್ಯಾಭಿಮಾನಿಗಳು, ತಾಲೂಕು ಘಟಕದ ಪದಾಧಿಕಾರಿಗಳು, ಸ್ವಾಗತ ಸಮಿತಿಯ ಪದಾಧಿಕಾರಿಗಳು, ಮಂಚಿ ಕೊಳ್ನಾಡು ಪ್ರೌಢಶಾಲಾ ಮುಖ್ಯ ಶಿಕ್ಷಕಿ ಸುಶೀಲಾ ವಿಟ್ಲ ಹಾಗೂ ಪ್ರೌಢ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಬಾಲಕೃಷ್ಣ ಸೆರ್ಕಳ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸಮಿತಿ ಎಲ್ಲಾ ಸಂಚಾಲಕರಿಗೆ ಸ್ವಾಗತ ಸಮಿತಿಯ ಮಾಹಿತಿ ಪತ್ರವನ್ನು ನೀಡುವ ಮೂಲಕ ಗುರುತಿಸಲಾಯಿತು. ಸಮಿತಿಯ ಪದಾಧಿಕಾರಿಗಳ ಮಾಹಿತಿ ಹಾಗೂ ಜವಾಬ್ದಾರಿಯ ಕುರಿತಾಗಿ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಉಪನ್ಯಾಸಕ ಎಂ. ಡಿ. ಮಂಚಿ ಇವರು ಮಾಹಿತಿ ನೀಡಿದರು. ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರು ಹಾಗೂ ಸ್ವಾಗತ ಸಮಿತಿಯ ಪ್ರಧಾನ ಸಂಯೋಜಕ ರಾಮ್ ಪ್ರಸಾದ್ ರೈ ತಿರುವಾಜೆ ಸ್ವಾಗತಿಸಿದರು. ತಾಲೂಕು ಘಟಕದ ಗೌರವ ಕಾರ್ಯದರ್ಶಿ ಲಯನ್ ರಮಾನಂದ ನೂಜಿಪ್ಪಾಡಿ ವಂದಿಸಿದರು. ಶಿಕ್ಷಕ ಹರಿಪ್ರಸಾದ್ ಕುಲಾಲ್ ನಾರ್ಶ ಕಾರ್ಯಕ್ರಮ ನಿರ್ವಹಿಸಿದರು.

You may also like

News

MLC ಐವನ್ ಡಿಸೋಜ ಹಾಗೂ ಕಥೊಲಿಕ್ ಸಭಾ ಕೇಂದ್ರಿಯ ಅಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್ ರವರಿಂದ ಬಿಷಪ್ಸ್ ಹೌಸ್ ನಲ್ಲಿ ಪೋಪ್ ರವರಿಗೆ ಅಂತಿಮ ನಮನ

ಕ್ರಿಶ್ಚಿಯನ್ನರ ಪರಮೋಚ್ಚ ಜಗದ್ಗುರು ಪೋಪ್ ಫ್ರಾನ್ಸಿಸ್ ರವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಇಂದು ಎಪ್ರಿಲ್ 21ರಂದು ಸೋಮವಾರ ಮಂಗಳೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾ| ಪೀಟರ್
News

ಜಗದ್ಗುರು ಪೋಪ್ ಫ್ರಾನ್ಸಿಸ್ ಇನ್ನಿಲ್ಲ

ಲ್ಯಾಟಿನ್ ಅಮೆರಿಕದ ಮೊದಲ ಪೋಪ್ ಮತ್ತು ಆಧುನಿಕ ರೋಮನ್ ಕ್ಯಾಥೋಲಿಕ್ ಚರ್ಚ್‌ನಲ್ಲಿ ಪರಿವರ್ತನಾಶೀಲ ವ್ಯಕ್ತಿಯಾಗಿದ್ದ ಜಗದ್ಗುರು ಪೋಪ್ ಫ್ರಾನ್ಸಿಸ್ ಇಂದು ಏಪ್ರಿಲ್ 21ರಂದು ಸೋಮವಾರ ತಮ್ಮ 88

You cannot copy content of this page